ಕನ್ನಡಪ್ರಭ ವಾರ್ತೆ ಬೇಲೂರು ಇತ್ತೀಚಿನ ದಿನಗಳಲ್ಲಿ ಡಿಜಿಟಲೀಕರಣ ಮತ್ತು ತಂತ್ರಾಂಶಗಳ ಹೆಚ್ಚಿನ ಬಳಕೆಯಿಂದ ಕನ್ನಡದಲ್ಲಿ ಸ್ಪಷ್ಟ ಬರವಣಿಗೆ, ಓದು ಹಾಗೂ ಅನುವಾದ ಸಾಮರ್ಥ್ಯ ಕುಸಿಯುತ್ತಿದೆ ಎಂದು ಹಾಸನದ ಕವಯಿತ್ರಿ ಭವ್ಯ ನವೀನ್ ಬೇಸರ ವ್ಯಕ್ತಪಡಿಸಿದರುಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಹಾಗೂ ವೈ.ಡಿ.ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಚಕೋರ ಉಪನ್ಯಾಸಮಾಲಿಕೆ 11 ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆಯನ್ನು ಅನ್ನದ ಭಾಷೆಯಾಗಿ ಬಳಸಿಕೊಳ್ಳಲು ಅನೇಕ ಆಯಾಮಗಳು ಇವೆ. ಇಂದಿನ ಯುವಜನತೆ ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕನ್ನಡವನ್ನು ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ ಮನೆ ಮತ್ತು ಶಾಲೆ ಎರಡರಲ್ಲೂ ಕನ್ನಡಕ್ಕೆ ನೀಡಲಾಗುತ್ತಿರುವ ನಿರ್ಲಕ್ಷ್ಯವನ್ನು ಉಲ್ಲೇಖಿಸಿ, “ಶಾಲೆಗಳಲ್ಲಿ ಕನ್ನಡದ ಅವಧಿ ಕಡಿಮೆ, ವಿಜ್ಞಾನ–ಗಣಿತಕ್ಕೆ ಮಾತ್ರ ಹೆಚ್ಚಾದ ಒತ್ತು. ಮನೆಯಲ್ಲಿ ಕೂಡ ‘ಕನ್ನಡ ಓದು ಬೇಡ’ ಎಂಬ ಮಾತು ಕೇಳಿಬರುತ್ತಿರುವುದು ಆತಂಕಕಾರಿ. ಕನ್ನಡ ಉಳಿಯಬೇಕಾದರೆ, ಅದು ನಮ್ಮ ನಡವಳಿಕೆ ಮತ್ತು ಸಂಸ್ಕಾರದಲ್ಲಿ ಹೆಚ್ಚಾಗಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕಿಯರಾದ ಸುಜಾತಾ ಎಚ್. ಆರ್. ಕನ್ನಡ ವಿಭಾಗ ಮುಖ್ಯಸ್ಥ ಮಂಜುನಾಥ್ ಕೆ.ಟಿ. ನಾಗೇಂದ್ರಪ್ಪ, ಮುಖ್ಯ ಅತಿಥಿಗಳಾಗಿ ಸರ್ವೋದಯ ಕಾಲೇಜಿನ ಪ್ರಾಂಶುಪಾಲ ಮಲ್ಲೇಶ್ ಗೌಡ, ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಕುಮಾರ್, ಬೊಂಬಡಿಹಳ್ಳಿ ಕುಮಾರಸ್ವಾಮಿ, ಉಪನ್ಯಾಸಕ ವೀರಭದ್ರಪ್ಪ ಹಾಜರಿದ್ದರು.