ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಪ್ರಯುಕ್ತ ಜಿಲ್ಲಾ ಚುನಾವಣಾ ವೆಚ್ಚ ಉಸ್ತುವಾರಿ ಕೋಶದ ವತಿಯಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ವೆಚ್ಚ ಅಧಿಕಾರಿಗಳು ಹಾಗೂ ತಂಡದವರಿಗೆ ಲೋಕಸಭಾ ಚುನಾವಣಾ ಖರ್ಚು ವೆಚ್ಚ ತರಬೇತಿಯಲ್ಲಿ ಮಾತನಾಡಿದರು.
ಚುನಾವಣಾ ನಾಮಪತ್ರ ಸಲ್ಲಿಸಿದ ದಿನಾಂಕದಿಂದ ಮತದಾನ ಎಣಿಕೆ ಮುಗಿಯುವ ತನಕ ಆದಂತಹ ಎಲ್ಲಾ ವೆಚ್ಚಗಳನ್ನು ಸಲ್ಲಿಸುವುದು ಅಭ್ಯರ್ಥಿಗಳ ಕರ್ತವ್ಯವಾಗಿದೆ. ಪ್ರತಿ ಅಭ್ಯರ್ಥಿ ಚುನಾವಣೆ ವೆಚ್ಚ ಗರಿಷ್ಠ ₹95 ಲಕ್ಷಗಳಿಗೆ ಮಿತಿಗೊಳಿಸಲಾಗಿದೆ. ಅಭ್ಯರ್ಥಿಯು ಈ ಹಣದ ಖರ್ಚು ವೆಚ್ಚಗಳ ನಿರ್ವಹಣೆಗಾಗಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಬೇಕು. ವೆಚ್ಚಗಳನ್ನು ಬ್ಯಾಂಕ್ ಮೂಲಕವೇ ಪಾವತಿಸಬೇಕು. ಅಭ್ಯರ್ಥಿಗಳು ಕೈಗೊಳ್ಳುವ ಚುನಾವಣೆ ಪ್ರಚಾರ, ಬಳಸುವ ವಾಹನ, ಬಿತ್ತಿ ಪತ್ರಗಳು, ಸಭೆ, ಸಮಾರಂಭ, ಸ್ಟಾರ್ ಪ್ರಚಾರಕರು, ಸಭೆಯ ವೇದಿಕೆ, ಊಟ ಉಪಹಾರದ ಸೇರಿ ಇತರೆ ಎಲ್ಲಾ ವೆಚ್ಚಗಳನ್ನು ಚಿತ್ರೀಕರಿಸಿ ಕಳಿಸಿರುವ ಮಾಹಿತಿ ಆಧಾರದ ಮೇಲೆ ದಾಖಲಿಸಬೇಕು. ಅಭ್ಯರ್ಥಿಗಳು ಚುನಾವಣೆ ವೆಚ್ಚದ ಮಾಹಿತಿ ಕಾಲಕಾಲಕ್ಕೆ ಚುನಾವಣೆ ವೆಚ್ಚ ಕೋಶಕ್ಕೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.ಅಭ್ಯರ್ಥಿಯ ಚುನಾವಣಾ ವೆಚ್ಚದ ಮೇಲೆ ಚುನಾವಣಾ ಅಧಿಕಾರಿಗಳ ಕಣ್ಗಾವಲು ಇರುತ್ತದೆ. ಪ್ರತಿಯೊಂದರ ಮೇಲೂ ಗಮನ ಹರಿಸಲಾಗುವದು. ಸಂದರ್ಭ ಬಂದಲ್ಲಿ ವೆಚ್ಚದ ಬಗ್ಗೆಯೂ ಪ್ರತ್ಯೇಕವಾಗಿ ನಮೂದು ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಲೆಕ್ಕಪತ್ರಗಳ ಪಾರದರ್ಶಕವಾಗಿ ಇಡುವುದು ಒಳಿತೆಂದರು.
ತರಬೇತಿ ನಿರ್ವಹಣಾ ಕೋಶದ ನೋಡಲ್ ಅಧಿಕಾರಿ ಜಗದೀಶ್ ಹೆಬ್ಬಳ್ಳಿ, ಚುನಾವಣೆ ಶಿರಸ್ತೇದಾರ ಮಲ್ಲಿಕಾರ್ಜುನ್ ಸೇರಿ ಎಲ್ಲಾ ವಿಧಾನಸಭಾ ಕ್ಷೇತ್ರದ ಸಹಾಯಕ ವೆಚ್ಚ ಅಧಿಕಾರಿಗಳು ಹಾಗೂ ತಂಡಗಳ ಸದಸ್ಯರು ಇದ್ದರು.