ವಿವಿಧ ಸರ್ಕಾರಿ ಯೋಜನೆಗಳ ಯಶಸ್ವಿ ಅನುಷ್ಠಾನ । ಜಲಾನಯದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿದ ಕೋಟೆನಾಡು ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಲಾನಯನ ಕಾರ್ಯಕ್ರಮಗಳಡಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಗಿಂತಲೂ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ, ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ.
ಎನ್ಎಂಎಸ್ಎ (ಆರ್ಎಡಿ) ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ (ಮಳೆಯಾಶ್ರಿತ ಪ್ರದೇಶ ಅಭಿವೃದ್ದಿ) ಜಿಲ್ಲೆಯ ಚಳ್ಳಕೆರೆ ಮೊಳಕಾಲ್ಮೂರು ಮತ್ತು ಚಿತ್ರದುರ್ಗ ತಾಲೂಕುಗಳಲ್ಲಿ ಒಟ್ಟು 60 ಆಯ್ದ ಗ್ರಾಮಗಳಲ್ಲಿ ಪ್ರತಿ ಫಲಾನುಭವಿಗೆ ರು.20,000 ಗರಿಷ್ಟ ಸಹಾಯಧನ ಯೋಜನೆಯಡಿಯಲ್ಲಿ ಹಸು ವಿತರಣೆ ಮಾಡಲಾಗಿದೆ. ರು 404.71 ಲಕ್ಷಗಳಲ್ಲಿ ಅನುದಾನ ಭರಿಸಿ 2 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಸುಗಳ ವಿತರಣೆ ಮಾಡಿ ರಾಜ್ಯದಲ್ಲಿಯೇ ಮಾದರಿಯಾಗಿದೆ. ಈ ಕಾರ್ಯಕ್ಕೂ ಮೊದಲ ಸ್ಥಾನವನ್ನು ಚಿತ್ರದುರ್ಗ ಜಿಲ್ಲೆ ಪಡೆದುಕೊಂಡಿದೆ.ಅದೇ ರೀತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೃಷಿ ಇಲಾಖೆ, ಜಲಾನಯನ ಅಭಿವೃದ್ದಿ ವಿಭಾಗದಲ್ಲಿ 7,68,421 ಮಾನವ ದಿನಗಳನ್ನು ಸೃಜಿಸಲಾಗಿದೆ. ಮುಖ್ಯವಾಗಿ ರೈತರ ಜಮೀನಿನಲ್ಲಿ ಬದು ಮತ್ತು ಕೃಷಿಹೊಂಡ ನಿರ್ಮಾಣ ರಾಜ್ಯದಲ್ಲಿಯೇ ಎರಡನೇ ಸ್ಥಾನ ಲಭಿಸಿದೆ. ಒಟ್ಟಾರೆ ಬೆಂಗಳೂರು ವಿಭಾಗದಲ್ಲಿ ಜಲಾನಯನ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ.
2024-25ನೇ ಸಾಲಿನಲ್ಲಿ ಮಣ್ಣು ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಮಣ್ಣು ಪರೀಕ್ಷಾ ಪ್ರಯೋಗಾಲಯಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಲಭಿಸಿದೆ. ಮಣ್ಣು ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಮಣ್ಣು ಪರೀಕ್ಷೆ ಮಹತ್ವ, ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರ ಸಮರ್ಥ ಬಳಕೆ ಕುರಿತು ಸಕಾಲದಲ್ಲಿ 29,665 ಜಿಲ್ಲೆಯ ರೈತರಿಗೆ ಮಣ್ಣು ಆರೋಗ್ಯ ಚೀಟಿ ನೀಡಲಾಗಿದ್ದು ಇದೂ ಕೂಡಾ ಸಾಧನೆಯಾಗಿದೆ. 2024-25ನೇ ಸಾಲಿನಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನಕ್ಕೆ ಭಾಜನವಾಗಿರುವುದು ಹೆಮ್ಮೆಯ ವಿಷಯವಾಗಿದೆ.ಹಿರಿಯೂರು ತಾಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರವು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ತೋರಿದ ಅತ್ಯುತ್ತಮ ಸಾಧನೆ ಗುರುತಿಸಿ, ಕೃಷಿ ಇಲಾಖೆ 2024-25ನೇ ಸಾಲಿನ ರಾಜ್ಯಮಟ್ಟದ ದ್ವಿತೀಯ ಪ್ರಶಸ್ತಿ ನೀಡಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳು ಹಾಗೂ ಆರೋಗ್ಯಕರ ಆಹಾರ ಪದ್ದತಿ ಮತ್ತು ಜೀವನ ಶೈಲಿ ಕುರಿತು ಸಾಂಸ್ಥಿಕ, ಹೊರಾಂಗಣ, ಗೂಗಲ್ ಮೀಟ್ ಮೂಲಕ ಅಂತರಜಾಲ ತರಬೇತಿಗಳನ್ನು ವ್ಯಾಪಕ ಪ್ರಚಾರ ನೀಡಿ, ರೈತರು ಸ್ವ ಆಸಕ್ತಿಯಿಂದ ತರಬೇತಿಯನ್ನು ಪಡೆಯಲು ಅನುಕೂಲಕರವಾಗಿದೆ. ಅಲ್ಲದೆ ಯುವ ರೈತರನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಮಾಜಿಕ ಜಾಲತಾಣ ಬಳಸಿಕೊಂಡು ಅವರ ಬೆರಳ ತುದಿಯಲ್ಲಿಯೇ ತಾಂತ್ರಿಕ ಮಾಹಿತಿಯನ್ನು ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನಲ್ ಮೂಲಕ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಆರ್. ರಜನೀಕಾಂತ ಅವರು ನೀಡುತ್ತಿರುವ ವಿನೂತನ ಕಾರ್ಯದಕ್ಷತೆ ಗುರುತಿಸಿ ಕೃಷಿ ಇಲಾಖೆಯ 2025-26 ನೇ ಸಾಲಿನ ರಾಜ್ಯ ಮಟ್ಟದ ಮುಂಗಾರು ಹಂಗಾಮಿನ ಕಾರ್ಯಗಾರದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಅತ್ಯುತ್ತಮ ಸಾಧನೆಗೆ ದ್ವಿತೀಯ ಸ್ಥಾನದ ಪ್ರಶಸ್ತಿ ನೀಡಲಾಗಿದೆ.
ಒಕ್ಕಲು ತನ ಚಟುವಟಿಕೆಗಳಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಸಂದಿರುವ ಹಿನ್ನಲೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹಾಗೂ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಅವರುಗಳು ಹರ್ಷ ವ್ಯಕ್ತಪಡಿಸಿ ಕೃಷಿ ಇಲಾಖೆ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.