ಕನ್ನಡಪ್ರಭ ವಾರ್ತೆ ಜಗಳೂರು
ಕಳೆದ ವಾರ ಪಟ್ಟಣಕ್ಕೆ ಭೇಟಿ ನೀಡಿದ್ದ ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್ ಪರಿಶೀಲನೆ ನಡೆಸಿ ನ.೩ರೊಳಗೆ ತೆರವು ಮಾಡಿಕೊಳ್ಳುವಂತೆ ಗಡುವು ನೀಡಲಾಗಿತ್ತು. ಅದರಂತೆ ಎಸಿ ಸಂತೋಷ್ ಕುಮಾರ್ ನೇತೃತ್ವದಲ್ಲಿ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ, ಪಪಂ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಖುದ್ದು ನಿಂತು ಜೆಸಿಬಿ ಯಂತ್ರಗಳಿಂದ ಕಟ್ಟಡಗಳನ್ನು ತೆರವು ಮಾಡಲಾಯಿತು.
ಪಟ್ಟಣದೊಳಗೆ ಹಾದು ಹೋಗಿರುವ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿ ೬೫ರ ರಸ್ತೆ ಅಗಲೀಕರಣ ಕಾಮಗಾರಿಯೂ ವರ್ಷದ ಹಿಂದೆಯೇ ಕೈಗೆತ್ತಿಕೊಂಡಿತ್ತು. ಆದರೆ ಕೆಲ ಕಾರಣಗಳಿಂದ ನಿಧಾನಗತಿಯಲ್ಲಿ ಸಾಗಿ ಬಂದಿದ್ದು. ಕಳೆದ ಮರ್ನಾಲ್ಕು ದಿನಗಳಿಂದ ಚುರುಕುಗೊಂಡಿದೆ.ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್ ಮಾತನಾಡಿ, ಮುಖ್ಯ ರಸ್ತೆ ಒತ್ತುವರಿ ಮಾಡಿಕೊಂಡಿರುವ ಎಲ್ಲ ಜಾಗವನ್ನು ತೆರವುಗೊಳಿಸಲಾಗುತ್ತಿದೆ. ೧೧ ಅಡಿ, ಇನ್ನೊಂದೆಡೆ ೬ ಒತ್ತುವರಿಯಾಗಿದೆ. ೧೩೫ ಅಕ್ರಮ ಕಟ್ಟಡಗಳನ್ನು ನಾನೇ ಬೆಳಗ್ಗೆಯಿಂದ ಖುದ್ದು ನಿಂತು ತೆರವುಗೊಳಿಸುತ್ತಿದ್ದೇನೆ ಎಂದರು.
ಮೊದಲು ಸರ್ಕಾರದ ಕಟ್ಟಡಗಳನ್ನು ತೆರವು ಮಾಡಲು ಮುಂದಾಗಿದ್ದೇವೆ. ಇ-ಖಾತಾ ಮತ್ತಿತರ ದಾಖಲೆಗಳಿದ್ದರೆ ಅವುಗಳನ್ನು ಪರಿಶೀಲಿಸಿ ನಂತರ ೬೯ ಅಡಿ ತೆರವಿಗೆ ಅಧಿಕೃತವಾದ ಕಟ್ಟಡಗಳಿಗೆ ನಂತರ ಪರಿಹಾರ ನೀಡುತ್ತೇವೆ. ಕೆಲವರು ಮಾರ್ಕ್ ಮಾಡಿರುವ ಜಾಗಗಳನ್ನು ಸ್ವತಃ ತೆರವುಗೊಳಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ತೆರವಿಗೆ ಮುಂದಾಗಿಲ್ಲ. ಹೀಗಾಗಿ ಅಧಿಕಾರಿಗಳೆಲ್ಲೂ ಸೇರಿ ಕಟ್ಟಡಗಳನ್ನು ತೆರವು ಮಾಡಿಸುತ್ತೇವೆ. ಅಧಿಕೃತ ಕಟ್ಟಡಗಳಿದ್ದರೆ ಅಂತಹ ಮಾಲೀಕರು ದಾಖಲೆಗಳನ್ನು ಸಲ್ಲಿಸಿದರೆ ಪರಿಶೀಲಿಸಿ ವಾರಸುದಾರರಿಗೆ ಪರಿಹಾರ ನೀಡಲು ಸಾಧ್ಯವೇ ಎಂದು ನೋಡಿಕೊಂಡು ಪರಿಹಾರ ನೀಡುತ್ತೇವೆ ಎಂದರು.ಪಪಂ ಮುಖ್ಯಾಧಿಕಾರಿ ಸಿ.ಲೋಕ್ಯಾನಾಯ್ಕ್, ಲೋಕೋಪಯೋಗಿ ಇಲಾಖೆಯ ಎಇಇ ನಾಗರಾಜ್, ಎಇ ಪುರುಷೋತ್ತಮರೆಡ್ಡಿ, ಕಂದಾಯಾಧಿಕಾರಿ ಕೀರ್ತಿಕುಮಾರ್ ಆಯಾ ಇಲಾಖೆ ಅಧಿಕಾರಿಗಳು ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.