ತಾಳಿಕೋಟೆ: ಪಟ್ಟಣದಲ್ಲಿ ಹೋಳಿ ಹುಣ್ಣಿಮೆ ನಿಮಿತ್ತ ಕಾಮದಹನ ಮಾಡುವ ಮೂಲಕ ರಂಗಿನಾಟದಲ್ಲಿ ಪರಸ್ಪರ ಬಣ್ಣ ಹಚ್ಚುವುದರೊಂದಿಗೆ ಮೊದಲ ದಿನದ ರಂಗಿನಾಟಕ್ಕೆ ಯುವಕರು ಚಾಲನೆ ನೀಡಿದರು.
ಕೆಲವು ಯುವಕರು ಹೆಣ್ಣು ಮಕ್ಕಳ ಉಡುಪು ತೊಟ್ಟು ನಡುರಸ್ತೆಯಲ್ಲಿ ಹಲಗೆ ಮಜಲಿಗೆ ತಕ್ಕಂತೆ ಕುಣಿಯುತ್ತಾ ಸಾಗಿದರು. ಇದು ನೋಡುಗರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿತು. ಎಪಿಎಂಸಿಯ ಶ್ರೀ ಬಸವೇಶ್ವರ ಮಾರ್ಕೆಟ್ ಯಾರ್ಡ್ನಲ್ಲಿ ಪ್ರತಿಷ್ಠಾಪಿಸಲಾದ ರತಿ ಮನ್ಮಥರ ಮೂರ್ತಿಯ ಮುಂದೆ ಕೆಲವು ಯುವಕರು ಸೀರೆ ಕುಪ್ಪಸ ತೊಟ್ಟಿದ್ದರು. ಇನ್ನೂ ಕೆಲವು ಯುವಕರು ಹೆಣ್ಣು ಮಕ್ಕಳ ಉಡುಪು ತೊಟ್ಟು ಕುಣಿದರು.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮಹಿಳೆಯರೂ ಬಣ್ಣದಾಟದಲ್ಲಿ ಪಾಲ್ಗೊಳ್ಳುವುದರೊಂದಿಗೆ ಅಕ್ಕಪಕ್ಕದ ಮಹಿಳೆಯರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು.ಈ ಮೊದಲು ಹೋಳಿ ಹುಣ್ಣಿಮೆ ಬಂತೆಂದರೆ ಯುವಕರಿಗೆ ಎಲ್ಲಿಲ್ಲದ ಹುಮ್ಮಸ್ಸು ಬರುತ್ತಿತ್ತು. ಆದರೆ ಸದ್ಯ ಎಲ್ಲೆಡೆ ಕೆಮಿಕಲ್ ಬಣ್ಣದಿಂದ ರಂಗಿನಾಟ ನಡೆಯುತ್ತಿರುವುದರಿಂದ ಕೆಮಿಕಲ್ ಬಣ್ಣದಿಂದ ಕಣ್ಣಿಗೆ ಮತ್ತು ಚರ್ಮಕ್ಕೆ ಅಪಾಯಕಾರಿ ಎಂದು ಅರಿತುಕೊಂಡಿರುವ ಕೆಲವು ಯುವಕರು ಪ್ರೇಕ್ಷಣೀಯ ಹಾಗೂ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ತೆರಳಿದ್ದು ಕೂಡ ಕಂಡುಬಂತು.