ನಾಟಕ, ಸಾಹಿತ್ಯ, ಕಲೆ ಕ್ಷೇತ್ರಕ್ಕೆ ಚೌಗಲೆ ಕೊಡುಗೆ ಅಪಾರ: ಸಾಹಿತಿ ಸರಜೂ ಕಾಟ್ಕರ್‌

KannadaprabhaNewsNetwork |  
Published : Jan 12, 2025, 01:15 AM IST
ಬೆಳಗಾವಿಯಲ್ಲಿ ಮಾತಂಗಿ ದೀವಟಿಗೆ ಚಿತ್ರ ಪ್ರದರ್ಶನವನ್ನು ಸಾಹಿತಿ ಡಾ.ಸರಜೂ ಕಾಟ್ಕರ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಡಿ.ಎಸ್.ಚೌಗಲೆ ಅವರು ನಾಟಕ, ಸಾಹಿತ್ಯ, ಕಲೆ ಮತ್ತು ಅನುವಾದ ಕ್ಷೇತ್ರದಲ್ಲಿ ಹೆಸರು ಮಾಡಿದವರು.ಈಗ ದೊಡ್ಡ ನಟರಾಗಿ ಅಭಿನಯದಲ್ಲಿಯೂ ತಮ್ಮ ಪ್ರತಿಭೆ ತೋರಿದ್ದಾರೆ ಎಂದು ಸಾಹಿತಿ ಡಾ. ಸರಜೂ ಕಾಟ್ಕರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಡಿ ಎಸ್ ಚೌಗಲೆ ಅವರು ನಾಟಕ, ಸಾಹಿತ್ಯ, ಕಲೆ ಮತ್ತು ಅನುವಾದ ಕ್ಷೇತ್ರದಲ್ಲಿ ಹೆಸರು ಮಾಡಿದವರು.ಈಗ ದೊಡ್ಡ ನಟರಾಗಿ ಅಭಿನಯದಲ್ಲಿಯೂ ತಮ್ಮ ಪ್ರತಿಭೆ ತೋರಿದ್ದಾರೆ ಎಂದು ಸಾಹಿತಿ ಡಾ. ಸರಜೂ ಕಾಟ್ಕರ್ ಅಭಿಪ್ರಾಯಪಟ್ಟರು.

ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಡಿ.ಎಸ್. ಚೌಗಲೆ ಅಭಿನಯಿಸಿದ ಹಾಗೂ ಡಾ. ಸಮತಾ ದೇಶಮಾನೆ ಅವರ ಆತ್ಮಕತೆ ಆಧರಿಸಿತ ಮಾತಂಗಿ ದೀವಟಿಗೆ ಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಈ ಚಿತ್ರ ಕಲಬುರಗಿಯ ದೇಶಮಾನೆ ಎಂಬ ದಲಿತ ಮನೆತನದ ಹೋರಾಟದ ಕತೆ ಹೊಂದಿದೆ. ಕಥಾ ನಾಯಕ ಬಾಬುರಾವ ದೇಶಮಾನೆ ಮತ್ತು ಆತನ ಮಡದಿ ರತ್ನ ಸಂಕಷ್ಟ ಎದುರಿಸಿ ಮಕ್ಕಳನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಕಥನವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಹಲವಾರು ರಾಷ್ಟ್ರೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಇದು ಪ್ರದರ್ಶನ ಕಂಡಿದೆ ಎಂದು ಹೇಳಿದರು.

ಚಿತ್ರ ಪ್ರದರ್ಶನ ನಂತರ ನಡೆದ ಸಂವಾದದಲ್ಲಿ, ಯಾವುದೇ ಸಿನಿಮಾ ಅಥವಾ ನಾಟಕ ವೀಕ್ಷಿಸಿದ ಕೊನೆಗೆ ಪ್ರೇಕ್ಷಕರಲ್ಲಿ ಸಂತೋಷ, ಸಂತೃಪ್ತಿ ಮತ್ತು ಸಮಾಧಾನದ ಅನುಭವ ಮೂಡಿರಬೇಕು. ಈ ಗುಣ ಮಾತಂಗಿ ದೀವಟಿಗೆ ಚಿತ್ರದಲ್ಲಿದೆ ಎಂದು ಪ್ರೊ. ಶಿವಪ್ಪ ದಳವಾಯಿ ಹೇಳಿದರು. ಅನುರಾಧ ಕಾಪಸಿ ಮಾತನಾಡಿ, ಅಂದು ದಲಿತ ಸಮುದಾಯದ ಬಾಬುರಾವ ಮಕ್ಕಳಿಗೆ ಶಿಕ್ಷಣ ನೀಡಲು ಪಡುವ ಕಷ್ಟ ಕಂಡರೆ ಮೀಸಲಾತಿಯ ಅಗತ್ಯವಿದೆ ಎಂದನಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರೊ.ಟಿ. ವೆಂಕಟೇಶ, ನಾನಿನ್ನೂ ಈ ಚಿತ್ರದ ಪ್ರಭಾವದಿಂದ ಹೊರಬರಲಾಗಿಲ್ಲ. ಕೆಲವು ದೃಶ್ಯಗಳು ಅಸ್ವಸ್ಥಗೊಳಿಸಿವೆ ಎಂದರು. ಪ್ರೊ. ಬಿ ಎಸ್ ಗವಿಮಠ, ಚೌಗಲೆ ಅವರು ಒಬ್ಬ ದೇಶಿ ಪ್ರತಿಭೆ. ಅದು ಅಭಿನಯದಲ್ಲಿ ಅನಾವರಣಗೊಂಡಿದೆ ಎಂದರೆ, ನಿರ್ಮಲಾ ಬಟ್ಟಲ ಅವರು, ದಲಿತ ಸಮುದಾಯದ ಮನೆ ಒಡೆಯ ಶಿಕ್ಷಣ ನೀಡಲು ಪಡುವ ಸಂಕಷ್ಟ ಮತ್ತು ಅದನ್ನು ಗೆಲ್ಲುವ ಬಾಬುರಾವರ ಬದುಕಿನ ಸಂಘರ್ಷ ಗಟ್ಟಿಯಾಗಿ ಮೂಡಿದೆ ಎಂದು ತಿಳಿಸಿದರು. ಡಾ. ಪಿ. ಜಿ. ಕೆಂಪಣ್ಣವರ, ನಾಟಕಕಾರರಾದ ಚೌಗಲೆ ಅವರು ಸಲೀಸಾಗಿ ನಟಿಸಲು ಅವರ ರಂಗಾನುಭವ ನೆರವಿಗೆ ಬಂದಿದೆ ಎಂದರು.

ದೇಶಮಾನೆ ಮನೆತನದ ಪ್ರೊ. ಜಯಶ್ರೀ ದೇಶಮಾನೆ ಉಪಸ್ಥಿತರಿದ್ದರು. ಡಾ.ಡಿ.ಎಸ್ ಚೌಗಲೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ನಿರ್ದೇಶಕ ಮಂಜು ಪಾಂಡವಪುರ ತಮ್ಮ ಚಿತ್ರೀಕರಣದ ಅನುಭವ ಹಂಚಿಕೊಂಡರು.

ಡಾ.ವೈ.ಬಿ. ಹಿಮ್ಮಡಿ, ಡಾ.ಬಸವರಾಜ ಜಗಜಂಪಿ, ಡಾ.ಗುರುದೇವಿ ಹುಲೆಪ್ಪನವರಮಠ, ಯ.ರು. ಪಾಟೀಲ, ಪ್ರೊ.ರಾಮಕೃಷ್ಣ ಮರಾಠೆ, ಪ್ರೊ.ಎ.ಬಿ.ಘಾಟಗೆ, ಪ್ರೊ.ಎ.ಎ. ಘೋರ್ಪಡೆ, ಡಾ.ಎಂ.ಎಂ. ಜಾಧವ, ಜಗದೀಶ ಪಾಟೀಲ, ಜಗದೀಶ ಹೊಸಮನಿ, ಮಹಿಳಾ ಸಂಘಟನೆಯ ಶೈಲಜಾ ಭಿಂಗೆ, ಸರ್ವ ಮಂಗಳ ಅರಳಿಮಟ್ಟಿ, ಲೇಖಕಿ ಪಾರ್ವತಿ ಪಿಟಗಿ, ಹೇಮಾ ಸೋನವಳಕರ, ಜ್ಯೋತಿ ಬದಾಮಿ , ಪ್ರೇಕ್ಷಕರು ಚಿತ್ರ ವೀಕ್ಷಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ