ಮೂಲ್ಕಿ: ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ಘಟಕದ ಮೂಲ್ಕಿ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್ ೧ರರಂದು ಕಟೀಲಿನ ಕುದ್ರುವಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಕಟೀಲು ಸರಸ್ವತೀ ಸದನದಲ್ಲಿ ನಡೆದ ದ.ಕ. ಜಿಲ್ಲಾ ಕಸಾಪ, ಮೂಲ್ಕಿ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸಾಹಿತ್ಯಾಭಿಮಾನಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.
ಎರಡು ವೇದಿಕೆಗಳಲ್ಲಿ ಸಮ್ಮೇಳನ; ನಂದಿನಿ ನದಿ ಹರಿಯುವ ಕಟೀಲು ದೇವಳದ ಕುದ್ರುವಿನಲ್ಲಿ ಪ್ರಕೃತಿಯ ಮಡಿಲಲ್ಲಿ ಎರಡು ಸಮಾನಾಂತರ ವೇದಿಕೆಗಳಲ್ಲಿ ಸಮ್ಮೇಳನ ನಡೆಯಲಿದೆ. ಒಂದು ವೇದಿಕೆಯಲ್ಲಿ ಹಿರಿಯರ ಸಾಹಿತಿಗಳ ನೆನಪು ಕಾರ್ಯಕ್ರಮ, ಇನ್ನೊಂದರಲ್ಲಿ ಕವಿ, ಕಥಾ ಗೋಷ್ಟಿಗಳು ನಡೆಯಲಿದ್ದು, ತಾಲೂಕಿನ ಯುವ ಸಾಹಿತಿಗಳಿಗೆ, ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ನೀಡಲಾಗುತ್ತದೆ ಎಂದು ಮೂಲ್ಕಿ ತಾಲೂಕು ಕಸಾಪ ಅಧ್ಯಕ್ಷ ಮಿಥುನ್ ಕೊಡೆತ್ತೂರು ತಿಳಿಸಿದರು.
ಅಧ್ಯಕ್ಷರ ಆಯ್ಕೆ: ಸಮ್ಮೇಳನದ ಅಧ್ಯಕ್ಷರನ್ನಾಗಿ ಖ್ಯಾತ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ.
ನೀನಾಸಂ ಸಂಸ್ಥೆಯಲ್ಲಿ ರಂಗ ಪದವಿ ಮುಗಿಸಿದ ಬಳಿಕ ಮೂರು ದಶಕಗಳಿಂದ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ ಮೂನ್ನೂರಕ್ಕೂ ಹೆಚ್ಚು ತುಳು ಕನ್ನಡ ನಾಟಕಗಳನ್ನು ವಿನ್ಯಾಸಗೊಳಿಸಿದ್ದಾರೆ. ಲೋಕಶಾಕುಂತಲ, ಶಸ್ತ್ರಪರ್ವ, ಹಯವದನ, ಧರ್ಮೆತ್ತಿಮಾಯೆ, ಪಿಲಿಪತ್ತಿ ಗಡಸ್, ಅವ್ವಾ, ಗೌಡರ ಮಲ್ಲಿ ಹೀಗೆ ಅನೇಕ ನಾಟಕಗಳು, ಕಥನ ಕವನಗಳನ್ನು ರಂಗದಲ್ಲಿ ಮೂಡಿಸಿದ್ದಾರೆ. ಅನೇಕ ರಂಗ ಗೀತೆಗಳನ್ನು ರಚಿಸಿದ್ದಾರೆ. ಸಂಗೀತ ನಿರ್ದೇಶನ ಮಾಡಿದ್ದಾರೆ. ಸಾಯುವವನೇ ಚಿರಂಜೀವಿ ಏಕವ್ಯಕ್ತಿ ನಾಟಕ ನೂರಕ್ಕೂ ಹೆಚ್ಚು ಪ್ರಯೋಗ ಕಂಡಿದೆ. ನಾಡಿನ ಖ್ಯಾತ ನಟ, ನಟಿಯರಿಗೆ ಏಕವ್ಯಕ್ತಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಮುದ್ರಾಡಿ, ಮಲ್ಲಾಡಿಹಳ್ಳಿ, ಚಿತ್ರದುರ್ಗ, ಕುಕ್ಕೆಸುಬ್ರಹ್ಮಣ್ಯ ಹೀಗೆ ನಾಡಿನಾದ್ಯಂತ ರಂಗಭೂಮಿಯ ಬೆಳವಣಿಗೆಗೆ ಸಹಕರಿಸಿದ್ದಾರೆ. 50ಕ್ಕೂ ಹೆಚ್ಚು ಕಾಲೇಜುಗಳಲ್ಲಿ ರಂಗ ತರಬೇತಿ ನೀಡಿದ್ದು, 30ಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನು ರಂಗದ ಮೇಲೆ ತಂದಿದ್ದಾರೆ.