- ಬೀರೂರು ಗುರು ಭವನದಲ್ಲಿ ಪೌರ ಕಾರ್ಮಿಕ ದಿನಾಚರಣೆ- ಶಾಸಕರಿಗೆ ಪೌರಸನ್ಮಾನ
ಕನ್ನಡಪ್ರಭ ವಾರ್ತೆ ಬೀರೂರು
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ. ನಾನೂ ಪೌರ ಕಾರ್ಮಿಕರ ಯಾವುದೇ ಕೆಲಸ ಮಾಡಿಕೊಡಲು ಬದ್ಧ. ಎಂತಹ ಸವಾಲಿನ ಸಂದರ್ಭದಲ್ಲೂ ಸ್ವಚ್ಛತಾ ಕಾರ್ಯದಲ್ಲಿ ನಿರತರಾದ ಪೌರ ಕಾರ್ಮಿಕರು ಸಮಾಜದಲ್ಲಿ ಸ್ವಚ್ಛತಾ ಸೇನಾನಿಗಳೇ ಆಗಿದ್ದಾರೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಪಟ್ಟಣದ ಗುರು ಭವನದಲ್ಲಿ ಭಾನುವಾರ ನಡೆದ ಪೌರ ಕಾರ್ಮಿಕ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ಪೌರ ಕಾರ್ಮಿಕರಿಗೆ ಅನೇಕ ಸಂಕಷ್ಟಗಳು ಇದ್ದವು. ಅದನ್ನು ಬಂದಂತಹ ಸರ್ಕಾರಗಳು ಹಂತ ಹಂತವಾಗಿ ಬಗೆಹರಿಸಿವೆ. ಅನಂತರದ ದಿನಗಳಲ್ಲಿ ಸಿದ್ದರಾಮಯ್ಯನವರು ಸಂಬಳವನ್ನು ನೇರಪಾವತಿ, ಆರೋಗ್ಯದ ದೃಷ್ಠಿಯಿಂದ ಸಲಕರಣೆಗಳನ್ನು ನೀಡಿದ್ದಾರೆ. ಇನ್ನಷ್ಟು ಸೌಕರ್ಯ ನೀಡಲು, ಪೌರಕಾರ್ಮಿಕರ ವೇತನವನ್ನು ಹೆಚ್ಚಿಸಲು ಮುಖ್ಯಮಂತ್ರಿ ಅವರಿಗೆ ಒತ್ತಡ ಹೇರುತ್ತೇನೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷೆ ಹಾಗೂ ಸದಸ್ಯೆ ವನಿತಾ ಮಧು ಮಾತನಾಡಿ, ಪೌರ ಕಾರ್ಮಿಕರು ನಿತ್ಯ ನಮ್ಮ ಮನೆ ಕಸ ಸಂಗ್ರಹಿಸುತ್ತಾರೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶ ಶುದ್ಧ ಮಾಡುತ್ತಾರೆ. ಅವರು ಮಾಡುವಷ್ಟು ಶುದ್ಧವಾದ ಕೆಲಸ ಬೇರೆ ಯಾರೂ ಮಾಡಲ್ಲ. ಧಣಿವರಿಯದ ಕಾಯಕ ಯೋಗಿಗಳೇ ಪೌರಕಾರ್ಮಿಕರು. ಅವರು ದೇಶದ ಸ್ವಚ್ಛತಾ ರಾಯಭಾರಿಗಳು ಎಂದರು.
ಪುರಸಭೆ ಸದಸ್ಯ ಬಿ.ಕೆ.ಶಶಿಧರ್ ಮಾತನಾಡಿ, ಪೌರ ಕಾರ್ಮಿಕರ ಹಿತಕಾಯುವ ದೃಷ್ಠಿಯಿಂದ ಶಾಸಕ ಆನಂದ್ ಅವರು ಪುರಸಭೆ ಹಿಂಭಾಗದಲ್ಲಿ ಅವರಿಗೆ ವಿಶ್ರಾಂತಿ ಗೃಹ ನರ್ಮಿಸಲು ಹಣ ಬಿಡುಗಡೆ ಮಾಡಿದ್ದಾರೆ. ಕಾಮಗಾರಿ ಮುಗಿಯುವ ಹಂತ ತಲುಪಿದ್ದು, ಶೀಘ್ರವೇ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ದೊರೆಯಲಿದೆ ಎಂದರು.ಪುರಸಭೆ ಸದಸ್ಯ ಬಿ.ಆರ್. ಮೋಹನ್ ಕುಮಾರ್ ಮಾತನಾಡಿ, ತಮ್ಮ ಆರೋಗ್ಯ- ಜೀವವನ್ನು ಲೆಕ್ಕಿಸದೇ ನರ್ಮಲ್ಯಕ್ಕೆ ದುಡಿಯುವ ಪೌರಕರ್ಮಿಕರ ಕೆಲಸವು ಅತ್ಯಂತ ಮಹತ್ವದ್ದಾಗಿದೆ. ಪೌರ ಕಾರ್ಮಿಕರ ಮಕ್ಕಳಿಗೂ ಉತ್ತಮ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕಾರ್ಮಿಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತರೀಕೆರೆ ಡಿ.ಎಸ್.ಎಸ್. ರಾಜ್ಯ ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಮಲಹೊರುವ ಪದ್ಧತಿಯನ್ನು ನಿಷೇಧ ಮಾಡಿದ್ದರೂ ಕೆಲವು ಕಡೆ ಕದ್ದುಮುಚ್ಚಿ ಕೆಲಸ ಮಾಡಿಸುವ ನಡೆಯುತ್ತಿದೆ. ಇದನ್ನು ತಪ್ಪಿಸಬೇಕು. ಪೌರ ಕಾರ್ಮಿಕರು ಸಫಾಯಿ ಕರ್ಮಚಾರಿ ಯೋಜನೆಯಡಿ ಗುರುತಿನ ಚೀಟಿ ಪಡೆದು ಸರ್ಕಾರಿ ಸವಲತ್ತನ್ನು ಪಡೆಯಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಪೌರ ಸೇವಾ ಸಂಘದ ಅಧ್ಯಕ್ಷೆ ಎಚ್.ಜಯಮ್ಮ ಮಾತನಾಡಿ, ಹೊರಗುತ್ತಿಗೆ ಪೌರ ಕಾರ್ಮಿಕರು ಮತ್ತು ನೌಕರರಿಗೆ ನಿವೇಶನ ನೀಡಬೇಕು. ಸಂಕಷ್ಟ ಭತ್ಯೆ ಮತ್ತಿತರ ಸೌಲಭ್ಯಗಳನ್ನು ಕಾಲಕಾಲಕ್ಕೆ ನೀಡಬೇಕು ಎಂದರು.
ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್, ಉಪಾಧ್ಯಕ್ಷ ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರಘು, ಮುಖ್ಯಾಧಿಕಾರಿ ಜಿ.ಪ್ರಕಾಶ್, ಸಂಘದ ಗೌರವಾಧ್ಯಕ್ಷ ಸಿ.ಸುಬ್ರಮಣಿ, ಉಪಾಧ್ಯಕ್ಷ ಮಲ್ಲೇಶ್, ಕಾರ್ಯದರ್ಶಿ ಲೋಕೇಶಪ್ಪ, ಖಜಾಂಚಿ ದಿನೇಶ್, ಜಿಲ್ಲಾ ನಿರ್ದೇಶಕರಾದ ವೈ.ಎಂ. ಲಕ್ಷ್ಮಣ್, ಪುರಸಭೆ ಸದಸ್ಯರಾದ ಜ್ಯೋತಿ ಕುಮಾರ್, ಮಾನಿಕ್ ಬಾಷಾ, ಸಹನ ವೆಂಕಟೇಶ್, ಚೆಲುವರಾಜ್ ಮತ್ತಿತರ ಸದಸ್ಯರು, ಪುರಸಭೆ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಇದ್ದರು.- - -
-19ಬೀರೂರು1.ಜೆಪಿಜಿ:ಬೀರೂರಿನ ಗುರು ಭವನದಲ್ಲಿ ಭಾನುವಾರ ನಡೆದ ಪೌರ ಕಾರ್ಮಿಕ ದಿನ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು.