ಕನ್ನಡಪ್ರಭ ವಾರ್ತೆ ಪಾಂಡವಪುರ
ಸರ್ಕಾರಿ ಶಾಲೆಯಲ್ಲಿ ಮಕ್ಕಳು ಓದುವಂತೆ ಹುರಿದುಂಬಿಸುವ ಕೆಲಸ ಆಗಬೇಕು ಎಂದು ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ ಮಹೇಶ್ ಸುಖಧರೆ ಹೇಳಿದರು.ಪಟ್ಟಣದ ಪಿಇಎಸ್ ಬಾಲಕಿಯರ ಕಾಲೇಜಿನ ಸಭಾಂಗಣದಲ್ಲಿ ಬೇಸಿಗೆ ಶಿಬಿರ ಕಲರವ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನಾನು ಕಲಾವಿದನಾಗಬೇಕಿತ್ತು. ಆದರೆ, ನಿರ್ದೇಶಕನಾಗಿ ಸಂಭ್ರಮ, ಸೈನಿಕ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಚಿತ್ರರಂಗದಲ್ಲಿ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರ ಜತೆ ಕೆಲಸ ಮಾಡಿದ್ದೇನೆ. ಇದೀಗ ಜೀ ಕನ್ನಡದಲ್ಲಿ ನನ್ನ ನಿರ್ದೇಶನದ ರಾಘವೇಂದ್ರ ಮಹಾತ್ಮೆ ಬರುತ್ತಿದೆ ಎಂದರು.
ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಮಾತನಾಡಿ, ಕಲೆ ಮತ್ತು ಸಂಸ್ಕೃತಿ ಬೆಳೆಸುವ ಜತೆಗೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳಿಗೆ ಧೈರ್ಯ, ಆತ್ಮವಿಶ್ವಾಸ ಬೇಕಿದೆ. ಕೀಳರಿಮೆ ಬಿಟ್ಟು ಧೈರ್ಯ ಇದ್ದರೆ ಮಕ್ಕಳು ಏನಾದರೂ ಸಾಧನೆ ಮಾಡುತ್ತಾರೆ ಎಂದು ಹೇಳಿದರು.ಮಕ್ಕಳಿಗೆ ಅಂಕವೇ ಮುಖ್ಯವಲ್ಲ. ಅಂಕಗಳಿಕೆ ಕೇವಲ ಉದ್ಯೋಗಕ್ಕಷ್ಟೆ. ಎರಡನೇ ದರ್ಜೆಯಲ್ಲಿ ಪಾಸಾದವರು ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ. ಪಿಯುಸಿ ಫೇಲಾದವರು ಐಎಎಸ್ ಅಧಿಕಾರಿಯಾಗಿದ್ದಾರೆ, ವಿಜ್ಞಾನಿಗಳಾಗಿದ್ದಾರೆ. ಈ ರಾಷ್ಟ್ರದ ನಾಯಕರಾಗಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಮಕ್ಕಳ ನಾಟಕ ಪಂಜರ ಶಾಲೆ ಪ್ರದರ್ಶನಗೊಂಡಿತು. ರವೀಂದ್ರನಾಥ್ ಟ್ಯಾಗೋರ್ ಅವರ ಕಥೆ ಆಧಾರಿತ ನಾಟಕವನ್ನು ಬಿ.ವಿ.ಕಾರಂತರ ರಚನೆಯೊಂದಿಗೆ, ಆರ್.ಸಿ.ಧನಂಜಯ ಅವರ ಸಂಗೀತ, ಮಳವಳ್ಳಿ ಮಧು ಅವರ ಬೆಳಕು, ಮಾಂತೇಶ್ ಆದಿಮರವರ ವಾದ್ಯ ಸಹಕಾರ, ಪ್ರಮೋದ್ ಶಿಗ್ಗಾಂವ್ ರವರ ವಿನ್ಯಾಸ ಮತ್ತು ನಿರ್ದೇಶನ, ಮಂಡ್ಯ ಅರ್ಪಿತಾ ಸಹ ನಿರ್ದೇಶನ, ಮಂಡ್ಯ ಎನ್.ಸಾಗರ್ ರಂಗ ಸಜ್ಜಿಕೆ, ಮಂಡ್ಯ ಎಚ್.ಡಿ.ಸೋಮಶೇಖರ್ ಸಹಕಾರ ಮಾಡಿದ್ದಾರೆ.ಮಕ್ಕಳು ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಮಕ್ಕಳ ಪೋಷಕರು, ಸಾರ್ವಜನಿಕರು ನಾಟಕವನ್ನು ನೋಡಿ ಖುಷಿ ಪಟ್ಟರು. ಸುಮಾರು 40 ಮಕ್ಕಳು ಒಂದೇ ವೇದಿಕೆಯಲ್ಲಿ ಅದ್ಭುತ ನಟನೆ ಮಾಡಿದರು.
ಸಮಾರಂಭದಲ್ಲಿ ರೈತಸಂಘದ ನಾಯಕಿ ಸುನೀತಾ ಪುಟ್ಟಣ್ಣಯ್ಯ, ತಹಸೀಲ್ದಾರ್ ಎಸ್.ಸಂತೋಷ್, ಬಿಇಒ ರವಿಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಸಿ.ಎ.ಅರವಿಂದ, ಶಿಕ್ಷಕರು ಹಾಗೂ ರಂಗಭೂಮಿ ಕಲಾವಿದರಾದ ಪ.ಮ.ನಂಜುಂಡಸ್ವಾಮಿ, ತಾಲೂಕು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ರಮೇಶ್ ಬೀರ ಶೆಟ್ಟಹಳ್ಳಿ, ಕಸಾಪ ಅಧ್ಯಕ್ಷ ಮೇಣಗರ ಪ್ರಕಾಶ್, ತಾಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷ ಯೋಗೇಶ, ಭಜರಂಗಿ ಬಾಯ್ಸ್ ಅಧ್ಯಕ್ಷ ಬೀರಶೆಟ್ಟಹಳ್ಳಿ ಕುಮಾರ್, ಬೀರಶೆಟ್ಟಹಳ್ಳಿ ವಿವೇಕ್, ಮತ್ತು ಪೋಷಕರು ಮಕ್ಕಳು, ಸಾರ್ವಜನಿಕರು ಭಾಗವಹಿಸಿದ್ದರು.ಕ್ಯಾತನಹಳ್ಳಿ ಗುರುಪಾದಸ್ವಾಮಿ ನಿರ್ದೇಶನದಲ್ಲಿ ಮಕ್ಕಳಿಂದ ಮೂಡಿಬಂದ ಕಂಸಾಳೆ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಇದನ್ನು ವೀಕ್ಷಿಸಿದ ಚಿತ್ರ ನಿರ್ದೇಶಕ ಮಹೇಶ್ ಸುಖಧರೆ ಅವರು ಗುರುಪಾದಸ್ವಾಮಿ ಅವರಿಗೆ ಚಲನಚಿತ್ರದಲ್ಲಿ ಅವಕಾಶ ನೀಡುವುದಾಗಿ ಘೋಷಿಸಿದರು.