ಶಿರಹಟ್ಟಿ: ಕಳೆದ ೩ವರ್ಷಗಳಿಂದ ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ನಿತ್ಯ ಬಿಸಿಯೂಟ ತಯಾರಿಸಲು ನೀರಿಲ್ಲ.ಮನೆಯಿಂದಲೇ ನಿತ್ಯ ನೀರು ತೆಗೆದುಕೊಂಡು ಹೋಗಬೇಕು. ಶಾಲೆಯಲ್ಲಿದ್ದ ಕೊಳವೆ ಬಾವಿ ನೀರು ಕೂಡ ಸರಿಯಾಗಿ ಬರುತ್ತಿಲ್ಲ.ಅಧಿಕಾರಿಗಳ ಗಮನಕ್ಕೆ ತಂದರೆ ಸ್ಪಂದಿಸುತ್ತಿಲ್ಲ. ಸಮರ್ಪಕ ನೀರು ಪೂರೈಸುವಂತೆ ಆಗ್ರಹಿಸಿ ಶನಿವಾರ ತರಗತಿ ಬಿಟ್ಟು ಮಕ್ಕಳು ಮತ್ತು ಶಾಲಾ ಸಿಬ್ಬಂದಿ ಪ್ರತಿಭಟನೆ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.
ವ್ಯವಸ್ಥಿತ ಸೌಕರ್ಯಗಳಿಲ್ಲದೇ ಶಿಕ್ಷಣ ಪಡೆಯುವದು ದುಸ್ಥರವಾಗಿದೆ. ಸರ್ಕಾರ ಸಾಕಷ್ಟು ಅವಕಾಶ ಅನುಕೂಲ ಕಲ್ಪಿಸಿದರೂ ಮಕ್ಕಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿಷ್ಕಾಳಜಿಯಿಂದ ಸೌಲಭ್ಯಗಳಿಂದ ವಂಚಿತರಾಗಿದ್ದು, ನಿತ್ಯ ಮಕ್ಕಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಶಾಲೆ ಎಂದರೆ ಮೂಗು ತುರಿಸುತ್ತಿರುವ ಇಂದಿನ ದಿನಮಾನಗಳಲ್ಲಿ ೧ ರಿಂದ ೭ನೇ ತರಗತಿವರೆಗೆ ೪೫೦ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಹೊಂದಿರುವ ಈ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲ ಎಂದರೆ ನಾಚಿಕೆಯಾಗುತ್ತಿದೆ ಎಂದರು.
ಅಧಿಕಾರಿಗಳ ಬೇಜವಾಬ್ದಾರಿ,ಅಸಡ್ಡೆ ಮನೋಭಾವನೆಯಿಂದ ಇತಿಹಾಸ ಪ್ರಸಿದ್ಧ ಮೇಗೇರಿ ಸರ್ಕಾರಿ ಶಾಲೆ ಇಂದು ಅಧೋಗತಿಯಲ್ಲಿ ಸಾಗಿದೆ. ಸರ್ಕಾರ ಏನೆಲ್ಲ ಅನುಕೂಲತೆ ಒದಗಿಸಿದರೂ ಈ ಶಾಲೆಯ ಮಕ್ಕಳಿಗೆ ತಲುಪುತ್ತಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳ ವರ್ತನೆ ಹೀಗೆ ಮುಂದುವರೆದರೆ ಶಾಲೆಗೆ ಬೀಗ ಬೀಳುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇತಿಹಾಸದಲ್ಲಿ ಮೊದಲ ಬಾರಿ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಕ್ಕಳು ಮನವಿ ಸಲ್ಲಿಸಿದ ಮೊದಲ ಪ್ರಕರಣ ಇದಾಗಿದ್ದು, ತಾಪಂ ಹಾಗೂ ತಾಲೂಕಾಡಳಿತ ಈ ವಿಷಯದಲ್ಲಿ ಸಂಪೂರ್ಣ ವಿಫಲಗೊಂಡಿದೆ ಎಂಬುದು ಜನಾಕ್ರೋಶವಾಗಿದೆ.
ತಾಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಂದ ತಪ್ಪು ಸಂದೇಶ ನೀಡಿರುವದು ಅಕ್ಷಮ್ಯ ಅಪರಾಧ. ಅಧಿಕಾರಿಗಳ ತಪ್ಪು ಮಾಹಿತಿಯಿಂದ ಮಕ್ಕಳು ಸಂಕಷ್ಟಪಡುವಂತಹ ಸ್ಥಿತಿ ಬಂದೊದಗಿದೆ. ತಕ್ಷಣ ನಮ್ಮ ನ್ಯಾಯುತ ಬೇಡಿಕೆ ಈಡೇರಿಸದೇ ಇದ್ದಲ್ಲಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಉಗ್ರ ಹೋರಾಟ ಮಾಡುವದಾಗಿ ಮಕ್ಕಳು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮೇಗೇರಿ ಶಾಲೆಯ ಮಕ್ಕಳು ಸುಮಾರು ಒಂದು ಕಿಮೀ ವರೆಗೆ ನಡೆದುಕೊಂಡು ಬಂದು ರಸ್ತೆಯುದ್ದಕ್ಕೂ ಕುಡಿಯುವ ನೀರು ಮತ್ತು ಮೂಲಭೂತ ಸೌಲಭ್ಯಕ್ಕಾಗಿ ಘೋಷಣೆ ಕೂಗುತ್ತಾ ಅಧಿಕಾರಿಗಳ ನಡೆ ಬಗ್ಗೆ ಆಕ್ರೋಶ ಹೊರ ಹಾಕುತ್ತಾ ತಹಸೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿ ತಹಸೀಲ್ದಾರ ಅನುಪಸ್ಥಿತಿಯಲ್ಲಿ ಶಿರಸ್ತೇದಾರಗೆ ಮನವಿ ಸಲ್ಲಿಸಿದರು.