ಪ್ರತಿಯೊಬ್ಬರು ಆರೋಗ್ಯವಾಗಿರಲು ಸ್ವಚ್ಛತೆ ಅಗತ್ಯ: ಡಾ.ಸೌಮ್ಯಶ್ರೀ

KannadaprabhaNewsNetwork | Published : Dec 15, 2024 2:03 AM

ಸಾರಾಂಶ

ತಮ್ಮ ಮನೆಯ ಅಂಗಳದಲ್ಲಿ ಗಿಡ ಮರಗಳನ್ನು ಬೆಳೆಸುವುದರ ಮುಖಾಂತರ ಉತ್ತಮ ಪರಿಸರ ನಿರ್ಮಿಸಿ ಆಮ್ಲಜನಕ ಪಡೆಯುವ ಜೊತೆಗೆ ನಾವು ವಾಸಿಸುವ ಸ್ಥಳ ಸ್ವಚ್ಛತೆಯಿಂದ ಇದ್ದರೆ ಮಾತ್ರ ನಾವುಗಳು ಆರೋಗ್ಯವಂತರಾಗಿರಲು ಸಾಧ್ಯ. ಸ್ವಚ್ಛತೆ ಇಲ್ಲದಿದ್ದರೆ ನಮಗೆ ಡೆಂಘೀ, ಚಿಕನ್ ಗುನ್ಯಾ, ಮಲೇರಿಯಾದಂತಹ ರೋಗಗಳು ಬರುವ ಸಾಧ್ಯತೆ ಹೆಚ್ಚಾಗಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸೌಮ್ಯಶ್ರೀ ತಿಳಿಸಿದರು.

ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ಮನೆಯ ಅಂಗಳದಲ್ಲಿ ಗಿಡ ಮರಗಳನ್ನು ಬೆಳೆಸುವುದರ ಮುಖಾಂತರ ಉತ್ತಮ ಪರಿಸರ ನಿರ್ಮಿಸಿ ಆಮ್ಲಜನಕ ಪಡೆಯುವ ಜೊತೆಗೆ ನಾವು ವಾಸಿಸುವ ಸ್ಥಳ ಸ್ವಚ್ಛತೆಯಿಂದ ಇದ್ದರೆ ಮಾತ್ರ ನಾವುಗಳು ಆರೋಗ್ಯವಂತರಾಗಿರಲು ಸಾಧ್ಯ ಎಂದರು.

ಹಲಗೂರು ಲಯನ್ಸ್ ಕ್ಲಬ್ ಹಾಗೂ ನಮ್ಮ ಆಸ್ಪತ್ರೆ ಸಿಬ್ಬಂದಿ ಎಲ್ಲರೂ ಸೇರಿ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸಿದ್ದೇವೆ. ಸ್ವಚ್ಛತೆ ಇಲ್ಲದಿದ್ದರೆ ನಮಗೆ ಡೆಂಘೀ, ಚಿಕನ್ ಗುನ್ಯಾ, ಮಲೇರಿಯಾದಂತಹ ರೋಗಗಳು ಬರುವ ಸಾಧ್ಯತೆ ಹೆಚ್ಚಾಗಿದೆ ಎಂದರು.

ನಿಮ್ಮ ಮನೆ ಹಿಂಭಾಗ ತೆಂಗಿನ ಚಿಪ್ಪು, ಮಡಿಕೆ, ನೀರು ನಿಲ್ಲುವ ಜಾಗಗಳಲ್ಲಿ ಸೊಳ್ಳೆಗಳು ಹೆಚ್ಚಾಗಿ ಕಾಯಿಲೆಗಳು ಬರಲು ಕಾರಣವಾಗುತ್ತದೆ. ಮನೆ ವಾತಾವರಣ ಸ್ವಚ್ಛವಾಗಿದ್ದರೆ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಆರ್.ಶಶಿಕಲಾ ಶ್ರೀನಿವಾಸಚಾರಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎನ್.ಕೆ.ಕುಮಾರ್, ಡಿ.ಎಲ್. ಮಾದೇಗೌಡ, ಎ.ಟಿ.ಶ್ರೀನಿವಾಸ್, ಕೆ.ಶಿವರಾಜು, ಡಾ.ಸಿದ್ದರಾಜು, ಡಾ.ಶಂಷುದ್ದೀನ್, ಮನೋಹರ, ಪದ್ಮನಾಭ, ಆಸ್ಪತ್ರೆ ಸಿಬ್ಬಂದಿ ತೇಜ್, ಪುನಿ, ಸಂತೋಷ್, ರಂಜಿತಾ, ಶ್ವೇತಾ, ರತ್ನಮ್ಮ ಹಾಗೂ ಆಶಾ ಕಾರ್ಯಕರ್ತರು ಇದ್ದರು.

ವಿಜೃಂಭಣೆಯ ಹನುಮ ಜಯಂತಿ ಆಚರಣೆ

ಪಾಂಡವಪುರ:

ಪಟ್ಟಣದ ಬೀರಶೆಟ್ಟಹಳ್ಳಿಯಲ್ಲಿ ಹನುಮ ಜಯಂತಿ ಮಹೋತ್ಸವವು ಶುಕ್ರವಾರ ರಾತ್ರಿ ಬಹಳ ವಿಜೃಂಭಣೆಯಿಂದ ನಡೆಯಿತು.

ಗ್ರಾಮದ ಶ್ರೀವೀರಾಂಜನೇಯ ಸೇವಾ ಸಮಿತಿಯಿಂದ 21ನೇ ವರ್ಷದ ಶ್ರೀಹನುಮ ಜಯಂತಿ ಅಂಗವಾಗಿ ರಾತ್ರಿ ಪ್ರಮುಖ ಜಾನಪದ ಕಲಾ ತಂಡಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಇಡೀ ರಾತ್ರಿ ಅಡ್ಡ ಪಲ್ಲಕ್ಕಿ ಉತ್ಸವ ಸಡಗರ, ಸಂಭ್ರಮದಿಂದ ನಡೆಯಿತು.

ಮಾರನೇ ದಿನ ಶನಿವಾರ ಮಧ್ಯಾಹ್ನ12 ಗಂಟೆಯಿಂದ ಸಂಜೆವರೆಗೆ ಸುಮಾರು 10,000 ಭಕ್ತಾದಿಗಳಿಗೆ ಅನ್ನ ಸಂತರ್ಪಣೆ (ಪ್ರಸಾದ) ವ್ಯವಸ್ಥೆ ಮಾಡಲಾಗಿತ್ತು. ಹನುಮ ಜಯಂತಿ ಮಹೋತ್ಸವದ ಕಾರ್ಯಕ್ರಮದಲ್ಲಿ ಯಜಮಾನರಾದ ಸಿದ್ದೇಗೌಡ, ದೇವೇಗೌಡ, ಗಂಗಾಧರ್, ಚಂದ್ರಶೇಖರ್, ಧರ್ಮರಾಜ್, ಜವರೇಗೌಡ, ತಮ್ಮೇಗೌಡ, ಸಿದ್ದೇಗೌಡ, ಲೋಕೇಶ್, ಕುಮಾರ್, ಬೈರೇಗೌಡ, ಹೊನ್ನೇಗೌಡ, ಕೃಷ್ಣ (ಜಲಿಲ್), ಮಂಜುನಾಥ್, ಮಂಜಚಾರಿ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Share this article