ಗ್ಯಾರಂಟಿಯಿಂದ ಆರ್ಥಿಕ ಭಾರ ಹೆಚ್ಚಳ: ಬಸವರಾಜ್ ರಾಯರೆಡ್ಡಿ

KannadaprabhaNewsNetwork | Updated : Jan 08 2024, 11:28 AM IST

ಸಾರಾಂಶ

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆರ್ಥಿಕ ಭಾರ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡಲು ಸುಧಾರಣೆ ಕ್ರಮ ಅಗತ್ಯವಾಗಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್‌ ರಾಯರೆಡ್ಡಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ 

ಕೊಪ್ಪಳ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿರುವುದರಿಂದ ಸಹಜವಾಗಿಯೇ ಆರ್ಥಿಕ ಭಾರ ಹೆಚ್ಚಾಗಿದೆ. ಹೀಗಾಗಿ, ಈ ಯೋಜನೆಗಳಲ್ಲಿ ಸುಧಾರಣೆ ತರುವುದು ಅಗತ್ಯವಾಗಿದೆ ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು ₹58 ಸಾವಿರ ಕೋಟಿ ವೆಚ್ಚದ 5 ಗ್ಯಾರಂಟಿ ಯೋಜನೆಗಳನ್ನು ಸಡನ್ ಆಗಿ ಜಾರಿ ಮಾಡಲಾಗಿದೆ.

 ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿರುವುದರಿಂದ ಜನಪರ ಯೋಜನೆಗಳನ್ನು ರೂಪಿಸಿದ್ದಾರೆ. ಯಾರೂ ಸಹ ಹಸಿವಿನಿಂದ ಬಳಲಬಾರದು ಎಂದು ಯಾವುದೇ ಜಾತಿ, ಮತ, ಪಂಥದ ಭೇದವಿಲ್ಲದೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. 

ಜನರ ಹಿತಕ್ಕಾಗಿ ಮಾಡಿರುವುದರಿಂದ ಆಗಿರುವ ಆರ್ಥಿಕ ಹೊರೆಯನ್ನು ನಿಭಾಯಿಸಬೇಕಿದೆ. ಆದರೂ, ಈ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಏನು ಸುಧಾರಣೆ ಮಾಡಬೇಕು, ಏನೇನು ಬದಲಾವಣೆ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸುಧಾರಣೆ ತರುವುದು ಅಗತ್ಯವಾಗಿದೆ ಎಂದು ಹೇಳಿದರು.

ತೆರಿಗೆ ಹೆಚ್ಚಳಕ್ಕೆ ಅವಕಾಶವಿಲ್ಲ: ತೆರಿಗೆ ಹೆಚ್ಚಳ ಮಾಡುವುದಕ್ಕೆ ಅವಕಾಶಗಳು ಕಡಿಮೆ ಇವೆ. ಜಿಎಸ್‌ಟಿ ಕೇಂದ್ರ ವ್ಯಾಪ್ತಿಯಲ್ಲಿದೆ. ಇನ್ನು ಈಗಾಗಲೇ ಹಾಕುತ್ತಿರುವ ತೆರಿಗೆ ಗರಿಷ್ಠ ಮಟ್ಟ ತಲುಪಿದೆ. ಹೀಗಾಗಿ, ಹೆಚ್ಚಳ ಮಾಡುವುದು ಕಷ್ಟ. ಆದರೆ, ಇದರ ಹೊರತಾಗಿ ಆದಾಯ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ರಾಯರೆಡ್ಡಿ ತಿಳಿಸಿದರು.

ಆದಾಯ ಹೆಚ್ಚಳಕ್ಕೆ ರಾಜ್ಯಾದ್ಯಂತ ಅಕ್ರಮ ಲೇಔಟ್‌ಗಳ ಸಕ್ರಮ?

ಗೃಹ ನಿರ್ಮಾಣ ಮಂಡಳಿ ಸೇರಿದಂತೆ ನಗರ ಯೋಜನೆಯ ವ್ಯಾಪ್ತಿಯಲ್ಲಿರುವ ಲೇಔಟ್‌ಗಳ ಸಕ್ರಮ ಸೇರಿದಂತೆ ಹಲವಾರು ರೀತಿಯಲ್ಲಿ ಆದಾಯ ಹೆಚ್ಚಳಕ್ಕೆ ಚಿಂತನೆ ನಡೆದಿದೆ. ಸುಮಾರು ಶೇ.10ರಷ್ಟು ಆದಾಯ ಹೆಚ್ಚಳ ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ರಾಯರೆಡ್ಡಿ ಹೇಳಿದ್ದಾರೆ. ಜನರ ಮೇಲಿನ ತೆರಿಗೆ ಹೆಚ್ಚಳ ಮಾಡುವುದು ಕಷ್ಟ. ಇದರ ಹೊರತಾಗಿ ಆದಾಯಕ್ಕಾಗಿ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.

Share this article