ಭಟ್ಕಳ: ಮಾತೃ ಭಾಷೆಯಲ್ಲಿ ಕಲಿಯುವುದು ನೈಸರ್ಗಿಕ, ಸ್ವಾಭಾವಿಕ ಪ್ರಕ್ರಿಯೆ. ಮಾತೃ ಭಾಷೆ ಮೂಲಕ ಕಲಿತ ಮಕ್ಕಳು ವಿಷಯವನ್ನು ಬೇಗ ಗ್ರಹಿಸಿಕೊಂಡು ಉದ್ದೇಶಿತ ಮಟ್ಟವನ್ನು ಬೇಗನೆ ತಲುಪುತ್ತಾರೆ ಎಂದು ಉಡುಪಿಯ ಕಟಪಾಡಿಯ ನಿವೃತ್ತ ಪ್ರಾಚಾರ್ಯ ಲಕ್ಷ್ಮೀಬಾಯಿ ಹೇಳಿದರು.ಅವರು ನ್ಯಾಯಮೂರ್ತಿ ಅಮ್ಮೆಂಬಳ ನಾರಾಯಣ ಪೈ ಸ್ಮರಣಾರ್ಥ ಕೆನರಾ ಬ್ಯಾಂಕ್ ಜ್ಯೂಬಿಲಿ ಏಜ್ಯುಕೇಶನ್ ಫಂಡ್, ಬೆಂಗಳೂರು ಹಾಗೂ ಸಂಗಮ ಸೇವಾ ಸಂಸ್ಥೆ ಅಂಕೋಲಾ ಸಂಯುಕ್ತ ಆಶ್ರಯದಲ್ಲಿ 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಭಟ್ಕಳ ತಾಲೂಕಿನ ಆಯ್ದ ಪ್ರದೇಶಗಳ ಕನ್ನಡ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದವರಿಗೆ ಹಾಗೂ ಪ್ರಥಮ ಭಾಷೆ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಬೇಕು ಎನ್ನುವ ಕಾರಣಕ್ಕೆ ಕನ್ನಡ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದವರಿಗೆ ಹಾಗೂ ಪ್ರಥಮ ಭಾಷೆ ಕನ್ನಡದಲ್ಲಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿದ್ದೇವೆ ಎಂದರು.ತಾಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ಶಿರಾಲಿ ಅಧ್ಯಕ್ಷತೆ ವಹಿಸಿದ್ದರು. ದಿ ನ್ಯೂ ಇಂಗ್ಲೀಷ ಪಿ.ಯು ಕಾಲೇಜಿನ ಪ್ರಾಂಶುಪಾಲ ಡಾ.ವಿರೇಂದ್ರ ವಿ. ಶ್ಯಾನಭಾಗ, ಭಟ್ಕಳದ ಕೆನರಾ ಬ್ಯಾಂಕಿನ ಸಿನಿಯರ್ ಮ್ಯಾನೇಜರ ಪವನ್ ಕುಮಾರ ಮತ್ತು ವಿದ್ಯಾಂಜಲಿ ಪಬ್ಲಿಕ ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಕಾಮತ ಉಪಸ್ಥಿತರಿದ್ದರು. ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಜಯಂತ ನಾಯ್ಕ ನಿರ್ವಹಿಸಿ ಮತ್ತು ವಂದಿಸಿದರು.
ಭಟ್ಕಳದ ವಿದ್ಯಾಧಿರಾಜ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿರುವುದು.