ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಾವಿದರು ಕಲೆಯನ್ನು ಆವಾಹಿಸಿಕೊಂಡಿದ್ದರೆ, ಕಲಾ ಪ್ರೇಮಿಗಳು ಮತ್ತು ಕಲಾ ಪೋಷಕರು ಕಲೆಯನ್ನು ಮನಪೂರ್ತಿ ಆಸ್ವಾದಿಸಿದರು.
ವಿಕಾಸ ಅಕಾಡೆಮಿ, ಚೈತನ್ಯಮಯಿ ಟ್ರಸ್ಟ್, ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ, ಗುಲ್ಬರ್ಗ ವಿಶ್ವವಿದ್ಯಾಲಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ದಿ ಆರ್ಟ್ ಇಂಟಿಗ್ರೇಶನ್ ಸೊಸಾಯಿಟಿ, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಬಿಸಿಲು ಆರ್ಟ್ ಗ್ಯಾಲರಿ, ಶರಣಬಸವ ವಿಶ್ವವಿದ್ಯಾಲಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಚಿತ್ರಸಂತೆ ಆಯೋಜಿಸಲಾಗಿತ್ತು.ಚಿತ್ರಸಂತೆ, ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟವನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಉದ್ಘಾಟಿಸಿದರು. ವಿಕಾಸ ಅಕಾಡೆಮಿ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಸೇಡಂ ಅವರ ಗೌರವ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ಶಶೀಲ ಜಿ.ನಮೋಶಿ, ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಡಾ.ದಯಾನಂದ ಅಗಸರ, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಶಶಿಕಾಂತ ಪಾಟೀಲ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾನವಿಕ ಹಾಗೂ ಭಾಷಾ ನಿಕಾಯದ ಡೀನ್ ಡಾ.ವಿಕ್ರಮ್ ವಿಸಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಚಿತ್ರಸಂತೆಯ ಪ್ರಧಾನ ಸಂಯೋಜಕ ಡಾ.ಎ.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಚಿತ್ರಸಂತೆ ಸಂಯೋಜಕರಾದ ಡಾ.ಪರಶುರಾಮ ಪಿ, ವಿ.ಬಿ.ಬಿರಾದಾರ, ಎಂ.ಎಚ್.ಬೆಳಮಗಿ ಉಪಸ್ಥಿತರಿದ್ದರು.
ಪುಷ್ಪಹಸ್ತ ನೃತ್ಯ ಕಲಾ ಕೇಂದ್ರದಿಂದ ಭರತನಾಟ್ಯ, ದೊರೆ ಆರ್ಕೆಸ್ಟ್ರಾದಿಂದ ರಸಮಂಜರಿ, ಸುಕಿ ಸಾಂಸ್ಕೃತಿಕ ಸಂಸ್ಥೆಯಿಂದ ಸುಮಧುರ ಗೀತ ಗಾಯನ, ದಾನಯ್ಯ ಚೌಕಿಮಠ ಅವರಿಂದ ಕುಂಭ ಕಲೆಯ ಪ್ರಾತ್ಯಕ್ಷತೆ, ಗೋಪಾಲ ಕೆ.ಪಿ. ಅವರಿಂದ ಭಾವಶಿಲ್ಪ ಪ್ರಾತ್ಯಕ್ಷತೆ ನಡೆಯಿತು.