ಬಾಗೇವಾಡಿ ಕಾಲುವೆಗಳ ಕೊನೆಯ ಭಾಗದ ಜಮೀನುಗಳಿಗೆ ತಕ್ಷಣವೇ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿ ಸಿರುಗುಪ್ಪ ತಾಲೂಕು ತುಂಗಭದ್ರಾ ಕಾಲುವೆ ನೀರು ಬಳಕೆದಾರರ ಒಕ್ಕೂಟದ ನಿಯೋಗ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಮುನೀರ್ ಅವರಿಗೆ ಬುಧವಾರ ಮನವಿ ಸಲ್ಲಿಸಿತು.
ಸಿರುಗುಪ್ಪ: ತಾಲೂಕಿನ ಬಾಗೇವಾಡಿ ಕಾಲುವೆಗಳ ಕೊನೆಯ ಭಾಗದ ಜಮೀನುಗಳಿಗೆ ತಕ್ಷಣವೇ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿ ಸಿರುಗುಪ್ಪ ತಾಲೂಕು ತುಂಗಭದ್ರಾ ಕಾಲುವೆ ನೀರು ಬಳಕೆದಾರರ ಒಕ್ಕೂಟದ ನಿಯೋಗ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಮುನೀರ್ ಅವರಿಗೆ ಬುಧವಾರ ಮನವಿ ಸಲ್ಲಿಸಿತು.
ಪ್ರಗತಿಪರ ರೈತ ಆರ್. ಸದಾಶಿವ ಮಾತನಾಡಿ, ಬಾಗೇವಾಡಿ ವಿತರಣಾ ಕಾಲುವೆಯ ಕೆಳಭಾಗದ ಕೃಷಿ ಭೂಮಿಗಳಿಗೆ ಸರಿಯಾಗಿ ನೀರು ತಲುಪದೆ ಕೃಷಿ ಚಟುವಟಿಕೆ ಇಲ್ಲದಂತಾಗಿದೆ. ಮೇಲ್ಭಾಗದಲ್ಲಿ ನೀರನ್ನು ಅನಧಿಕೃತವಾಗಿ ಬಳಕೆ ಮಾಡುತ್ತಿರುವುದನ್ನು ತಡೆಯದೇ ಇರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಾಲುವೆಯ ಮೇಲ್ಭಾಗದಲ್ಲಿ ನಡೆಯುವ ನೀರು ಕಳವು ಹಾಗೂ ಅಕ್ರಮ ಪಂಪ್ಸೆಟ್ಗಳಿಗೆ ಕಡಿವಾಣ ಹಾಕಬೇಕು. ''''ಟೇಲ್ ಎಂಡ್'''' ಭಾಗದಲ್ಲಿರುವ ಪ್ರತಿಯೊಂದು ಹಸನಾದ ಜಮೀನಿಗೂ ಹಂತ-ಹಂತವಾಗಿ ಪೂರ್ಣ ಪ್ರಮಾಣದ ನೀರು ತಲುಪಿಸಬೇಕು. ನೀರಿನ ಕೊರತೆ ಉಂಟಾಗದಂತೆ ಇಲಾಖೆಯಿಂದ ಶಿಸ್ತುಬದ್ಧವಾಗಿ ''''ವಾರಬಂದಿ'''' (ಸರದಿ) ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತವಾಗಿ ಬಾಗೇವಾಡಿ ಕಾಲುವೆಗಳ ಕೊನೆಯ ಭಾಗದವರೆಗೂ ನೀರು ತಲುಪಿಸದಿದ್ದರೆ, ನೀರಾವರಿ ಕಚೇರಿಯ ಮುಂದೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಎಲ್ಲ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸುವ ಉದ್ದೇಶದಿಂದ ತುಂಗಭದ್ರಾ ನದಿ ಮತ್ತು ವೇದಾವತಿ ಹಗರ ನದಿಯ ಮೂಲಕ ಚೇಕ್ ಡ್ಯಾಂ ನಿರ್ಮಿಸಲು ಮೇಲಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಲಾಗಿದೆ ಎಂದು ಸಹಾಯಕ ಅಭಿಯಂತ ಮುನೀರ್ ಭರವಸೆ ನೀಡಿದರು. ನರಸಿಂಹಮೂರ್ತಿ, ಚನ್ನಬಸವ, ಸತ್ಯನಾರಾಯಣ ರೆಡ್ಡಿ, ಜಗನಾಥರೆಡ್ಡಿ, ಪಂಪನಗೌಡ, ನಾಗನಗೌಡ, ಬಸಪ್ಪ, ದ್ಯಾವಣ್ಣ, ಶಿವಮೂರ್ತಿ, ದೊಡ್ಡ ಶರಬಣ್ಣ, ದಾದವಲಿ, ವೆಂಕಟರಾಮರೆಡ್ಡಿ, ವೆಂಕಟೇಶ, ಆನಂದ ಹೆಗಡೆ, ಶಭುಲಿಂಗ ಇದ್ದರು.