ಹುಬ್ಬಳ್ಳಿ: ಸಿನಿಮೀಯ ರೀತಿಯಲ್ಲಿ ನಡೆದ ಗುತ್ತಿಗೆದಾರನ ಅಪಹರಣ ಪ್ರಕರಣವನ್ನು 24 ಗಂಟೆಯೊಳಗೆ ಆರೋಪಿಗಳ ಕಾರನ್ನು ಬೆನ್ನತ್ತಿ (ಚೇಸಿಂಗ್) ಸಿನಿಮೀಯ ರೀತಿಯಲ್ಲೇ 10 ಆರೋಪಿಗಳನ್ನು ಬಂಧಿಸುವಲ್ಲಿ ಹು-ಧಾ ಮಹಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನೂ 10 ಆರೋಪಿಗಳು ಪರಾರಿಯಾಗಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ.
ಅಪಹರಣದ ಮಾಹಿತಿ ದೊರೆಯುತ್ತಿದ್ದಂತೆ ನಗರದ ವಿಮಾನ ನಿಲ್ದಾಣದ ಬಳಿಯ ತಾರಿಹಾಳ ಬ್ರಿಡ್ಜ್ ಬಳಿ ಪೊಲೀಸರು ಆರೋಪಿಗಳ ಕಾರನ್ನು ತಡೆಯಲು ಯತ್ನಿಸಿದರು. ಈ ವೇಳೆ ಪೊಲೀಸರ ಮೇಲೆಯೇ ಕಾರನ್ನು ಹತ್ತಿಸಲು ಯತ್ನಿಸಿ ಅಲ್ಲಿಂದ ಆರೋಪಿಗಳು ಪರಾರಿಯಾಗಿದ್ದರು.
ಬಳಿಕ ಆರೋಪಿಗಳ ಕಾರನ್ನು ಬೆನ್ನತ್ತಿದ ಪೊಲೀಸರು ಧಾರವಾಡದ ಕೆ.ಸಿ. ಪಾರ್ಕ್ ಬಳಿ ಧಾರವಾಡ ಗ್ರಾಮಾಂತರ ಪೊಲೀಸರು ಹಾಗೂ ಹುಬ್ಬಳ್ಳಿ ಗೋಕುಲ ರಸ್ತೆ ಪೊಲೀಸರು ಕಾರನ್ನು ಅಡ್ಡಹಾಕಿ ಪ್ರಮುಖ ಆರೋಪಿ ಬಸಪ್ಪ ದಳವಾಯಿ ಸೇರಿದಂತೆ ಕೆಲವರನ್ನು ಬಂಧಿಸಿದ್ದಾರೆ. ಬಳಿಕ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಮುರಗೋಡ ಬಳಿ ಅಪಹರಣಕ್ಕೆ ಒಳಗಾಗಿದ್ದ ಗುತ್ತಿಗೆದಾರನನ್ನು ರಕ್ಷಿಸಿ ಆತನೊಂದಿಗೆ ಇದ್ದ ಅಪಹರಣಕಾರರನ್ನು ಬಂಧಿಸಲಾಗಿದೆ.ಈ ಘಟನೆಯಲ್ಲಿ ಪ್ರಮುಖ ಆರೋಪಿ ಬಸಪ್ಪ ದಳವಾಯಿ ಹಾಗೂ ಆತನ ಸಹಚರರಾದ ಕೃಷ್ಣಪ್ಪ ಬಡಿಗೇರ, ಮಜೀದಸಾಬ್ ನದಾಫ, ರುದ್ರಪ್ಪ ಭಜಂತ್ರಿ, ಶಂಕರ ಹಿರೇಮೇತ್ರಿ, ನಜೀರ ಮಕಾಂದಾರ, ಹನುಮಂತ ಕಲ್ಲಕುಟರ, ಚನ್ನಪ್ಪ ಮನವಡ್ಡರ, ಶೇಖಪ್ಪ ಕಲ್ಲವಡ್ಡರ, ಭೀಮಪ್ಪ ಕಲ್ಲವಡ್ಡರ ಸೇರಿ ಒಟ್ಟು 10 ಜನರನ್ನು ಬಂಧಿಸಲಾಗಿದೆ ಎಂದರು.
ಪ್ರಮುಖ ಆರೋಪಿ ಬಸಪ್ಪ ದಳವಾಯಿ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ಈ ಅಪಹರಣದ ಹಿಂದೆ ಇನ್ನೂ 10ಕ್ಕೂ ಅಧಿಕ ಆರೋಪಿಗಳು ತಲೆಮರೆಸಿಕೊಂಡಿರುವ ಮಾಹಿತಿ ದೊರೆತಿದ್ದು, ಆದಷ್ಟು ಬೇಗ ಅವರನ್ನೂ ಬಂಧಿಸುವುದಾಗಿ ಮಾಹಿತಿ ನೀಡಿದರು.