26ಕ್ಕೆ ಹೊ.ನ.ಪುರದಲ್ಲಿ ಉಚಿತ ಆರೋಗ್ಯ ಮೇಳ, ರಕ್ತದಾನ ಶಿಬಿರ
ನಾಗರಿಕರಲ್ಲಿ ತಪ್ಪು ಭಾವನೆ ಮೂಡಿಸುವ ರೀತಿಯಲ್ಲಿ ಕಾರ್ಯಕ್ರಮ ಆಗಬಾರದು ಎಂಬ ದೃಷ್ಟಿಯಿಂದ ಮತ್ತು ರೋಗಿಗಳು ಹಾಗೂ ಆರೈಕೆ ಮಾಡುವವರಿಗೆ ನ್ಯಾಯ ಒದಗಿಸುವ ಸಲುವಾಗಿ ಹೆಚ್ಚಿನ ಕಾಳಜಿಯೊಂದಿಗೆ ಕಾರ್ಯಕ್ರಮ ರೂಪಿಸಲಾಗಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಂಡಾಗ ಮಾತ್ರ ಈ ಪ್ರಯತ್ನವು ಯಶಸ್ವಿಗೊಳ್ಳಲು ಸಾಧ್ಯ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಧನಶೇಖರ್ ಸಲಹೆ ನೀಡಿದರು.
ಹೃದ್ರೋಗ ತಜ್ಞ ವೈದ್ಯರು ಇಸಿಜಿ ಹಾಗೂ ಎಕೊ ಪರೀಕ್ಷೆ ಮೂಲಕ ಚಿಕಿತ್ಸೆ ನೀಡಲಿದ್ದಾರೆ. ಅದೇ ರೀತಿ ನರರೋಗ ತಜ್ಞರು, ಮೂತ್ರಪಿಂಡ ತಜ್ಞರು, ಮುಧುಮೇಹ ತಜ್ಞರು, ಪಿತ್ತಜನಕಾಂಗದ ವೈದ್ಯಕೀಯ ತಜ್ಞರು, ಶಸ್ತ್ರ ಚಿಕಿತ್ಸಾ ತಜ್ಞರು, ಗರ್ಭಿಣಿ ಮತ್ತು ಸ್ತ್ರೀ ರೋಗ ತಜ್ಞರು, ಕೀಲು ಮೂಳೆ ತಜ್ಞರು, ದಂತ ವೈದ್ಯ ತಜ್ಞರು, ಕಿವಿ, ಮೂಗು, ಗಂಟಲು ತಜ್ಞರು, ಮಕ್ಕಳ ತಜ್ಞರು, ಕಣ್ಣಿನ ತಜ್ಞರು, ಚರ್ಮರೋಗ ತಜ್ಞರು, ಮಾನಸಿಕ ಆರೋಗ್ಯ ತಜ್ಞರು ಹಾಗೂ ಆಯುಷ್ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಪ್ರಾರಂಭದಲ್ಲಿ ನೋಂದಣಿ ಮತ್ತು ೩೫ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಬಿಪಿ ಹಾಗೂ ಶುಗರ್ ಪರೀಕ್ಷೆ ಕಡ್ಡಾಯ ಮಾಡಲಾಗಿದ್ದು, ಅವರ ಸಮಸ್ಯೆ ಕುರಿತಂತೆ ತಜ್ಞ ವೈದ್ಯರು ಇರುವ ಕೊಠಡಿಗಳ ಸಂಖ್ಯೆ ತಿಳಿಸುವ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆ ಬಲಭಾಗದಲ್ಲಿ ಇರುವ ದೇವಾಲಯದ ಮುಂಭಾಗದ ಖಾಲಿ ನಿವೇಶನದಲ್ಲಿ ಉಚಿತ ಔಷಧ ವಿತರಣೆ ಕೌಂಟರ್ ತೆರೆಯಲಾಗುತ್ತದೆ. ಚಿಕಿತ್ಸೆಗೆ ಆಗಮಿಸುವ ಜನರಿಗೆ ಆಸ್ಪತ್ರೆ ಕ್ಯಾಂಟೀನ್ ಸಮೀಪ ಭೋಜನ ವ್ಯವಸ್ಥೆಯನ್ನು ಶಾಸಕ ಎಚ್.ಡಿ.ರೇವಣ್ಣ ವ್ಯವಸ್ಥೆ ಮಾಡಲಿದ್ದಾರೆ. ಜತೆಗೆ ಅಗತ್ಯ ಔಷಧ ಕೊಡಿಸುವ ಭರವಸೆ ನೀಡಿದ್ದಾರೆ ಎಂದರು.
ಅರವಳಿಗೆ ತಜ್ಞ ಡಾ. ವಿಜಯ್ ಕುಮಾರ್, ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಡಾ. ವಿನಯ್ ಕುಮಾರ್, ಡಾ. ನಾಗೇಂದ್ರ, ಡಾ. ದಿನೇಶ್, ಡಾ. ಸೆಲ್ವಕುಮಾರ್, ಡಾ.ಅಶ್ಪತಿ ಇದ್ದರು.ಹೊಳೆನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸೋಮವಾರ ಆಯೋಜನೆ ಮಾಡಿರುವ ಉಚಿತ ಆರೋಗ್ಯ ಮೇಳ, ರಕ್ತದಾನ ಶಿಬಿರ ಕುರಿತು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್ ಮಾತನಾಡಿದರು.