ಸಿಎಂ ಬದಲಾವಣೆ ಸುದ್ದಿ ಕೇವಲ ವದಂತಿ: ಯತೀಂದ್ರ ಸಿದ್ದರಾಮಯ್ಯ

KannadaprabhaNewsNetwork |  
Published : Mar 05, 2024, 01:36 AM IST
4ಎಚ್ಎಸ್ಎನ್14 : ಹೊಳೆನರಸೀಪುರ ತಾ. ಹಳ್ಳಿಮೈಸೂರು ಗ್ರಾಮದ ಶೀಗೆತಾಳಮ್ಮ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಸಭಾಮಂಟಪ, ವಸತಿ ಗೃಹಗಳು ಮತ್ತು ಪಾಕಶಾಲಾ ಕೊಠಡಿಗಳ ಉದ್ಘಾಟನೆಯನ್ನು ಸಿಎಂ ಪುತ್ರ ಯತೀಂದ್ರ ಸಿದ್ಧರಾಮಯ್ಯ ನೆರವೇರಿಸಿದರು.  | Kannada Prabha

ಸಾರಾಂಶ

ಲೋಕಸಭಾ ಚುನಾವಣೆ ಬಳಿಕ ಸಿಎಂ ಬದಲಾವಣೆ ಸುದ್ದಿಗಳೆಲ್ಲ ಕೇವಲ ಊಹಾಪೋಹ. ಸರ್ಕಾರ ಐದು ವರ್ಷಗಳ ಅವಧಿ ಪೂರೈಸುತ್ತದೆ. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ನಂಬಿಕೆ ಇದೆ ಎಂದು ಶಾಸಕ ಯತೀಂದ್ರ ಸಿದ್ಧರಾಮಯ್ಯ ಹೇಳಿದರು. ಶೀಗೆತಾಳಮ್ಮ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಸಭಾಮಂಟಪ, ವಸತಿ ಗೃಹಗಳು ಮತ್ತು ಪಾಕಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ನೂತನ ಸಭಾಮಂಟಪ, ವಸತಿ ಗೃಹಗಳ ಉದ್ಘಾಟನೆ । ನಾನು ಎಂಪಿ ಟಿಕೆಟ್‌ ಆಕಾಂಕ್ಷಿ ಅಲ್ಲ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಲೋಕಸಭಾ ಚುನಾವಣೆ ಬಳಿಕ ಸಿಎಂ ಬದಲಾವಣೆ ಸುದ್ದಿಗಳೆಲ್ಲ ಕೇವಲ ಊಹಾಪೋಹ. ಸರ್ಕಾರ ಐದು ವರ್ಷಗಳ ಅವಧಿ ಪೂರೈಸುತ್ತದೆ. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ನಂಬಿಕೆ ಇದೆ. ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಕೆಲ ಶಾಸಕರು ಹೇಳುತ್ತಾರೆ. ಆದರೆ ಇಂತಹ ಗೊಂದಲಗಳು ಸಹಜ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ಧರಾಮಯ್ಯ ಹೇಳಿದರು.

ತಾಲೂಕಿನ ಹಳ್ಳಿಮೈಸೂರು ಗ್ರಾಮದಲ್ಲಿ ಲಕ್ಷ್ಮಮ್ಮ ಹನುಮಶೆಟ್ಟಿ ಜ್ಞಾಪಕಾರ್ಥ ಮುಖ್ಯಮಂತ್ರಿ ಸಿದ್ಧರಾಮಯ್ಯ ವೈದ್ಯಕೀಯ ಸಲಹೆಗಾರ ಡಾ. ಎಚ್.ರವಿಕುಮಾರ್ ಶೀಗೆತಾಳಮ್ಮ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಸಭಾಮಂಟಪ, ವಸತಿ ಗೃಹಗಳು ಮತ್ತು ಪಾಕಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ, ಸುದ್ದಿಗಾರರ ಜತೆ ಮಾತನಾಡಿದರು.

ಲೋಕಸಭಾ ಚುನಾವಣೆ ಸ್ಪರ್ಧೆ ಕುರಿತ ಪ್ರಶ್ನೆಗೆ ಉತ್ತರಿಸಿ, ‘ಪಕ್ಷದ ವರಿಷ್ಠರು ಇನ್ನೂ ತೀರ್ಮಾನ ಮಾಡಿಲ್ಲ. ನಾನು ಆಕಾಂಕ್ಷಿ ಕೂಡ ಅಲ್ಲಾ, ವರಿಷ್ಠರು ಏನು ತೀರ್ಮಾನ ಮಾಡ್ತಾರೆ ನೋಡೋಣ. ಅವರ ತೀರ್ಮಾನಕ್ಕೆ ಬದ್ಧರಾಗಿರಬೇಕಾಗುತ್ತದೆ. ವರುಣ ಕ್ಷೇತ್ರದ ಜನರು ಕ್ಷೇತ್ರ ಬಿಟ್ಟು ಹೋಗಬೇಡಿ ಎಂದು ಹೇಳುತ್ತಿದ್ದಾರೆ. ವರುಣ ಕ್ಷೇತ್ರ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಬಡುವುದಿಲ್ಲ’ ಎಂದು ಹೇಳಿದರು.

ಜಾತಿಗಣತಿ ವರದಿ ಕುರಿತಂತೆ ಮಾತನಾಡಿ, ‘ಹಿಂದಿನ ಸಿದ್ದರಾಮಯ್ಯ ಸರ್ಕಾರ ಜಾತಿಗಣತಿ ಮಾಡಿಸಿತ್ತು. ಅಂದು ಸರ್ಕಾರ ಅಧಿಕಾರ ಕಳೆದುಕೊಂಡ ಕಾರಣದಿಂದ ಸ್ವೀಕಾರ ಆಗಿರಲಿಲ್ಲ, ಈಗ ಸ್ವೀಕರಿಸಲಾಗಿದೆ. ಜಾತಿ ಗಣತಿಯನ್ನು ಬಿಡುಗಡೆ ಮಾಡುತ್ತೇವೆ, ಇದು ನಮ್ಮ ಸರ್ಕಾರದ ನಿಲುವು. ಜಾತಿಗಣತಿ ಮಾಡುವುದರಿಂದ ಹಲವಾರು ಅನುಕೂಲಗಳಿವೆ ಎಂದು ಸರ್ಕಾರ ಸಮೀಕ್ಷೆ ಮಾಡಿಸಿದೆ’ ಎಂದರು.

ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಬಾಂಬ್ ಬ್ಲಾಸ್ಟ್‌ ಆಗಿದೆ, ಯಾರು ಅದರ ಹಿಂದೆ ಇದ್ದಾರೆ ಎಂದು ಗೊತ್ತಿಲ್ಲ, ತನಿಖೆ ನಡೆಯುತ್ತಿದೆ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಲ್ಲ ಎಂದು ಅಲ್ಲಿದ್ದವರು ಹೇಳುತ್ತಾರೆ, ಆ ರೀತಿ ಕೂಗಿದ್ದರೆ ಅದರ ಪರಿಶೀಲನೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ಮೇಲೆ ಆ ಬಗ್ಗೆ ಗಮನ ನೀಡಲಾಗುವುದು ಎಂದು ಹೇಳಿದರು.

ಧರ್ಮದಲ್ಲಿ ರಾಜಕೀಯ ಸಲ್ಲದು:

ಸಮಾಜದಲ್ಲಿ ಧರ್ಮ ಮುಖ್ಯವಾಗಿದ್ದು, ಸಾಮಾನ್ಯ ಜನರ ಜೀವನದಲ್ಲಿ ಧರ್ಮವಿರಬೇಕು, ಜೀವನದಲ್ಲಿ ಏಳು ಬೀಳು ಕಾಣುವ ನಾವು, ಹತಾಶ ಸನ್ನಿವೇಶದಲ್ಲಿ ನಂಬಿಕೆ ಮತ್ತು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಧರ್ಮವೆಂದ ಶಕ್ತಿ ಇರಲೇಬೆಕು. ಧರ್ಮವಿಲ್ಲದ ಯಾವುದೇ ಜನಾಂಗವಿಲ್ಲ. ಬಸವಣ್ಣ, ಬುದ್ಧ, ಮಹಾತ್ಮಗಾಂಧಿ ಹಾಗೂ ಹಲವಾರು ಸಮಾಜ ಸುಧಾರಕರು ಧರ್ಮ ಬಿಟ್ಟು ಸಮಾಜ ಇರಬೇಕೆಂದು ಎಲ್ಲಿಯೂ ಹೇಳಿಲ್ಲ, ಆದರೆ ಧರ್ಮ ಮಾತ್ರ ಇದ್ದರೆ ಸಾದ್ಯವಿಲ್ಲ. ಡಾ. ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಎಲ್ಲರೂ ಎಲ್ಲವನ್ನೂ ಪಡೆದು ಆತ್ಮವಿಶ್ವಾಸದಿಂದ ಬದುಕಲು ಸಾಧ್ಯವಾಗಿದೆ. ಸಾಮಾಜಿಕ ಜೀವನ ಅಥವಾ ರಾಜಕೀಯದಲ್ಲಿ ಧರ್ಮ ಬೆರೆಸಬಾರದು ಎಂದು ಹೇಳಿದರು.

ಡಾ. ಎಚ್.ರವಿಕುಮಾರ್, ತಾಲೂಕು ತೇಜೂರು ಮಠದ ಕಲ್ಯಾಣಸ್ವಾಮಿ, ಕೆ.ಆರ್.ನಗರ ತಾಲೂಕು ಶಾಸಕ ರವಿಶಂಕರ್, ಚಿತ್ರದುರ್ಗದ ಮಾಚಿದೇವ ಗುರುಪೀಠದ ಬಸವ ಮಾಚಿದೇವ ಮಹಾಸ್ವಾಮಿ, ಟಿ.ಮಾಯಗೋಡನಹಳ್ಳಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ನೀರಾವರಿ ಇಲಾಖೆಯ ನಿ. ಟೆಂಡರ್ ಕಾರ್ಯದರ್ಶಿ ಗುರುಪಾದಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ದೇವರಾಜು, ಹಳ್ಳಿಮೈಸೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ್, ರೇಣುಕಾ ಕುಮಾರ್, ಶಾರದ ಎಚ್.ರವಿಕುಮಾರ್, ಮಂಜುನಾಥ್ ಕಲ್ಲವೀರಯ್ಯ ಇದ್ದರು.

ಹೊಳೆನರಸೀಪುರದ ಹಳ್ಳಿಮೈಸೂರು ಗ್ರಾಮದ ಶೀಗೆತಾಳಮ್ಮ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಸಭಾಮಂಟಪ, ವಸತಿ ಗೃಹಗಳು ಮತ್ತು ಪಾಕಶಾಲಾ ಕೊಠಡಿಗಳ ಉದ್ಘಾಟನೆಯನ್ನು ಯತೀಂದ್ರ ಸಿದ್ದರಾಮಯ್ಯ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’