ನಾಳೆಯಿಂದ ಮಡಿಕೇರಿ ಸಂಸದರ ಕಚೇರಿ ಮುಂದೆ ಸಿಐಟಿಯು ಪ್ರತಿಭಟನೆ

KannadaprabhaNewsNetwork | Published : Jan 22, 2024 2:18 AM

ಸಾರಾಂಶ

ಜ.23ರಂದು ಅಂಗನವಾಡಿ ನೌಕರು ಹಾಗೂ ಬಿಸಿಊಟ ನೌಕರ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ಜ.24ರಂದು ಗ್ರಾಮ ಪಂಚಾಯಿತಿ ನೌಕರರ ಹಾಗೂ ಜ.25ರಂದು ಕಾಫಿ ಬೆಳೆಗಾರರು, ಕಟ್ಟಡ ಕಾರ್ಮಿಕರು, ಆಸ್ಪತ್ರೆ ನೌಕರರು ಮತ್ತು ಅಮಾಲಿ ಕಾರ್ಮಿಕರ ಬೇಡಿಕೆಗಳ ಆಧಾರದ ಮೇಲೆ ಹೋರಾಟ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿ ವತಿಯಿಂದ ಜ.23, 24, 25ರಂದು ಮೂರು ದಿನಗಳ ಕಾಲ ಮಡಿಕೇರಿ ಸಂಸದರ ಕಚೇರಿಯ ಮುಂದೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಹಲವು ನೌಕರರ ನೇತೃತ್ವದಲ್ಲಿ ಹೋರಾಟ ನಡೆಯಲಿದೆ ಎಂದು ಸಿಐಟಿಯು ಕೊಡಗು ಜಿಲ್ಲಾಧ್ಯಕ್ಷ ಭರತ್ ಬಿ.ಆರ್. ತಿಳಿಸಿದರು.ನಗರದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಟ್ಯಂತರ ಶ್ರಮ ಜೀವಿಗಳ ಜೀವನ ಮತ್ತು ಜೀವನಾಧಾರ ಉತ್ತಮಪಡಿಸಲು ಹಾಗೂ ದುಡಿಯುವ ಜನರ ಘನತೆಯ ಬದುಕನ್ನು ಖಾತ್ರಿಗೊಳಿಸಲು ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮೂರು ದಿನ ಪ್ರತಿಭಟನೆ ನಡೆಯಲಿದೆ. ಜ.23ರಂದು ಅಂಗನವಾಡಿ ನೌಕರು ಹಾಗೂ ಬಿಸಿಊಟ ನೌಕರ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ಜ.24ರಂದು ಗ್ರಾಮ ಪಂಚಾಯಿತಿ ನೌಕರರ ಹಾಗೂ ಜ.25ರಂದು ಕಾಫಿ ಬೆಳೆಗಾರರು, ಕಟ್ಟಡ ಕಾರ್ಮಿಕರು, ಆಸ್ಪತ್ರೆ ನೌಕರರು ಮತ್ತು ಅಮಾಲಿ ಕಾರ್ಮಿಕರ ಬೇಡಿಕೆಗಳ ಆಧಾರದ ಮೇಲೆ ಹೋರಾಟ ನಡೆಯಲಿದೆ. ಇದರ ನೇತೃತ್ವವನ್ನು ಸಿಐಟಿಯು ವಹಿಸಲಿದೆ ಎಂದು ತಿಳಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಬು ಮಾತನಾಡಿ, ದೇಶಾದ್ಯಂತ ಎಲ್ಲ ಸಂಸದರ ಕಚೇರಿಯ ಮುಂದೆ ಸಿಐಟಿಯು ಸಮಿತಿಯು ಮೂರು ದಿನ ಹೋರಾಟಕ್ಕೆ ಕರೆ ನೀಡಿದ್ದು, ಅದರ ಭಾಗವಾಗಿ ಕೊಡಗು-ಮೈಸೂರು ಸಂಸದರ ಮಡಿಕೇರಿ ಕಚೇರಿಯ ಮುಂದೆ ಆಹಾರ, ಆರೋಗ್ಯ, ಶಿಕ್ಷಣ ಉಳಿಸಿ, ದೇಶವನ್ನು ಅಭಿವೃದ್ಧಿಪಡಿಸಿ, ಸಮಾನ ವೇತನ ನಿಗದಿಪಡಿಸಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಇಟ್ಟು ಸಿಐಟಿಯು ಅಡಿಯಲ್ಲಿ ನೊಂದಾಯಿತ 9 ಸಂಘಟನೆಯ ಕಾರ್ಮಿಕರ ನೇತೃತ್ವದಲ್ಲಿ ಹೋರಾಟ ನಡೆಯಲಿದೆ ಎಂದರು.ಇದೇ ಸಂದರ್ಭ ಜಿಲ್ಲಾ ಖಜಾಂಜಿ ಕುಟ್ಟಪ್ಪ, ಪದಾಧಿಕಾರಿಗಳಾದ ಶಾಜಿ ರಮೇಶ್, ಕೆ.ಕೆ.ಹರಿದಾಸ್, ಮಾದೇವ ಎಂ.ಎಸ್. ಹಾಜರಿದ್ದರು.

Share this article