ಕನ್ನಡಪ್ರಭ ವಾರ್ತೆ ಕೋಲಾರನಗರಸಭೆಗೆ ಸೇರಿದ ಕೋಟ್ಯತರ ಮೌಲ್ಯದ ಸುಮಾರು ೭ ಎಕರೆಗೂ ಹೆಚ್ಚು ಭೂಮಿಯನ್ನು ಕೆಲವು ಪಟ್ಟಭದ್ರ ಹಿತಸಕ್ತರು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವುದನ್ನು ನಗರಸಭೆ ಸದಸ್ಯ ಪ್ರವೀಣಗೌಡ ಪತ್ತೆ ಹಚ್ಚಿ ನೀಡಿದ ದೂರಿನ ಮೇರೆಗೆ ಶುಕ್ರವಾರ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಪೌರಾಯುಕ್ತ ಪ್ರಸಾದ್ ಮತ್ತು ಸರ್ವೆ ಇಲಾಖೆಯ ಸಿಬ್ಬಂದಿಯೊಂದಿಗೆ ಸ್ಥಳ ಪರಿಶೀಲನೆ ಮಾಡಿ, ಸರ್ವೇಕಾರ್ಯ ನಡೆಸಿ ಫೆನ್ಸಿಂಗ್ ಅಳವಡಿಸಲು ಕ್ರಮ ಕೈಗೊಂಡರು.ನಗರದ ಹೊರವಲಯದ ಅಂತರಗಂಗೆ ಬೆಟ್ಟದ ಸಮೀಪದ ಖಾದ್ರಿಪುರ ವಾರ್ಡಿಗೆ ಸೇರಿದ ಸರ್ವೇ ಸಂಖ್ಯೆ ೩೦/೨ ರಲ್ಲಿ ೦.೩೯ ಗುಂಟೆ, ಸರ್ವೇ ಸಂಖ್ಯೆ ೨೯ರಲ್ಲಿ ೧.೧೯ ಎಕರೆ, ಸರ್ವೇ ಸಂಖ್ಯೆ ೩೩/೨ಎ ರಲ್ಲಿ ೧,೩೦ ಎಕರೆ, ಸರ್ವೇ ಸಂಖ್ಯೆ ೩೪/೧ರಲ್ಲಿ ೨.೧೫ ಎಕರೆ ಹಾಗೂ ಸರ್ವೇ ಸಂಖ್ಯೆ ೩೪/೨ರಲ್ಲಿ ೨.೦೬ ಎಕರೆ ಸೇರಿದಂತೆ ಒಟ್ಟು ೮,೨೯ ಎಕರೆ ನಗರಸಭೆಯ ಸ್ವತ್ತಾಗಿದೆ. ಈ ಜಾಗವನ್ನು ಪಟ್ಟಭದ್ರ ಹಿತಾಸಕ್ತರು ನಗರಸಭೆಯ ಸಿಬ್ಬಂದಿಗಳನ್ನು ಆಮಿಷಕ್ಕೆ ಒಳಪಡಿಸಿ ಅಕ್ರಮವಾಗಿ ಖಾತೆಗಳನ್ನು ಸೃಷ್ಠಿಸಿಕೊಂಡು ನಿವೇಶನಗಳಿಗೆ ಹಾಕಿಕೊಂಡಿರುವ ಕಾಂಪೌಂಡ್ಗಳನ್ನು ತೆರವು ಮಾಡುವ ಕಾರ್ಯಾಚರಣೆ ಆರಂಭಿಸಲಾಗಿದೆ. ಜಾಗಕ್ಕೆ ಬೇಲಿ ಹಾಕಲು ಕ್ರಮ
ಈ ಪೈಕಿ ಸರ್ವೇ ಸಂಖ್ಯೆ ೨೯ರಲ್ಲಿ ೧,೧೯ ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಕೆಲವು ಖಾತೆದಾರರು ನ್ಯಾಯಾಲಯದ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಈ ಜಾಗವನ್ನು ಹೊರತುಪಡಿಸಿ ಉಳಿದ ಜಾಗಗಳನ್ನು ಸರ್ವೇ ಇಲಾಖೆಯ ಸಿಬ್ಬಂದಿಗಳೊಂದಿಗೆ ನಗರಸಭೆಯ ಕಂದಾಯ ಅಧಿಕಾರಿಗಳ ಜಂಟಿ ಸರ್ವೇ ಕಾರ್ಯ ನಡೆಸಿ ಗಡಿಭಾಗಗಳಲ್ಲಿ ಬದುಗಳನ್ನು ಮಾಡಿ ಹಾಗೂ ಕೆಲಸವಡಿ ಬಣ್ಣಗಳ ಮೂಲಕ ಗುರುತು ಮಾಡಿ ಫೆನ್ಸಿಂಗ್ ಹಾಕಿಸಲು ನಗರಸಭೆ ಕ್ರಮಕ್ಕೆ ಮುಂದಾಗಿದೆ.ಈ ಹಿಂದೆ ನಗರಸಭೆಯ ಉಪಾಧ್ಯಕ್ಷರಾಗಿದ್ದ ಚಿನ್ನಪ್ಪರಿಂದ ೨೦೦೧ರಲ್ಲಿ ಸರ್ವೇ ಸಂಖ್ಯೆ ೩ ರಲ್ಲಿ ೨.೩೪ ಎಕರೆ ಜಮೀನನ್ನು ನಗರಸಭೆ ಕ್ರಯಕ್ಕೆ ಪಡೆದುಕೊಂಡಿತ್ತು. ಈ ಜಾಗವನ್ನು ನಗರಸಭೆ ಕಾರ್ಮಿಕರಿಗೆ ಹಾಗೂ ವಸತಿ ಯೋಜನೆಯ ಆಶ್ರಯ ಸಮಿತಿಗೆ ಹಂಚಿಕೆ ಮಾಡಲು ನಿರ್ಧಾರಿಸಲಾಗಿತ್ತು. ಸ್ವಲ್ಪ ಭಾಗ ಹಂಚಿಕೆಯಾಗಿದ್ದು ಉಳಿದ ಭಾಗವನ್ನು ಹಂಚಿಕೆ ಮಾಡಿರಲಿಲ್ಲ. ಈ ಜಾಗಕ್ಕೆ ಹೊಂದಿಕೊಂಡಂತೆ ನಗರಸಭೆ ವ್ಯಾಪ್ತಿಗೆ ಬರಲಿರುವ ಈ ಜಮೀನು ಸಂಪೂರ್ಣವಾಗಿ ಸರ್ಕಾರದ ಆಸ್ತಿಯಾಗಿದೆ.ವಸತಿ ರಹಿತರಿಗೆ ಹಂಚಲು ಕ್ರಮಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಸದಸ್ಯ ಪ್ರವೀಣ್ ಗೌಡ, ಈ ಆಸ್ತಿಯಲ್ಲಿ ವಸತಿ ಸೌಲಭ್ಯ ಇಲ್ಲದವರಿಗೆ ಹಂಚಿಕೆ ಮಾಡಲು ನಗರಸಭೆಯು ಜಿಲ್ಲಾಡಳಿತದೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಪತ್ರಕರ್ತರಿಗೆ ತಿಳಿಸಿದರು.
.