ಹಾರೋಹಳ್ಳಿ: ಆನೆಕಲ್-ಬಿಡದಿ ರಸ್ತೆಯಲ್ಲಿನ ಪಟ್ಟಣ ಪಂಚಾಯಿತಿಗೆ ಸೇರಿದ 261 ಅಂಗಡಿ ಮಳಿಗೆಗಳನ್ನು ತಾಲೂಕು ಆಡಳಿತ ಪೋಲೀಸರ ಬಿಗಿ ಬಂದೋಬಸ್ತ್ನಲ್ಲಿ ಮಂಗಳವಾರ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿತು.
ಅಂಗಡಿ ಮಾಲೀಕರ ಮತ್ತು ಅಧಿಕಾರಿಗಳು ಹಾರೋಹಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಯಲ್ಲಿ ಜಿಲ್ಲಾ ಪೋಲಿಸ್ ಉಪ ವರಿಷ್ಠಾಧಿಕಾರಿ ರಾಮಚಂದ್ರಪ್ಪ ಸಭೆ ನಡೆಸಿ ಸಮಸ್ಯೆಯನ್ನು ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಭೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಮುರಳೀಧರ್, ಎಚ್.ಟಿ.ಶ್ರೀನಿವಾಸ್ ಸೇರಿದಂತೆ ಹಲವರು ಮಾತನಾಡಿ, ನೋಟಿಸ್ ನೀಡದೆ ರಾತ್ರೋರಾತ್ರಿ ಆದೇಶ ಮಾಡಿ, ಬೆಳಗಿನ ಜಾವ ಈ ರೀತಿ ಏಕಾಏಕಿ ತೆರವು ಕಾರ್ಯಾಚರಣೆ ಸರಿಯಾದ ಕ್ರಮವಲ್ಲ. ಈ ಅಂಗಡಿಗಳಲ್ಲಿ ನೂರಾರು ಕುಟುಂಬಗಳು ಜೀವಿಸುತ್ತಿವೆ. ಅವರಿಗೆ ಸಂಕಷ್ಟ ಎದುರಾಗುವುದರಿಂದ ಮುಂದೆ ನಮಗೆ ಭದ್ರತೆ ಮಾಡಿಕೊಡಿ ಹಾಲಿ ಇರುವವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದರು.ಈ ವೇಳೆ ತಹಸೀಲ್ದಾರ್ ಶಿವಕುಮಾರ್ ಹಾಗು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಬಾಯಿ ಮಾತನಾಡಿ, ನಗರದ ಸೌಂದರ್ಯ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಯಾರೂ ತೆರವು ಕಾರ್ಯಕ್ಕೆ ಅಡಚಣೆ ಮಾಡದೆ ಸಹಕಾರ ನೀಡಬೇಕು. ಪಂಚಾಯಿತಿಯ ಹೂವಿನ ತೋಟದ 1 ಎಕರೆ 16 ಗುಂಟೆ ಹಾಗೂ ಮತ್ತೊಂದು ಕಡೆಯಿರುವ 30 ಗುಂಟೆ ಜಾಗದಲ್ಲಿ ಪಟ್ಟಣ ಪಂಚಾಯಿತಿ ಕಚೇರಿ ಸೇರಿದಂತೆ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ. ಇಲ್ಲಿ ಮೀಸಲು ಮಳಿಗೆಗಳು ಸೇರಿದಂತೆ ನಿಮಗೆಲ್ಲರಿಗೂ ಅನುಕೂಲವಾಗುವಂತೆ ಸರ್ಕಾರದ ನಿಯಮದಡಿ ಅಂಗಡಿಗಳು ದೊರೆಯಲಿವೆ ಎಂದು ಭರವಸೆ ನೀಡಿದರು.
ಅನ್ಯರಿಗೆ ಅಂಗಡಿಗಳು: ಈ ಹಿಂದೆ ಪಂಚಾಯಿತಿ ಅಂಗಡಿಗಳನ್ನು ಬೇರೆಯವರಿಗೆ ಹೆಚ್ಚನ ದರದಲ್ಲಿ ಬಾಡಿಗೆ ನೀಡಿ ಪಂಚಾಯಿತಿಗೆ ಸಮರ್ಪಕ ಬಾಡಿಗೆ ಸಂದಾಯವಾಗುತ್ತಿರಲಿಲ್ಲ, ಈ ಸಂಬಂಧ ಮೀಸಲಾತಿ ಆಧಾರದಲ್ಲಿ ಮಳಿಗೆಗಳನ್ನು ಬಾಡಿಗೆಗೆ ನೀಡುವಂತೆ ಪ್ರತಿಭಟನೆಯೂ ನಡೆಸಲಾಗಿತ್ತು.
ಇದೇ ವೇಳೆ ತಹಸೀಲ್ದಾರ್ ಶಿವಕುಮಾರ್ ಪಟ್ಟಣ ಅಭಿವೃದ್ಧಿ ದೃಷ್ಟಿಯಲ್ಲಿ ಅಂಗಡಿ ಮಳಿಗೆ ತೆರವು ಕಾರ್ಯಾಚರಣೆಗೆ ಬಾಡಿಗೆದಾರರು ಹಾಗೂ ಸಾರ್ವಜನಿಕರ ಸಂಪೂರ್ಣ ಸಹಕಾರ ದೊರೆತಿರುವುದಕ್ಕೆ ಅಭಿನಂದಿಸಿದರು.
7.ಹಾರೋಹಳ್ಳಿ ಮುಖ್ಯ ರಸ್ತೆಯಲ್ಲಿನ ಪಂಚಾಯಿತಿ ಅಂಗಡಿಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿತು.