ಕಾರಟಗಿ: ಮೊಬೈಲ್, ಸಾಮಾಜಿಕ ಜಾಲತಾಣದ ಹಾವಳಿಯಿಂದ ಯುವ ಸಮೂಹ ಪುಸ್ತಕ ಮರೆಯುತ್ತಿವೆ, ಇನ್ನು ಧಾರವಾಹಿಗಳು ನಮ್ಮ ಕೂಡಾ ಕುಟುಂಬಗಳ ಧಿಕ್ಕು ತಪ್ಪಿಸುತ್ತಿವೆ, ಹೀಗಾಗಿ ನಮ್ಮ ಸಂಸ್ಕೃತಿ ನಶಿಸಿ ಹೋಗುತ್ತಿದ್ದು, ನಮ್ಮ ನಾಡಿನ ಸಂಸ್ಕೃತಿ ಸಂಪ್ರದಾಯ ಬಿಂಬಿಸುವ ಜಾನಪದ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಮೂಲಕ ಉಳಿಸಿ ಬೆಳಸಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಮೊಬೈಲ್ ಹಾಗೂ ಟಿವಿಗಳಿಂದ ಇಂತಹ ಸೌಹಾರ್ದ ಜಾನಪದ ಕಾರ್ಯಕ್ರಮಗಳಿಂದ ಯುವ ಸಮುದಾಯ ದೂರವಾಗುತ್ತಿರುವುದು ವಿಷಾದನೀಯ. ನಮ್ಮ ನಾಡಿನ ಜಾನಪದ ಸಂಭ್ರಮ ಸೌಹಾರ್ದ ಕಾರ್ಯಕ್ರಮ ಬಹಳ ವಿಶಿಷ್ಟವಾದದ್ದು. ಓದುವ ಸಂಸ್ಕೃತಿ ಎಲ್ಲರಿಗೂ ಬಹುಮುಖ್ಯ ಆದರೆ, ಈಗ ನಮ್ಮ ಯುವ ಸಮೂಹ ದಾರಿ ತಪ್ಪುತ್ತಿವೆ. ಆಧುನಿಕತೆ ಮತ್ತು ತಂತ್ರಜ್ಞಾನ ಜ್ಞಾನಕ್ಕೆ ಒಳ್ಳೆಯದು ಅಷ್ಟೇ ಅಪಾಯಕಾರಿ. ಮೊಬೈಲ್, ವಾಟ್ಸಾಪ್, ಫೇಸ್ಬುಕ್ ಇನ್ನಿತರ ಆ್ಯಪ್ಗಳಿಂದ ಪುಸ್ತಕಗಳು ಮರೆಯಾಗುತ್ತಿವೆ ಎಂದು ವಿಷಾಧಿಸಿದರು.
ಈ ಜಾನಪದ ಎಲ್ಲ ಕಲೆಗಳಿಗೆ ತಾಯಿ ಬೇರು ಇದ್ದಂತೆ. ಈ ಜಾನಪದದಿಂದಲೇ ಎಲ್ಲವೂ ಪ್ರಾರಂಭವಾಗುವುದು. ನನಗೆ ಕನ್ನಡ ಮತ್ತು ಸಂಸ್ಕೃತಿ ಸಚಿವನಾದ ಮೇಲೆ ಇಲಾಖೆ ನಿಭಾಯಿಸುವುದು ಹೇಗೆ ಎಂದು ಚಿಂತೆಗೀಡಾಗಿದ್ದೆ. ಆದರೆ ಎಲ್ಲವನ್ನು ಪ್ರಾರಂಭ ಮಾಡಿದೆ. ಅದೇ ಸಮಯದಲ್ಲಿ ಕರ್ನಾಟಕ ಎಂದು ಹೆಸರಿಟ್ಟು ೫೦ ನೇ ವರ್ಷಪೂರ್ಣಗೊಂಡಿತ್ತು. ಆ ಕುರಿತು ಒಂದು ವರ್ಷದ ಕಾರ್ಯಕ್ರಮ ನಡೆಸುವ ಅವಕಾಶ ಸಿಕ್ಕಿತು. ಇದೇ ಅವಕಾಶ ಬಳಸಿಕೊಂಡು ಸಾಹಿತಿ, ಕಲಾವಿದರನ್ನು ಕಟ್ಟಿಕೊಂಡು ಕಾರ್ಯಕ್ರಮ ಪ್ರಾರಂಬಿಸಿದೆ. ಅಂದಿನಿಂದ ಈ ಇಲಾಖೆಗೆ ಇರುವ ಪ್ರೀತಿ, ಗೌರವ, ಮನ್ನಣೆ ನನಗೆ ತಿಳಿದಂತೆ ಯಾವ ಇಲಾಖೆಯಲ್ಲೂ ಸಿಗಲಿಕ್ಕಿಲ್ಲ ಅನಿಸಿತು. ಅಲ್ಲದೆ ರಾಜ್ಯದಲ್ಲಿ ಯಶಸ್ವಿಯಾಗಿ ಎರಡುವರೆ ವರ್ಷಗಳಿಂದ ಇಲಾಖೆಗೆ ಮತ್ತು ಸರ್ಕಾರಕ್ಕೆ ಯಾವುದೇ ಕೆಟ್ಟ ಹೆಸರು ಬಾರದಂತೆ ರಾಜ್ಯ ಪ್ರಶಸ್ತಿ ನೀಡಿದ್ದೇವೆ. ನಾನು ಜನತೆ ಕೊಟ್ಟಿರುವ ಪ್ರೀತಿ ವಿಶ್ವಾಸದಿಂದ ಇಲಾಖೆ ನಿರ್ವಹಣೆ ಮಾಡುತ್ತಿದ್ದೇನೆ. ವಿನಹ ನಾನು ಯಾವುದನ್ನು ಕೇಳಿ ಎಂದಿಗೂ ನನ್ನ ಪ್ರತಿಷ್ಠೆಗಾಗಿ ಕೆಲಸ ಮಾಡುತ್ತಿಲ್ಲ.ನಮ್ಮ ಜಿಲ್ಲೆಯಲ್ಲಿ ಎಲ್ಲ ಕಲೆಗಳಿವೆ. ಆದರೆ ಅವಕಾಶ ಸಿಗುತ್ತಿರಲಿಲ್ಲ. ನಾನು ಇಲಾಖೆ ಸಚಿವರಾದಾಗನಿಂದ ೧೦ ರಿಂದ ೧೨ ಜನರನ್ನು ಜಿಲ್ಲೆಯಲ್ಲಿ ಅಕಾಡೆಮಿ ಸದಸ್ಯರನ್ನಾಗಿ ಮಾಡಿದ್ದೇನೆ. ಇಲಾಖೆಯಲ್ಲಿ ಎಲ್ಲವನ್ನು ಗುರುತಿಸುವ ಅವಕಾಶ ಕೊಟ್ಟಿದ್ದರೆ ಕನಕಾಚಲಪತಿ ಆಶೀರ್ವಾದಿಂದ ದೊರೆತಿದೆ. ಹಿಂದಿನ ಕಾಲದಲ್ಲಿ ಚರ್ಚ, ದೇವಸ್ಥಾನ ಹೀಗೆ ಎಲ್ಲ ಜಾತಿಧರ್ಮದದವರ ದೇವಸ್ಥಾನಕ್ಕೆ ಮಸೀದಿಗೆ ತೆರಳುತ್ತಿದ್ದೆವು ಆಗ ಯಾವುದೊ ಗೊತ್ತಾಗುತ್ತಿರಲಿಲ್ಲ ಎಲ್ಲೆಡೆ ಹೋಗುತ್ತಿದ್ದೇವು, ಆದರೆ ಈಗ ಬೇರೆ ಬೇರೆ ರೀತಿ ವಿಂಗಡಿಸಿ ಜಾತಿ ಬೀಜ ಬಿತ್ತು ಕೆಲಸವಾಗುತ್ತಿದೆ. ಈ ಜಾತಿ ಬೀಜ ನಿರ್ನಾಮವಾಗಬೇಕಾದರೆ ಇಂತಹ ಸೌಹಾರ್ದ ಜಾನಪದ ಸಂಭ್ರಮ ಕಾರ್ಯಕ್ರಮಗಳು ಪ್ರತಿಯೊಂದು ಊರಿನಲ್ಲಿ ನಡೆಯಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ ಮಾತನಾಡಿದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಜೀವನ ಸಾಬ್ ವಾಲಿಕಾರ ಬಿನ್ನಾಳ ಇವರಿಂದ ಜಾನಪದ ಸಾಹಿತ್ಯದಲ್ಲಿ ಸೌಹಾರ್ಧತೆ ಕುರಿತು ಉಪನ್ಯಾಸ ನಡೆಯಿತು.
ಬಳಿಕ ವಿವಿಧ ಜಾನಪದ ಕಲಾತಂಡಗಳಿಂದ ಸುಡಗಾಡು ಸಿದ್ಧರ ಕೈಚಳಕ, ಜಾನಪದ ಗಾಯನ, ಗೀಗೀ ಪದ, ತತ್ವಪದ, ಬೀಸುವ ಕಲ್ಲಿನ ಪದ, ರಿವಾಯತ್ ಪದ, ಹೆಜ್ಜೆ ಕುಣಿತ, ಸಂಪ್ರದಾಯ ಪದ, ಸುಗ್ಗಿಹಾಡು, ಸೋಬಾನೆ ಪದ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.ಈ ವೇಳೆ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಹಿಬೂಬ್ ಕಿಲ್ಲೆದಾರ, ಗ್ಯಾರಂಟಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಅರಳಿ,ತಾಲೂಕಾಧ್ಯಕ್ಷ ದೇವಪ್ಪ ಬಾವಿಕಟ್ಟಿ, ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಪುರಸಭೆ ಸದಸ್ಯ ಸುಪ್ರಿಯಾ ಅರಳಿ, ಸೋಮನಾಥ ದೊಡ್ಡಮನಿ, ಶರಣಪ್ಪ ದಿವಟರ್, ಸಿ. ಗದ್ದೆಪ್ಪ, ಶೇಖರಪ್ಪ ಗ್ಯಾರೇಜ ಸೇರಿದಂತೆ ಕಲಾವಿದರು, ಮತ್ತಿತರರು ಇದ್ದರು.
ಲೇಖಕ ರಮೇಶ ಬನ್ನಿಕೊಪ್ಪ, ಮಂಜುನಾಥ ಚಿಕ್ಕೇನಕೊಪ್ಪ ಮತ್ತು ಶಿವರಾಜಕುಮಾರ ಕಾರ್ಯಕ್ರಮ ನಿರ್ವಹಣೆ ಮಾಡಿದರು.ಬಾಲಕಿ ನಾಮಕರಣ:
ತಾಲೂಕಿನ ಮಾರಿಕ್ಯಾಂಪ್ನ ಶಿವಕುಮಾರ ನೇತ್ರಾವತಿ ದಂಪತಿಗಳು ತಮ್ಮ ಹೆಣ್ಣು ಮಗುವಿಗೆ ಜಾನಪದ ಎಂದು ನಾಮಕರಣ ಮಾಡಿರುವ ಹಿನ್ನೆಲೆ ಸಚಿವ ತಂಗಡಗಿಯವರು ವೇದಿಕೆಯಲ್ಲಿ ಬಾಲಕಿಗೆ ಹಾಗೂ ಪಾಲಕರಿಗೆ ಸನ್ಮಾನಿಸಿ ಗೌರವಿಸಿದರು.