ಚನ್ನಪಟ್ಟಣ: ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕಲಾತ್ಮಕ ಪ್ರತಿಭೆಯನ್ನು ಪ್ರೋತ್ಸಾಹಿಸಲು ಹಾಗೂ ಪರಿಸರ ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆಗಳು ಸಹಕಾರಿಯಾಗಿವೆ. ಇಂತಹದೊಂದು ವೇದಿಕೆ ಕಲ್ಪಿಸಿಕೊಟ್ಟ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ನ ಪರಿಸರ ಕಾಳಜಿ ಅಭಿನಂದನಾರ್ಹ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಗುಣಗಾನ ಮಾಡಿದರು.
ಆಧುನಿಕ ಯುಗದಲ್ಲಿ ಪರಿಸರ ಅಳಿವಿನ ಅಂಚಿನತ್ತ ತಲುಪಿದೆ. ತಾಯಂದಿರ ಎದೆ ಹಾಲಿನಲ್ಲಿ ಯುರೇನಿಯಂ ಅಂಶ ಪತ್ತೆಯಾಗಿರುವುದು, ದೆಹಲಿಯಲ್ಲಿ ಉಸಿರಾಡಲು ಶುದ್ಧ ಗಾಳಿ ಇಲ್ಲದಿರುವುದು ಆತಂಕಕಾರಿ ಸಂಗತಿ. ಇದು ಪರಿಸರ ಕಲುಷಿತಗೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ಪರಿಸರದ ಬಗ್ಗೆ ಹೆಚ್ಚು ಹೆಚ್ಚು ಕಾಳಜಿ ಮೂಡಿಸುವ ಮೂಲಕ ಪರಿಸರ ಪ್ರೇಮಿಗಳನ್ನಾಗಿ ಮಾಡಬೇಕು ಎಂದು ಹೇಳಿದರು.
ಸಾಮಾನ್ಯ ಮಹಿಳೆಯಾಗಿದ್ದ ತಿಮ್ಮಕ್ಕ, ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿದರು. ಪರಿಸರದ ಮೇಲೆ ಆಕೆ ಇಟ್ಟಿದಂತಹ ಪ್ರೀತಿ ಆದರ್ಶ ಮಹಿಳೆಯನ್ನಾಗಿ ಮಾಡಿತು. ಅಲ್ಲದೆ, ಕೋಟ್ಯಂತರ ಜನರಿಗೆ ಮಾದರಿಯಾಗಿದ್ದಾರೆ. ಸಾಲುಮರದ ತಿಮ್ಮಕ್ಕನವರು ಪರಿಸರದ ಬಗ್ಗೆ ಬಿಟ್ಟು ಹೋಗಿರುವ ಗುರುತು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿದೆ ಎಂದು ಸಿ.ಪಿ.ಯೋಗೇಶ್ವರ್ ತಿಳಿಸಿದರು.ಸ್ಮರಣ ಶಕ್ತಿ - ಗ್ರಹಿಕೆಯ ಪರೀಕ್ಷೆ : ತಹಸೀಲ್ದಾರ್ ಬಿ.ಎನ್.ಗಿರೀಶ್ ಮಾತನಾಡಿ, ಚಿತ್ರಕಲೆ ಸ್ಪರ್ಧೆ ಅಲ್ಲ. ಅದೊಂದು ಕಲೆ. ಚಿತ್ರಕಲೆಗಳು ಸ್ಮರಣ ಶಕ್ತಿ ಮತ್ತು ಗ್ರಹಿಕೆಯನ್ನು ಪರೀಕ್ಷೆ ಮಾಡುತ್ತದೆ. ಚಿತ್ರ ಬಿಡಿಸಲು ವಿಶೇಷ ಕೌಶಲ್ಯ ಇದ್ದರೆ ಮಾತ್ರ ಚಿತ್ರ ಬಿಡಿಸಲು ಸಾಧ್ಯ ಎಂದರು.
ಕಲಾ ರಂಗದಲ್ಲೂ ಗುರುತಿಸಿಕೊಂಡಿರುವ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಸೈನಿಕ ಮಾತ್ರವಲ್ಲದೆ ಅನೇಕ ಚಲನಚಿತ್ರಗಳಲ್ಲಿ ನಟಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದವರು. ಈಗ ರಾಜಕಾರಣದಲ್ಲಿ ಸಕ್ರಿಯವಾಗಿರುವ ಯೋಗೇಶ್ವರ್ರವರು ಅಭಿವೃದ್ಧಿ ವಿಚಾರದಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಮಾದರಿಯಾಗಿ ರೂಪಿಸುತ್ತಿದ್ದಾರೆ ಎಂದು ತಿಳಿಸಿದ ಗಿರೀಶ್ ರವರು ಸೈನಿಕ ಚಿತ್ರದ ಹಾಡನ್ನು ಹಾಡಿ ಮಕ್ಕಳನ್ನು ರಂಜಿಸಿದರು.
ಈ ಭೂಮಿಯಲ್ಲಿ ಸಾಲುಮರದ ತಿಮ್ಮಕ್ಕ ಅವರಂತಹ ವ್ಯಕ್ತಿಗಳು ಜನಿಸುವುದು ಅಪರೂಪ. ಅವರ ಆದರ್ಶಗಳು ನಮಗೆಲ್ಲ ಅನುಕರಣಿಯವಾಗಿದೆ. ಗಾಳಿ, ನೀರು, ಆಹಾರ ವಿಷಮುಕ್ತಗೊಳಿಸಲು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಮನೆ ಮುಂದೆ ಒಂದೊಂದು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಜಾಯತ್ನ ಸಂಸ್ಥೆ ಅರಸು ಮಾತನಾಡಿ, ಇಡೀ ಪುಸ್ತಕದಲ್ಲಿ ಅಕ್ಷರ ರೂಪದಲ್ಲಿರುವ ಅಂಶವನ್ನು ಕೇವಲ ಒಂದು ಚಿತ್ರದಲ್ಲಿ ಕಟ್ಟಿಕೊಡಬಹುದು. ಅಂತಹ ಅದ್ಭುತವಾದ ಶಕ್ತಿ ಚಿತ್ರಕಲೆಗೆ ಇದೆ. ಚಿತ್ರಕಲೆ ಬಿಡಿಸುವ ಕೌಶಲ್ಯ ಎಲ್ಲರಿಗೂ ಇರುವುದಿಲ್ಲ. ಪಠ್ಯ ಪುಸ್ತಕದಲ್ಲಿ ಇರುವ ಚಿತ್ರಗಳನ್ನು ಬಿಡಿಸುವ ಬದಲು ನಿಮ್ಮ ಕಲ್ಪನೆಗಳು ಚಿತ್ರಕಲೆಯಲ್ಲಿ ಮೂಡಿ ಬರುವಂತಾಗಬೇಕು. ಅದು ಮಕ್ಕಳಲ್ಲಿರುವ ಸೃಜನಶೀಲತೆ ತೋರಿಸುತ್ತದೆ ಎಂದು ತಿಳಿಸಿದರು.
ಸ್ಪರ್ಧೆ ಆರಂಭಕ್ಕೂ ಮುನ್ನಾ ಬಾಲು ಪಬ್ಲಿಕ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ವಿ.ವೆಂಕಟಸುಬ್ಬಯ್ಯ ಚೆಟ್ಟಿ ಮಾತನಾಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳಲ್ಲಿ ಹುರುಪು ತುಂಬಿದರು.
ಚಿತ್ರಕಲಾ ಶಿಕ್ಷಕರಾದ ಯೋಗಿತಾ ಹಾಗೂ ಸಂತೋಷ್ ಕುಮಾರ್ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಉತ್ಸಾಹದಿಂದ ಭಾಗವಹಿಸಿದ್ದ ಮಕ್ಕಳು
ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಯಶಸ್ವಿಯಾಗಿ ನೆರವೇರಿತು.ತಾಲೂಕಿನ ವಿವಿಧಶಾಲೆಗಳ ೧೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ಸಾಲುಮರದ ತಿಮ್ಮಕ್ಕ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಕುರಿತು ವಿಭಿನ್ನವಾದ ಚಿತ್ರಗಳನ್ನು ಬಿಡಿಸುವ ಮೂಲಕ ಗಮನಸೆಳೆದರು.
೮ನೇ ತರಗತಿ ವಿಭಾಗದಲ್ಲಿ ಮತ್ತೀಕೆರೆಯ ಆದರ್ಶ ವಿದ್ಯಾಲಯದ ಮೋನಿಷಾ ಶೆಟ್ಟಿ ಪ್ರಥಮ, ನ್ಯೂ ಡಾನ್ ಬಾಸ್ಕೋ ಶಾಲೆಯ ಸಮಿತ್ ಸೂರ್ಯ ಅರಸ್ ದ್ವಿತೀಯ ಹಾಗೂ ಸೆಂಟ್ ಜೋಸೆಫ್ ಪ್ರೌಢಶಾಲೆಯ ಸಿ.ಪಿ.ಕೀರ್ತಿರಾಜ್ ತೃತೀಯ ಬಹುಮಾನ ಪಡೆದರು.೯ನೇ ತರಗತಿ ವಿಭಾಗದಲ್ಲಿ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ರೋಹನ್ ರಾಜ್ ಪ್ರಥಮ, ನಗರದ ಬಾಲಕೀಯರ ಪ್ರೌಢಶಾಲೆಯ ಜೈಬಾ ದ್ವಿತೀಯ, ಬಾಲು ಪಬ್ಲಿಕ್ ಶಾಲೆಯ ಶರಣ್ಯ ಎಂ. ತೃತೀಯ ಬಹುಮಾನ ಪಡೆದರು.
೧೦ನೇ ತರಗತಿ ವಿಭಾಗದಲ್ಲಿ ನ್ಯೂ ಡಾನ್ ಬಾಸ್ಕೋ ಪ್ರೌಢಶಾಲೆಯ ಅಶಿಕಾ ಎ. ಪ್ರಥಮ, ಬಾಲು ಪಬ್ಲಿಕ್ ಶಾಲೆಯ ಯಶಸ್ ಜೆ. ದ್ವಿತೀಯ ಮತ್ತು ಮತ್ತೀಕೆರೆಯ ಆದರ್ಶ ವಿದ್ಯಾಲಯದ ಧೃತಿ ಸಿ.ಕೆ. ತೃತೀಯ ಬಹುಮಾನ ಪಡೆದುಕೊಂಡರು.(ಫೋಟೋಸ್)
ಪೊಟೋ೬ಸಿಪಿಟಿ೧: ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿದರು.ಪೊಟೋ೬ಸಿಪಿಟಿ೨: ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಾವು ಬಿಡಿಸಿದ ಚಿತ್ರಗಳನ್ನು ಪ್ರದರ್ಶಿಸಿದರು.
ಪೊಟೋ೬ಸಿಪಿಟಿ೩: ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಅತಿಥಿಗಳೊಂದಿಗೆ ತಾವು ಬಿಡಿಸಿದ ಚಿತ್ರಗಳನ್ನು ಪ್ರರ್ದಶಿಸಿದರು.ಪೊಟೋ೬ಸಿಪಿಟಿ೪: ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಅತಿಥಿಗಳೊಂದಿಗೆ ಇರುವುದು.