ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ
ಕನ್ನಡಪ್ರಭ ವಾರ್ತೆ ಕೊಪ್ಪಳಹಾಸನದಲ್ಲಿ ನಡೆದಿರುವ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಿಂದ ನಾಗರಿಕ ಸಮಾಜ ತಲೆತೆಗ್ಗಿಸುವಂತಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ ಹೇಳಿದರು.
ಕೊಪ್ಪಳ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಸಿಗುವಂತೆ ಆಗಬೇಕು ಮತ್ತು ಅವರ ಮಾನ ಕಾಪಾಡಬೇಕಾಗಿದೆ ಎಂದರು.ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಂದಾಗಿ ಈ ಪ್ರಕರಣದಲ್ಲಿ ನ್ಯಾಯ ಕೊಡಿಸಬೇಕು. ಇದರಲ್ಲಿ ರಾಜಕೀಯ ಮಾಡದೆ ಮಹಿಳೆಯರಿಗೆ ನ್ಯಾಯ ಸಿಗುವಂತಾಗಬೇಕಾಗಿದೆ. ಈಗಾಗಲೇ ಮುತುವರ್ಜಿ ವಹಿಸಿರುವ ರಾಜ್ಯ ಸರ್ಕಾರ ತಕ್ಷಣ ಎಸ್ಐಟಿ ರಚನೆ ಮಾಡಿ, ತನಿಖೆ ನಡೆಸುತ್ತಿದೆ. ಆದರೆ, ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣನನ್ನು ಕರೆತರಲು ಡಿಪ್ಲೋಮೆಟ್ ಪಾಸ್ಪೋರ್ಟ್ ಮುಟ್ಟುಗೊಲು ಹಾಕಿಕೊಳ್ಳಲು ಕೇಂದ್ರ ಮನಸ್ಸು ಮಾಡುತ್ತಿಲ್ಲ ಎಂದರು.
ಬ್ರೀಜ್ ಭೂಷಣ ಕೇಸ್, ಮಣಿಪುರ ಮಹಿಳೆಯರ ಬೆತ್ತಲೆ ಮಾಡಿದರೂ ಪ್ರಧಾನಿ ಮೌನಿಯಾಗಿದ್ದಾರೆ. ಪ್ರಧಾನಿ ಸುಮ್ಮನೆ ಇರುವುದು ಅನುಮಾನ ಮೂಡಿಸುತ್ತಿದೆ ಎಂದು ಕಿಡಿಕಾರಿದರು.ವಿಕೃತಕಾಮಿ ಉಮೇಶ ರೆಡ್ಡಿಗಿಂತ ನೂರು ಪಟ್ಟು ಈ ಪ್ರಜ್ವಲ್ ರೇವಣ್ಣ ವಿಕೃತವಾಗಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಮಗ್ರ ತನಿಖೆಯಾಗಲಿ:
ಪ್ರಕರಣದ ಕುರಿತು ಕೂಡಲೇ ತ್ವರಿತ ತನಿಖೆಯಾಗಬೇಕು. ಪ್ರಕರಣವನ್ನು ಎಲ್ಲ ಮಗ್ಗಲಿಂದಲೂ ತನಿಖೆ ನಡೆಸಿ, ನಿರ್ದಾಕ್ಷಿಣ್ಯ ಕ್ರಮವಾಗಬೇಕು. ಚುನಾವಣಾ ಆಯೋಗ ಮಧ್ಯಪ್ರವೇಶಿಸಿ, ಪ್ರಸಕ್ತ ಲೋಕಸಭಾ ಚುನಾವಣೆಯಿಂದ ಅವರನ್ನು ವಜಾಗೊಳಿಸಬೇಕು. ಬಿಜೆಪಿ ಹಠಾವೋ ಬೇಟಿ ಬಚಾವೊ ಎಂಬ ಅಭಿಯಾನ ಆರಂಭ ಮಾಡಬೇಕಾಗಿದೆ. ನೇಹಾ ಪ್ರಕರಣದಲ್ಲಿ ಒಂದು ಗಂಟೆಯಲ್ಲಿ ಆರೋಪಿ ಬಂಧನವಾಗಿದೆ, ಆದರೆ, ಪ್ರಜ್ವಲ್ ಪ್ರಕರಣದಲ್ಲಿ ಇನ್ನು ಬಂಧನವಾಗಿಲ್ಲ ಎಂದರು.ಈ ಸಂದರ್ಭದಲ್ಲಿ ಕಿಶೋರಿ ಬೂದನೂರು, ಜಯಲಕ್ಷ್ಮಿ ಜ್ಯೋತಿ, ರಜಿಯಾ ಮನಿಯಾರ, ಸಾವಿತ್ರಿ ಮುಜಮುದಾರ ಇದ್ದರು.