ಮಕ್ಕಳ ಹಕ್ಕುಗಳ ಸಂಸತ್ ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನಾ ಸಭೆ

KannadaprabhaNewsNetwork |  
Published : Nov 07, 2025, 03:00 AM IST
ಮಕ್ಕಳ ಹಕ್ಕುಗಳ ಸಂಸತ್ ೨೦೨೫ ಜಿಲಾ ಮಟ್ಟದ ಮಕ್ಕಳ ಸಮಾಲೋಚನಾ ಸಭೆ | Kannada Prabha

ಸಾರಾಂಶ

ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನಾ ಸಭೆ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಯುನಿಸೆಫ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಮತ್ತು ನಾವು ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ಸಂಸತ್ 2025 ಜಿಲ್ಲಾ ಮಟ್ಟದ ಮಕ್ಕಳ ಸಮಾಲೋಚನಾ ಸಭೆ ಸೋಮವಾರ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಬಿಇಓ ಕೃಷ್ಣಪ್ಪ ಉದ್ಘಾಟಿಸಿದರು. ನಂತರ ಮಾತನಾಡಿ, ಮಕ್ಕಳ ಹಕ್ಕಿನ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಪ್ರಪಂಚದ ಸಮಸ್ಯೆಯಾಗಿದೆ. ಪ್ರಪಂಚದಾದ್ಯಂತ ಮಕ್ಕಳಲ್ಲಿ ತಮ್ಮ ಹಕ್ಕುಗಳ ಅರಿವಿನ ಕೊರತೆಯಿದ್ದು, ಪ್ರತಿನಿತ್ಯ ಮಕ್ಕಳ ಶೋಷಣೆಗಳು ನಡೆಯುತ್ತಿದೆ. ಅದು ಮೊದಲು ಮನೆಯಿಂದಲೇ ಪ್ರಾರಂಭವಾಗುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲೆಡೆ ಹಕ್ಕುಗಳ ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.ಸಾಕಷ್ಟು ಸ್ಥಳಗಳಲ್ಲಿ ವಿದ್ಯಾರ್ಥಿಗಳನ್ನು ಡ್ರಗ್ಸ್ ನಂತರ ದುಶ್ಚಟಗಳಿಗೆ ದೂಡುವ ಮೂಲಕ, ಅವರ ಶೋಷಣೆಗಳು ನಡೆಯುತ್ತಿವೆ. ಪೋಷಕರು, ಶಿಕ್ಷಕರು ಸೇರಿದಂತೆ ಸಮಾಜ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಶಿಕ್ಷಣ ಇಂದು ಪ್ರತಿಯೊಬ್ಬ ಮಕ್ಕಳ ಮೂಲಭೂತ ಹಕ್ಕಾಗಿದೆ. ಉದ್ಯೋಗಕ್ಕಾಗಿ ಶಿಕ್ಷಣ ಪಡೆಯದೆ, ತಮ್ಮ ಜ್ಞಾನಾರ್ಜನೆಗಾಗಿ ಶಿಕ್ಷಣ ಪಡೆಯಬೇಕು. ಜನ ಸಾಮಾನ್ಯರು ಶಿಕ್ಷಣದಿಂದ ವಂಚಿರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಹಾಲು, ಪೌಷ್ಠಿಕ ಆಹಾರ, ಔಷಧಿಗಳು ಸೇರಿದಂತೆ ಸಾಕಷ್ಟು ಸವಲತ್ತುಗಳನ್ನು ಸರ್ಕಾರಿ ಶಾಲೆಗಳ ಮೂಲಕ ನೀಡುತ್ತಿದ್ದು, ಎಲ್ಲರೂ ಬಳಸಿಕೊಳ್ಳಬೇಕು ಎಂದರು. ಕೆಸಿಆರ್‌ಒ ಜಿಲ್ಲಾ ಸಂಯೋಜಕಿ ಹಾಗೂ ನಾವು ಪ್ರತಿಷ್ಠಾನದ ಕಾರ್ಯನಿರ್ವಹಕ ನಿರ್ದೇಶಕಿ ಸುಮನ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಜಗತ್ತಿನ ಎಲ್ಲ ರಾಷ್ಟ್ರಗಳು ಬದ್ಧವಾಗಿವೆ. ಮಕ್ಕಳ ಬದುಕು, ರಕ್ಷಣೆ, ವಿಕಾಸ ಮತ್ತು ಭಾಗವಹಿಸುವಿಕೆಯನ್ನು ಗೌರವಿಸಿ, ಸರ್ಕಾರ, ಸಮಾಜ ಮತ್ತು ವಯಸ್ಕರೆಲ್ಲರೂ ಅನುಸರಿಸುವುದರೊಂದಿಗೆ ಜಾರಿಮಾಡಬೇಕು. ಮಗು ತನ್ನ ತಾಯಿಯ ಗರ್ಭದಲ್ಲಿರುವಾಗಲೇ ತನ್ನ ಹಕ್ಕುಗಳನ್ನು ಪಡೆದುಕೊಳ್ಳುತ್ತದೆ. ಮಕ್ಕಳ ಹಕ್ಕುಗಳ ಉಲ್ಲಂಘನೆ ಆದಲ್ಲಿ, ಆ ಕುರಿತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಚನೆಯಾಗಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಬೇಕೆಂದರು.ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ 16 ಶಾಲೆಗಳ 32 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು. ಇದೇ ಸಂದರ್ಭ ರಾಜ್ಯದ ಬೆಂಗಳೂರಿನಲ್ಲಿ ನಡೆಯುವ ವಿದ್ಯಾರ್ಥಿ ಸಂಸತ್ತು ಕಾರ್ಯಕ್ರಮಕ್ಕೆ ಹಂಡ್ಲಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ. ಸೃಷ್ಟಿ ಹಾಗೂ ಶಿರಂಗಾಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಣಯ್ ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳೇ ಆಯ್ಕೆ ಮಾಡಿದರು.ವೇದಿಕೆಯಲ್ಲಿ ಪಡವಲಹಿಪ್ಪೆ ಎಚ್.ಡಿ. ದೇವೇಗೌಡ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಂಜೀವ್‌ಕುಮಾರ್, ನಾವು ಪ್ರತಿಷ್ಠಾನದ ಸ್ಥಾಪಕ ಗೌತಮ್ ಕಿರಗಂದೂರು, ನಿವೃತ್ತ ಉಪನ್ಯಾಸಕಿ ತಿಲೋತ್ತಮೆ ನಂದಕುಮಾರ್, ಮಹಿಳಾ ಸಹಕಾರ ಸಮಾಜದ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಇದ್ದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ