ರಾಮನಗರ: ರಾಮನಗರವನ್ನು ಮಾದರಿ ನಗರವನ್ನಾಗಿ ನಿರ್ಮಾಣ ಮಾಡುವುದು ನಮ್ಮ ಗುರಿ ಮತ್ತು ಕನಸು. ಹಂತ ಹಂತವಾಗಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ಎಂ.ಎಚ್.ಕಾಲೇಜು ರಸ್ತೆ ಹಾಗೂ ವಿವೇಕಾನಂದನಗರ ಬಡಾವಣೆ ವ್ಯಾಪ್ತಿಯ ಸಾರ್ವಜನಿಕರು ರಸ್ತೆ ಅಭಿವೃದ್ಧಿ ಪಡಿಸುವಂತೆ ನಗರಸಭೆಗೆ ಮನವಿ ಮಾಡುತ್ತಲೇ ಬಂದಿದ್ದರು. ಅವರ ಮನವಿ ಮೇರೆಗೆ ನಗರೋತ್ಥಾನ ಯೋಜನೆಯಡಿ ೧೨.೫೦ ಕೋಟಿ ವೆಚ್ದದ ೬೦೦ ಮೀಟರ್ ರಸ್ತೆ ಡಾಂಬರೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.
ಶೀಘ್ರದಲ್ಲಿಯೇ ವಿವೇಕಾನಂದನಗರದ ಜನತೆಗೆ ಉತ್ತಮ ಹಾಗೂ ಗುಣಮಟ್ಟದ ರಸ್ತೆ ಲಭಿಸಲಿದ್ದು, ರಸ್ತೆ ಸಮಸ್ಯೆಗೆ ಮುಕ್ತಿ ಸಿಗಲಿದೆ. ೨೭ನೇ ವಾರ್ಡಿನಲ್ಲಿ ಇನ್ನೂ ಬಹಳಷ್ಟು ಕೆಲಸಗಳಿದ್ದು, ಅವುಗಳನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು. ಗುತ್ತಿಗೆದಾರರು ಸ್ಥಳೀಯರಾಗಿದ್ದು ಗುಣಮಟ್ಟದ ಕಾಮಗಾರಿ ಕೈಗೊಳ್ಳಲಿದ್ದಾರೆ. ನಗರಸಭೆ ಎಂಜಿನಿಯರ್ಗಳು ನಿರಂತರವಾಗಿ ಕಾಮಗಾರಿಗಳ ಮೇಲುಸ್ತುವಾರಿ ನೋಡಿಕೊಳ್ಳಲಿದ್ದು ಕಾಮಗಾರಿಗಳಲ್ಲಿ ಲೋಪದೋಷ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಲಾಗಿದೆ ಎಂದು ಹೇಳಿದರು.ಮಾದರಿ ನಗರದ ಕನಸಿಗೆ ನಗರ ನಾಗರಿಕರು ಸಹ ಕೈ ಜೋಡಿಸಬೇಕು. ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛ ರಾಮನಗರ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ. ಈಗಾಗಲೇ ಬಹಳಷ್ಟು ಕಡೆ ನಗರಸಭೆಯ ಸತತ ಪ್ರಯತ್ನ ಮತ್ತು ಜನರಿಗೆ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದವರಿಗೆ ಜಾಗೃತಿ ಮೂಡಿಸಿ ಕಸ ಹಾಕದಂತೆ ತಡೆಗಟ್ಟಿದ ಪರಿಣಾಮ ಬ್ಲಾಕ್ ಸ್ಪಾಟ್ಗಳು ಮಾಯವಾಗಿ ಸ್ವಚ್ಚ ನಗರದ ನಮ್ಮ ಪರಿಕಲ್ಪನೆಗೆ ಸಾಕ್ಷಿಯಾಗಿವೆ. ಹಸಿರು ರಾಮನಗರ ನಮ್ಮ ಗುರಿಯಾಗಿದ್ದು ನಾಗರೀಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪೊಟೋ೧೯ಸಿಪಿಟಿ೧: ರಾಮನಗರದ ವಿವೇಕಾನಂದನಗರ ರೋಟರಿ ವೃತ್ತದ ಬಳಿ ಎಂ.ಎಚ್. ಕಾಲೇಜು ರಸ್ತೆ ಡಾಂಬರೀಕರಣ ಕಾಮಗಾರಿಗೆ ನಗರಸಭೆ ಅಧಕ್ಷ ಕೆ.ಶೇಷಾದ್ರಿ ಗುದ್ದಲಿಪೂಜೆ ನೆರವೇರಿಸಿದರು. ಸದಸ್ಯೆ ಪವಿತ್ರಾ ಲಕ್ಷ್ಮೀಕಾಂತ್, ಅಧಿಕಾರಿಗಳಾದ ವಿಶ್ವನಾಥ್, ನಿರ್ಮಲ, ಪವಿತ್ರ ಇತರರಿದ್ದರು.