ಕನ್ನಡಪ್ರಭ ವಾರ್ತೆ ಕಡೂರು
ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ದೊರೆತಲ್ಲಿ ಭವಿಷ್ಯದಲ್ಲಿ ಆರೋಗ್ಯ ಸ್ಥಿರವಾಗಿರುತ್ತದೆ ಎಂದು ಕಡೂರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಗಣೇಹಳ್ಳಿ ಮತ್ತು ದೊಡ್ಡಪಟ್ಟಣಗೆರೆ ಗ್ರಾಮಪಂಚಾಯಿತಿ ಸಹಯೋಗದಲ್ಲಿ ತಾಲೂಕಿನ ಎರೇ ಹಳ್ಳಿಯಲ್ಲಿ ಏರ್ಪಡಿಸಿದ್ದ ಪೋಷಣ್ ಅಭಿಯಾನ್ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಜನಿಸಿದ ನಂತರ ಮುಂದಿನ 1000 ದಿನಗಳು ಬಹು ಮುಖ್ಯವಾದದ್ದು.ಆ ಅವಧಿಯಲ್ಲಿ ಮಕ್ಕಳಿಗೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಜವಾಬ್ದಾರಿಯುತವಾಗಿ ನೀಡಬೇಕು. ಅದಕ್ಕೂ ಮುನ್ನ ಗರ್ಭಿಣಿಯರಿಗೆ ನಿಯಮಿತವಾಗಿ ಆರೋಗ್ಯ ಪರೀಕ್ಷೆ ಹಾಗೂ ಅಗತ್ಯ ಪೋಷಕಾಂಶ ದೊರಕಿಸಿಕೊಡಬೇಕು. ಹೆರಿಗೆಯಾದ ನಂತರ ಮಗುವಿನ ಆರೋಗ್ಯದ ಜೊತೆ ತಾಯಿ ಆರೋಗ್ಯಕ್ಕೂ ಗಮನ ಕೊಡುವುದು ಕಡ್ಡಾಯ. ಗ್ರಾಮೀಣ ಭಾಗದಲ್ಲಿ ಈ ಕ್ರಮಗಳನ್ನು ಕೈಗೊಳ್ಳುವುದು ಕಷ್ಟಸಾಧ್ಯವಾದ್ದರಿಂದ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ರಾಷ್ಟ್ರೀಯ ಪೋಷಣ್ ಅಭಿಯಾನ ವೆಂಬ ಕಾರ್ಯಕ್ರಮ ಕೈಗೊಂಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಮಹತ್ವದ ಕಾರ್ಯಕ್ಕೆ ಅ.18 ರಂದು ಚಾಲನೆ ನೀಡಿದ್ದಾರೆ. ಈ ಯೋಜನೆಗೆ ರಾಜ್ಯ ಸರ್ಕಾರವೂ ಸಹಯೋಗ ನೀಡಿದೆ. ಚಿಕ್ಕ ಮಕ್ಕಳುಳ್ಳ ಪೋಷಕರು ಈ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು. ಯೋಜನೆ ಅನುಷ್ಠಾನಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರು ಬಹಳಷ್ಟು ಶ್ರಮ ವಹಿಸಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಅಂಗನವಾಡಿ ಮೇಲ್ವಿಚಾರಕಿ ಕೆ.ಮುಬಿನಾ ಮಾತನಾಡಿ, ಮಕ್ಕಳ ಸುರಕ್ಷತೆ ಬಗ್ಗೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಬಾಲ್ಯವಿವಾಹ ಮುಂತಾದವುಗಳನ್ನು ತಡೆಯಲು ಕಾನೂನು ರೂಪಿಸಿದೆ. ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವ ಮೊದಲೆ ಮದುವೆ ಮಾಡುವುದು ಅಪರಾಧ. ಈ ತಪ್ಪಿಗೆ ₹1 ಲಕ್ಷ ದಂಡ ಹಾಗೂ ಎರಡು ವರ್ಷ ಜೈಲು ಶಿಕ್ಷೆ ನೀಡುವ ಅವಕಾಶವಿದೆ. ಹೀಗಾಗಿ ಎಲ್ಲರೂ ಈ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಜಿಗಣೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುನಂದಾ ನೀಲಕಂಠಪ್ಪ, ಆರೋಗ್ಯ ಇಲಾಖೆ ಭಾರತಿ, ಯೋಗೀಶ್, ಮಂಜುಳಾ, ಸುಮಾ, ಶಾರದಮ್ಮ,ಶಾಂತಮ್ಮ,ಗೌರಮ್ಮ,ಗ್ರಾಮಪಂಚಾಯಿತಿಗಳ ಸದಸ್ಯರು, ಆಶಾ ಕಾರ್ಯಕರ್ತೆಯರು ಇದ್ದರು.25ಕೆಕೆಡಿಯು2ಕಡೂರು ತಾಲೂಕಿನ ಎರೇ ಹಳ್ಳಿಯಲ್ಲಿ ಏರ್ಪಡಿಸಿದ್ದ ಪೋಷಣ್ ಅಭಿಯಾನ್ ಕಾರ್ಯಕ್ರಮವನ್ನು ಕಡೂರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಉದ್ಘಾಟಿಸಿದರು.