ಚಿಂತಾಮಣಿ ನಗರ ಸಾರಿಗೆ ಕನಸು ನನಸು: ಸಚಿವ ಡಾ. ಸುಧಾಕರ್

KannadaprabhaNewsNetwork |  
Published : Mar 21, 2026, 01:15 AM IST
ಎಂಸಿಎಸ್  | Kannada Prabha

ಸಾರಾಂಶ

ಈಗಾಗಲೇ ನಗರ ಸಾರಿಗೆ 8-10 ಮಾರ್ಗಗಳನ್ನು ಹುಡುಕಿಕೊಂಡಿದ್ದು, ಇದರಲ್ಲಿ ೫ ಮಾರ್ಗಗಳಲ್ಲಿ ಇಂದು ಬಸ್‌ಗಳನ್ನು ನೀಡಲಾಗಿದೆ. ಶ್ರೀನಿವಾಸಪುರ 16 ಟ್ರಿಪ್, ದಿಬ್ಬೂರಹಳ್ಳಿ, ಎಚ್‌ಕ್ರಾಸ್ , ಶಿಡ್ಲಘಟ್ಟ , ಪೆದ್ದೂರು ತಲಾ 12 ಟ್ರಿಪ್‌ಗಳನ್ನು ನಡೆಸಲಾಗುವುದು. ಪ್ರತಿ 30 ನಿಮಿಷಕ್ಕೆ ಬಸ್ ಪುನಃ ನಿಗದಿತ ಸ್ಥಳಗಳಿಗೆ ತಲುಪುವುದರಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ.

ಕನ್ನಡಪ್ರಭವಾರ್ತೆ ಚಿಂತಾಮಣಿ

ಎಲ್ಲ ಬಸ್‌ಗಳನ್ನು ಎಲ್ಲ ಸ್ಥಳಗಳಲ್ಲೂ ನಿಲುಗಡೆ ಮಾಡಲು ಸಾಧ್ಯವಿಲ್ಲ. ದೂರದ ಊರಿನ ಪ್ರಯಾಣಿಕರು ಎಕ್ಸಪ್ರೆಸ್, ವೇಗದೂತ ಇತ್ಯಾದಿಗಳಲ್ಲಿ ಪ್ರಯಾಣಿಸುವಾಗ ಬಸ್‌ಗಳನ್ನು ಪ್ರತಿಯೊಂದು ಹಳ್ಳಿಯ ಸಮೀಪ ನಿಲುಗಡೆ ಮಾಡಿದರೆ ಅದು ನಾನ್‌ಸ್ಟಾಪ್ ಆಗುವುದಿಲ್ಲ. ಬದಲಾಗಿ ನಾನಾ ಸ್ಟಾಪ್ ಆಗುತ್ತದೆ. ಇದಕ್ಕೆ ಉತ್ತಮ ಪರಿಹಾರವೇ ನಗರ ಸಾರಿಗೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ನುಡಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಕೈಲಾಸಗಿರಿ ನಗರ ಸಾರಿಗೆ ಬಸ್‌ಗಳ ಉದ್ಘಾಟಿಸಿ ಮಾತನಾಡಿ ನಗರ ಸಾರಿಗೆ ಬಗ್ಗೆ 2011 ರಲ್ಲೇ ಈ ಕನಸು ಕಂಡಿದ್ದೆ. ಆದರೆ ನಂತರ ಆದ ರಾಜಕೀಯ ಬದಲಾವಣೆಗಳಿಂದ ನನ್ನ ಕನಸು ಕನಸಾಗಿಯೆ ಉಳಿದಿತ್ತು. ನಂತರ 2023ರಲ್ಲಿ ಗೆಲುವನ್ನು ಪಡೆದು ಶಾಸಕನಾಗಿ ಸಚಿವನಾಗಿ ಆಯ್ಕೆಯಾದ ಮೇಲೆ ಚಿಂತಾಮಣಿ ನಗರ ವ್ಯಾಪ್ತಿಗೆ ನಗರ ಸಾರಿಗೆ ಮಾಡಬೇಕೆಂಬ ಬಗ್ಗೆ ಸಾರಿಗೆ ಸಚಿವರೊಂದಿಗೆ ಚರ್ಚಿಸಿ ಕೈಲಾಸಗಿರಿ ನಗರ ಸಾರಿಗೆಗೆ ಚಾಲನೆ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ, ವಯೋವೃದ್ಧರಿಗೆ, ಆಸ್ಪತ್ರೆಗೆ ಭೇಟಿ ನೀಡುವವರಿಗೆ, ರೈತರಿಗೆ ಅನುಕೂಲವಾಗುತ್ತದೆಂದು ಹೇಳಿದರು.

ಈಗಾಗಲೇ ನಗರ ಸಾರಿಗೆ 8-10 ಮಾರ್ಗಗಳನ್ನು ಹುಡುಕಿಕೊಂಡಿದ್ದು, ಇದರಲ್ಲಿ ೫ ಮಾರ್ಗಗಳಲ್ಲಿ ಇಂದು ಬಸ್‌ಗಳನ್ನು ನೀಡಲಾಗಿದೆ. ಶ್ರೀನಿವಾಸಪುರ 16 ಟ್ರಿಪ್, ದಿಬ್ಬೂರಹಳ್ಳಿ, ಎಚ್‌ಕ್ರಾಸ್ , ಶಿಡ್ಲಘಟ್ಟ , ಪೆದ್ದೂರು ತಲಾ 12 ಟ್ರಿಪ್‌ಗಳನ್ನು ನಡೆಸಲಾಗುವುದು. ಪ್ರತಿ 30 ನಿಮಿಷಕ್ಕೆ ಬಸ್ ಪುನಃ ನಿಗದಿತ ಸ್ಥಳಗಳಿಗೆ ತಲುಪುವುದರಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆಂದು ಹೇಳಿದರು.

ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಪ್ರಾಸ್ತಾವಿಕ ಮಾತನಾಡಿ, ಚಿಕ್ಕಬಳ್ಳಾಪುರ ವಿಭಾಗದಲ್ಲಿ 138 ಮಾರ್ಗಗಳಲ್ಲಿ ಬಸ್ ಸಂಚಾರವಿದ್ದರೆ, ಚಿಂತಾಮಣಿ ತಾಲೂಕು 126 ಮಾರ್ಗಗಳಲ್ಲಿ ಬಸ್ ಸಂಚಾರವನ್ನು ಹೊಂದಿದ್ದು 2ನೇ ಸ್ಥಾನದಲ್ಲಿದೆ ಎಂದರು. 126 ಅನುಸೂಚಿ ಮಾರ್ಗಗಳಲ್ಲಿ 46 ಸಾವಿರ ಕಿಮೀ ಉದ್ದದ ಪ್ರಯಾಣ ಬಸ್‌ಗಳು ಮಾಡುತ್ತವೆ. ಇದರಿಂದ ಪ್ರತಿನಿತ್ಯ 46 ಸಾವಿರ ಜನ ಪ್ರಯಾಣಕ್ಕೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಬಳಕೆ ಮಾಡುತ್ತಿದ್ದು, ಪ್ರತಿನಿತ್ಯ ಘಟಕ ಬಸ್‌ಗಳಲ್ಲಿ 20 ಸಾವಿರ ಮಹಿಳೆಯರು ಸಂಚರಿಸುತ್ತಾರೆ ಎಂದು ಮಾಹಿತಿ ನೀಡಿದರು.

ತಾ.ಪಂ. ಇಒ ಎಸ್.ಆನಂದ್, ಡಿವೈಎಸ್‌ಪಿ ಪಿ.ಮುರಳೀಧರ್, ವಿಭಾಗ ನಿಯಂತ್ರಣಾಧಿಕಾರಿ ನಾಗೇಂದ್ರ, ಘಟಕ ವ್ಯವಸ್ಥಾಪಕಿ ಸರಿತ, ಎಆರ್‌ಟಿಒ ಬೈರಾರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್, ಪೌರಾಯುಕ್ತ ಜಿ.ಎನ್.ಚಲಪತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಥ್ ರೆಡ್ಡಿ, ತಾಲೂಕು ಗ್ಯಾರಂಟಿ ಅಧ್ಯಕ್ಷ ಮುನಿನಾರಾಯಣಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಜಯರಾಮರೆಡ್ಡಿ, ಜಿ.ಪಂ. ಮಾಜಿ ಅಧ್ಯಕ್ಷ ಚಿನ್ನಪ್ಪ, ಆರ್ ಎಂ. ಶ್ರೀನಿವಾಸ್, ಸುರೇಶ್, ಶ್ರೀರಾಮರೆಡ್ಡಿ, ಲಕ್ಷ್ಮೀಪತಿ, ರಾಮಯ್ಯ, ಮಂಜುನಾಥ್ ಮುಖಂಡರು, ಕಾರ್ಯಕರ್ತರು, ಪ್ರಯಾಣಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೇಮೆ ನೀರಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಬೇಡ
ತುಮಕೂರಿನಲ್ಲಿ ಗುಡ್ಡೆ ಮಾಂಸಕ್ಕೆ ಹೆಚ್ಚಿದ ಬೇಡಿಕೆ