ರಾಮನಗರ: ಟಿಪ್ಪರ್ ಲಾರಿಗಳ ಸಂಚಾರದಿಂದ ಪುಟುದೇಳುತ್ತಿರುವ ಧೂಳಿನ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಗ್ರಾಮಸ್ಥರೊಂದಿಗೆ ಲಾರಿ ಚಾಲಕರು ಮತ್ತು ಮಾಲೀಕರು ತಿರುಗಿ ಬಿದ್ದಿದ್ದರಿಂದ ಉಂಟಾದ ಘರ್ಷಣೆ ತಪ್ಪಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ತಾಲೂಕಿನ ಬಿಡದಿ ಹೋಬಳಿ ಹೆಗ್ಗಡಗೆರೆ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಈ ಘಟನೆಯಲ್ಲಿ ಪೊಲೀಸರು ಲಾಠಿ ಬೀಸುವ ವೇಳೆ ತಳ್ಳಾಟ ನೂಕಾಟದಲ್ಲಿ ಕೆಳಕ್ಕೆ ಬಿದ್ದ 85 ವರ್ಷದ ಕಾಡಪ್ಪ ಎಂಬುವರ ಕೈಗೆ ಪೆಟ್ಟಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಟಿಪ್ಪರ್ ಲಾರಿಗಳ ಓಡಾಟವನ್ನು ತಡೆಯಲು ಮುಂದಾದ ಗ್ರಾಮಸ್ಥರಿಗೆ ಲಾರಿ ಚಾಲಕರು ಮತ್ತು ಮಾಲೀಕರು ಗೂಂಡಾ ವರ್ತನೆ ತೋರಿದರೆಂದು, ಇವರ ಒತ್ತಡಕ್ಕೆ ಮಣಿದ ಪೊಲೀಸರು ಕೂಡ ಪ್ರತಿಭಟನಾನಿರತರಿಗೆ ರಕ್ಷಣೆ ನೀಡುವ ಬದಲಿಗೆ ನಮ್ಮ ಮೇಲೆಯೇ ದೌರ್ಜನ್ಯ ಎಸಗಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಸಂಧಾನ ಸಭೆಗಳು ವಿಫಲ:
ಅಂತಿಮವಾಗಿ ಜು.17ರಂದು ನಡೆದ ಸಭೆಯಲ್ಲಿ ಗ್ರಾಮಸ್ಥರು ಕೆಲವು ಷರತ್ತು ಹಾಗೂ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಇದರ ಬಗ್ಗೆ ಸಭೆ ನಡೆಸಿ ನಿರ್ಧಾರ ತಿಳಿಸುವುದಾಗಿ ಹೇಳಿ ಕ್ರಷರ್ ಮಾಲೀಕರು ಪೊಲೀಸರ ನೆರವಿನಲ್ಲಿ ಲಾರಿಗಳನ್ನು ರಸ್ತೆಗಿಳಿಸಿದ್ದರು.
ಆದರೂ ಟಿಪ್ಪರ್ ಲಾರಿಗಳ ಓಡಾಟ ಕಡಿಮೆಯಾಗದ ಕಾರಣ ಸೋಮವಾರ ಬೆಳಿಗ್ಗೆ ಹೆಗ್ಗಡಗೆರೆ ಗ್ರಾಮಸ್ಥರು ಲಾರಿಗಳನ್ನು ಅಡ್ಡಗಟ್ಟಲು ಮುಂದಾದಾಗ ಚಾಲಕರು ಲಾರಿಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸಂಚಾರ ರಸ್ತೆ ಬಂದ್ ಮಾಡಿದರು. ಈ ವೇಳೆ ಲಾರಿ ಮಾಲೀಕರು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದದ ಜತೆಗೆ ತಳ್ಳಾಟ ನಡೆದಿದೆ. ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು ಲಾಠಿ ಬೀಸಿ ಗುಂಪನ್ನು ಚದುರಿಸಿದ್ದಾರೆ. ಗ್ರಾಮಸ್ಥರು ಕೆಲ ಲಾರಿ ಮಾಲೀಕರ ದುರ್ವರ್ತನೆ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಆತಂಕದಲ್ಲಿ 250 ಕುಟುಂಬಗಳು
ಬಾಕ್ಸ್ ............
ಹೆಗ್ಗಡಗೆರೆ ಗ್ರಾಮದಲ್ಲಿನ ಸಮಸ್ಯೆಗೆ ಮುಕ್ತಿ ನೀಡಬೇಕೆಂದು ಗ್ರಾಮಸ್ಥರು ಸ್ಥಳೀಯ ಶಾಸಕರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೊರೆ ಹೋಗಿದ್ದಾರೆ. ನ್ಯಾಯ ಸಿಗದಿದ್ದರೆ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಪೊಲೀಸರು ಗಣಿ ಮಾಲೀಕರ ಪರವಾಗಿ ನಿಂತು ನಮ್ಮ ಮೇಲೆ ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ ನಾಳೆಯಿಂದಲೇ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಗಣಿಗಾರಿಕೆ ಇಲಾಖೆ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಅಲ್ಲದೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೂ ದೂರು ನೀಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
6.ಬಿಡದಿಯ ಹೆಗ್ಗಡಗೆರೆ ಗ್ರಾಮದಲ್ಲಿ ಲಾರಿಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿರುವ ದೃಶ್ಯ.
7.ಲಾರಿ ಮಾಲೀಕರು, ಗ್ರಾಮಸ್ಥರ ನಡುವೆ ವಾಗ್ವಾದ ನಡೆಯುತ್ತಿರುವ ದೃಶ್ಯ.8.ಪೊಲೀಸರ ಲಘು ಲಾಠಿಪ್ರಹಾರದ ವೇಳೆ ವೃದ್ಧ ಕಾಡಯ್ಯ ಗಾಯಗೊಂಡಿರುವುದು.