ರಾಮನಗರ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ಅವರನ್ನು ಸತ್ಯಾಗ್ರಹ ಸ್ಥಳದಿಂದ ಸರ್ವಾಧಿಕಾರಿ ದಬ್ಬಾಳಿಕೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಸೋಮವಾರ ಈಡುಗಾಯಿ ಚಳವಳಿ ನಡೆಸಿದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ದೇಶದಲ್ಲಿ ಪ್ರಜಾಪ್ರಭುತ್ವ ಪ್ರಸ್ತುತ ಅಪಾಯದ ಅಂಚಿನಲ್ಲಿದ್ದು, ಉದ್ಯೋಗವಿಲ್ಲದೆ ಯುವ ಜನಾಂಗ ದಾರಿತಪ್ಪುತ್ತಿದ್ದಾರೆ. ಯುವಕರ ಭವಿಷ್ಯದ ಬಗ್ಗೆ ಕೇಂದ್ರ ಸರ್ಕಾರದಿಂದ ಪ್ರಾಮಾಣಿಕ ಚಿಂತನೆ ನಡೆದಿಲ್ಲ. ನೀಟ್ ಪರೀಕ್ಷೆಯನ್ನು ಪ್ರಾಮಾಣಿಕವಾಗಿ ನಡೆಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಇದರಿಂದ ಅನೇಕರು ಸಾವಿಗೀಡಾದರು ಎಂದು ದೂರಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಹಿರಿಯ ಹೋರಾಟಗಾರ ಸೋನಮ್ ವಾಂಗ್ಟಕ್ ಮೂರು ದಿನಗಳಿಂದ ಸತ್ಯಾಗ್ರಹ ಮಾಡುತ್ತಿದ್ದು, ಕೇಂದ್ರ ಸರ್ಕಾರವು ಇವರ ಸತ್ಯಾಗ್ರಹವನ್ನು ಹತ್ತಿಕ್ಕಲು ಪ್ರಯತ್ನಪಟ್ಟಿರುವುದು ಘೋರ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.ನ್ಯಾಯಯುತ ಬೇಡಿಕೆಗಳಿಗಾಗಿ ಸತ್ಯಾಗ್ರಹದಂತಹ ಹೋರಾಟದ ಬಗ್ಗೆ ಮಹಾತ್ಮಾಗಾಂಧೀಜಿಯವರು ಹೇಳಿದ್ದಾರೆ. ಕಳೆದ 20 ದಿನಗಳಿಂದ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಟುಕ್ ಅವರು ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯಲಿ ವಿಫಲವಾಗಿರುವುದು ಖಂಡಿಸಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಪೊಲೀಸರು ಮಫ್ತಿಯಲ್ಲಿ ಮಲಗಿದ್ದ ಅವರನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಬಂಧಿಸಿ ತಂದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದರಿಂದ ಅವರ ಪ್ರಾಣಕ್ಕೆ ಕುತ್ತು ಇತ್ತು. ಅವರ ಧರ್ಮಪತ್ನಿಯನ್ನು ಆಸ್ಪತ್ರೆ ಒಳಗೆ ಬಿಡಲಿಲ್ಲ. ಈ ಘಟನೆಯು ಕೊಲೆಗಿಂತ, ದರೋಡೆಗಿಂತಲೂ ಘೋರವಾದುದು. ಈ ಕೂಡಲೆ ಕೇಂದ್ರದ ಸಚಿವರು ಕೂಡಲೇ ರಾಜೀನಾಮೆ ಸಲ್ಲಿಸಲೇಬೇಕು ಎಂದು ಒತ್ತಾಯಿಸಿದರು.
ರಾಜ್ಯದೆಲ್ಲೆಡೆ ತೀವ್ರ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ರಾಜ್ಯದಾದ್ಯಂತ ಎಲ್ಲ ಕಡೆ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ವಿದ್ಯಾಸಂಸ್ಥೆಗಳು ವ್ಯಾಪಾರ ಮಾಡುತ್ತಿದ್ದಾರೆ. ಬಡವರಿಗಂತೂ ಆಸ್ಪತ್ರೆ ಸೇವೆ ದೂರವಾಗಿದೆ. ಬೆಂಗಳೂರಿನಲ್ಲಿ ಬಡವರು, ನಿರ್ಗತಿಕರು, ಜನಸಾಮಾನ್ಯರು ಪುಟ್ಬಾತ್ ಮೇಲೆ ವ್ಯಾಪಾರ ಮಾಡುವವರನ್ನು ಜೆಸಿಬಿ ಯಂತ್ರವನ್ನು ಬಳಸಿ ಎಲ್ಲರನ್ನು ನಿರ್ದಾಕ್ಷಿಣ್ಯವಾಗಿ ಹೊರಗೆ ಹಾಕುತ್ತಿರುವುದು ಅನ್ಯಾಯ. ಇದರಿಂದ ನಾಲ್ಕು ಸಾವಿರ ಕೋಟಿ ಹಣ ನಷ್ಟವಾಗಿದೆ. ನಗರಾಭಿವೃದ್ಧಿ ಸಚಿವರಾದ ಕೃಷ್ಣಬೈರೇಗೌಡರಿಗೆ ಇದು ತಮಾಷೆಯಾಗಿದೆ. ಕಳೆದ ಬಾರಿ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಕ್ರಿಕೆಟ್ ಕಾಲ್ತುಳಿತದಿಂದ 11 ಮಂದಿ ಯುವಕರು ಮೃತಪಟ್ಟರು. ಅಂದೇ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ರಾಜೀನಾಮೆ ಸಲ್ಲಿಸಬೇಕಿತ್ತು ಎಂದು ಹೇಳಿದರು.
ಬಿಡದಿ ರೈತರನ್ನು ಸರ್ಕಾರವೇ ಇಬ್ಭಾಗ ಮಾಡಿದ್ದಾರೆ. ಬಿಡದಿ ರೈತರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಮುಂದಿನ ದಿನಗಳ ರೈತರು, ಮಹಾದಾಯಿ, ಮೇಕೆದಾಟು ವಿಚಾರದಲ್ಲಿ ಕನ್ನಡ ವಾಟಾಳ್ ಪಕ್ಷವು ಇಡೀ ಕರ್ನಾಟಕ ಬಂದ್ಗೆ ಕರೆ ನೀಡುತ್ತೇವೆ. ಮೇಕೆದಾಟು ವಿಷಯದಲ್ಲಿ ತಮಿಳುನಾಡು ಸರ್ಕಾರ ಅನ್ಯಾಯ ಮಾಡಿದ್ದಾರೆ. ಈ ಯೋಜನೆಗೆ ಹಣ ಎಷ್ಟು ಮೀಸಲಿಟ್ಟಿದ್ದಾರೆ ಎಂಬುದನ್ನು ರಾಜ್ಯದ ಜನತೆಗೆ ಸರ್ಕಾರವು ಬಹಿರಂಗಪಡಿಸಬೇಕು.
ಪ್ರತಿಭಟನೆಯಲ್ಲಿ ಕರುನಾಡುಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ ಐಜೂರು, ರಾಜ್ಯ ಉಸ್ತುವಾರಿ ಅಧ್ಯಕ್ಷ ವಿ.ಎನ್. ಗಂಗಾಧರ್ , ಜಿಲ್ಲಾಧ್ಯಕ್ಷ ಸಿ.ಎಸ್.ಜಯಕುಮಾರ್, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮಿ, ತಾಲೂಕು ಅಧ್ಯಕ್ಷೆ ಪುಷ್ಪಲತಾ, ತಾಲೂಕು ಕಾರ್ಯದರ್ಶಿ ವೆಂಕಟಲಕ್ಷ್ಮಿ, ಜಿಲ್ಲಾ ದಲಿತ ಘಟಕದ ಅಧ್ಯಕ್ಷ ಕೆ. ಜಯರಾಮು, ಜಿಲ್ಲಾ ಯುವ ಘಟಕ ಅಧ್ಯಕ್ಷ ಶ್ರೀನಿವಾಸ್ ವಿ.ಎನ್, ತಾಲೂಕು ಗೌರವಾಧ್ಯಕ್ಷ ಕೆಂಪರಾಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ಕರುನಾಡುಸೇನೆ ತಾಲೂಕು ಕಾರ್ಯಾಧ್ಯಕ್ಷ ಪಿ.ಸುರೇಶ್ ಕೊತ್ತಿಪುರ, ವಾಟಾಳ್ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ವಾಟಾಳ್ ನಾಗರಾಜ್ ರವರ ಆಪ್ತ ಕಾರ್ಯದರ್ಶಿ ಪಾರ್ಥಸಾರಥಿ ಇನ್ನಿತರರು ಭಾಗವಹಿಸಿದ್ದರು.
ರಾಮನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಈಡುಗಾಯಿ ಚಳವಳಿ ನಡೆಸಿದರು.