ಪಾಳುಬಿದ್ದ ಡಬ್ಬಿಯಂತೆ ಗೋಚರಿಸುತ್ತಿರುವ ಎಂಡಿ ಕ್ಯಾಂಪ್ನ ಆರ್ಒ ಪ್ಲಾಂಟ್
ಬಿ.ಎಚ್.ಎಂ. ಅಮರನಾಥ ಶಾಸ್ತ್ರಿಕನ್ನಡಪ್ರಭ ವಾರ್ತೆ ಕಂಪ್ಲಿ
ಪಟ್ಟಣದಲ್ಲಿನ ಕೆಲವು ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದೂ ಇಲ್ಲದಂತಾಗಿವೆ.ಹಲವು ದಿನಗಳಿಂದ ಆರ್ಒ ಪ್ಲಾಂಟ್ ಕೆಟ್ಟುನಿಂತಿದ್ದು, ದುರಸ್ತಿ ಕಾರ್ಯ ಮಾಡುತ್ತಿಲ್ಲ. ದಿನೇ ದಿನೇ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪಟ್ಟಣದ ಜನತೆಗೆ ಸಮರ್ಪಕವಾಗಿ ನೀರು ಪೂರೈಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
ಇಲ್ಲಿನ ಉದ್ಭವ ಮಹಾಗಣಪತಿ ದೇವಸ್ಥಾನ, ಸಂತೆ ಮಾರುಕಟ್ಟೆ, ಕಂಪ್ಲಿ ಕೋಟೆ, ಮಾರುತಿ ನಗರ, ಶುಗರ್ ಫ್ಯಾಕ್ಟರಿ, ಚಪ್ಪರದಹಳ್ಳಿ, ಕೆಇಬಿ ಬಳಿ, ಕೊಟಾಲ್, ಜಾನೂರು ರಸ್ತೆ, ಎಂ.ಡಿ. ಕ್ಯಾಂಪ್, ಸರ್ಕಾರಿ ಆಸ್ಪತ್ರೆ ಬಳಿ ಸೇರಿ ಒಟ್ಟಾರೆ 11 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ ಸದ್ಯ 8 ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರಿ ಆಸ್ಪತ್ರೆಯ ಬಳಿಯ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಹಲವು ತಿಂಗಳುಗಳೇ ಕಳೆದಿದೆ. ಕಿಡಿಗೇಡಿಗಳು ಘಟಕದ ಗಾಜು ಒಡೆದು ನಲ್ಲಿಯನ್ನು ಮುರಿದು ಹಾಕಿದ್ದಾರೆ. ಇನ್ನು ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ, ಅಕ್ಕಪಕ್ಕದ ಅಂಗಡಿಗಳ ಜನರಿಗೆ, ಸಣಾಪುರ ರಸ್ತೆ, ಮಾರೆಮ್ಮ ಗುಡಿ, 15ನೇ ವಾರ್ಡ್ ಸೇರಿ ಹಲವೆಡೆಗಳಿಂದ ಆಗಮಿಸುವ ಜನರ ನೀರಿನ ದಾಹವನ್ನು ದಣಿಸುತ್ತಿದ್ದ ಈ ಘಟಕ ಇದೀಗ ಉಪಯೋಗವಿಲ್ಲದಂತಿದೆ.ಎಂ.ಡಿ. ಕ್ಯಾಂಪ್ನ ಶುದ್ಧ ಕುಡಿಯುವ ನೀರಿನ ಘಟಕವನ್ನಂತೂ ಕೇಳುವವರೇ ದಿಕ್ಕಿಲ್ಲದಂತಾಗಿದೆ. ಇದು ಕೆಟ್ಟು ನಿಂತು ಸುಮಾರು ಎರಡು ವರ್ಷಗಳೇ ಗತಿಸಿವೆ. ಕಿಡಿಗೇಡಿಗಳ ಹಾವಳಿಯಿಂದ ಘಟಕದ ಗಾಜುಗಳೆಲ್ಲ ನುಚ್ಚು ನೂರಾಗಿದ್ದು, ಸುತ್ತ ಗಿಡಗಂಟಿಗಳು ಬೆಳೆದು ಯಾವುದೋ ಪಾಳುಬಿದ್ದ ಅಂಗಡಿಯ ಡಬ್ಬಿಯಂತೆ ಗೋಚರಿಸುತ್ತಿದೆ. ಎಂ.ಡಿ. ಕ್ಯಾಂಪ್ನಲ್ಲಿ ಇಂತಹದೊಂದು ಶುದ್ಧ ಕುಡಿಯುವ ನೀರಿನ ಘಟಕವಿದೆ ಎಂದು ಅಧಿಕಾರಿಗಳಿಗೆ ತಿಳಿದೇ ಇಲ್ಲವೇನೋ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ. ಅಲ್ಲದೇ ಜಾನೂರು ರಸ್ತೆಯಲ್ಲಿರುವ ಘಟಕ ಕೆಟ್ಟು ನಿಂತು ಸ್ಥಳೀಯರಿಗೆ ಸಮಸ್ಯೆಯಾಗಿದೆ.
ಖಾಸಗಿ ನೀರಿಗೆ ಮೊರೆ:ಪಟ್ಟಣದಲ್ಲಿನ ಕೆಲವು ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟಿರುವ ಕಾರಣ ಸ್ಥಳೀಯರು ಹತ್ತಿರದ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ತೆರಳಿ ಹೆಚ್ಚಿನ ಹಣ ನೀಡಿ ನೀರನ್ನು ಖರೀದಿಸುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕಾರಣ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯವೇ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಕೆಟ್ಟು ನಿಂತ ಘಟಕಗಳನ್ನು ಕೂಡಲೇ ದುರಸ್ತಿಗೊಳಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.
ಹೊಸ ಘಟಕ ಆರಂಭಿಸಿ:ಪಟ್ಟಣದಲ್ಲಿ ಒಟ್ಟಾರೆ 23 ವಾರ್ಡ್ಗಳಿದ್ದು, 11 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ವಾರ್ಡ್ಗಳು ಹಾಗೂ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡುವ ಜತೆಗೆ ಸ್ಥಗಿತಗೊಳ್ಳದಂತೆ ಉತ್ತಮವಾಗಿ ನಿರ್ವಹಣೆ ಮಾಡಬೇಕು ಎನ್ನುವುದು ಪಟ್ಟಣದ ಜನತೆಯ ಹಕ್ಕೊತ್ತಾಯವಾಗಿದೆ.