ಬಸವೇಶ್ವರ ಏತ ನೀರಾವರಿಗೆ ₹300 ಕೋಟಿ ಬಿಡುಗಡೆ ಸಿಎಂ ವಾಗ್ದಾನ

KannadaprabhaNewsNetwork |  
Published : Jul 11, 2026, 03:15 AM IST
ಕಾಗವಾಡ | Kannada Prabha

ಸಾರಾಂಶ

ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ ಸುಮಾರು ₹300 ಕೋಟಿ ಅನುದಾನದ ಅವಶ್ಯಕತೆ ಇದ್ದು, ಸಿಎಂ ಡಿ.ಕೆ.ಶಿವಕುಮಾರ ಬೆಳಗಾವಿಗೆ ಬಂದಾಗ ಮನವರಿಕೆ ಮಾಡಿ ಕೊಟ್ಟಿದ್ದೇನೆ. ಶೀಘ್ರವೇ ಹಣ ಬಿಡುಗಡೆಗೊಳಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ, ಶಾಸಕ ರಾಜು ಕಾಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ ಸುಮಾರು ₹300 ಕೋಟಿ ಅನುದಾನದ ಅವಶ್ಯಕತೆ ಇದ್ದು, ಸಿಎಂ ಡಿ.ಕೆ.ಶಿವಕುಮಾರ ಬೆಳಗಾವಿಗೆ ಬಂದಾಗ ಮನವರಿಕೆ ಮಾಡಿ ಕೊಟ್ಟಿದ್ದೇನೆ. ಶೀಘ್ರವೇ ಹಣ ಬಿಡುಗಡೆಗೊಳಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ, ಶಾಸಕ ರಾಜು ಕಾಗೆ ಹೇಳಿದರು.

ತಾಲೂಕಿನ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಹಾಗೂ ಐನಾಪೂರ ಏತ ನೀರಾವರಿ ಯೋಜನೆಯ ಜಾಕವೆಲ್ ಬಳಿ ಕಾಲುವೆಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಯೋಜನೆ ಕೆಲ ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು. ಆದರೆ, ಹಣಕಾಸಿನ ಕೊರತೆ, ಕೊರೋನಾ, ಪ್ರವಾಹದಂತಹ ಅಡತಡೆಗಳು ಸೇರಿದಂತೆ ತಾಂತ್ರಿಕ ದೋಷಗಳ ಪರಿಣಾಮ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿಲ್ಲ. ಸುಮಾರು ₹1363.48 ಕೋಟಿಯ ಯೋಜನೆ ಇದಾಗಿದ್ದು, ಈಗಾಗಲೇ ₹1100 ಕೋಟಿ ಅನುದಾನದ ಶೇ.80 ರಷ್ಟುಕಾಮಗಾರಿ ಮುಕ್ತಾಯವಾಗಿದೆ. ಬರುವ ಕೆಲವೇ ತಿಂಗಳುಗಳಲ್ಲಿ ಯೋಜನೆ ಪೂರ್ಣಗೊಳಿಸಿ ಕಾಗವಾಡ ಕ್ಷೇತ್ರವನ್ನು ನಂದನವನ ಮಾಡುವೆ ಎಂದು ಭರವಸೆ ನೀಡಿದರು.ಕವಲಗುಡ್ಡದ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿ, ಶಾಸಕ ರಾಜು ಕಾಗೆ ಅವರು ತಮ್ಮ ಆರೋಗ್ಯದ ಸಮಸ್ಯೆಯನ್ನು ಲೆಕ್ಕಿಸದೇ ಕ್ಷೇತ್ರದ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾಲುವೆಗಳಿಗೆ ನೀರು ಹರಿಸಲು ಆಗಮಿಸಿರುವುದು ಕ್ಷೇತ್ರದ ಮೇಲಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದು ಶ್ಲಾಘಿಸಿದರು.ಈ ವೇಳೆ ನೀರಾವರಿ ಇಲಾಖೆ ಅಧಿಕಾರಿಗಳಾದ ಪ್ರವೀಣ ಹುಣಸಿಕಟ್ಟಿ, ಪ್ರಶಾಂತ ಪೋತದಾರ, ಬಸವರಾಜ ಗಲಗಲಿ, ಮುತ್ತು ಕೊಕಟನೂರ, ವಿಠ್ಠಲ್ ಕೊಕಟನೂರ್, ಗಾಯತ್ರಿ ಕನ್ಸ್ಟ್ರಕ್ಷನ್‌ನ ಕೆ.ನಾಗೇಶ್, ಮುಖಂಡರಾದ ರವೀಂದ್ರ ಪೂಜಾರಿ, ವಿನಾಯಕ ಬಾಗಡಿ, ರಾವಸಾಬ್‌ ಐಹೊಳಿ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಗೂಳಪ್ಪ ಜತ್ತಿ, ಶಿವಾನಂದ ಗೋಲಭಾಂವಿ, ಸಂಜಯ ಕುಚನೂರೆ, ಸಂಜಯ ಬಿರಡಿ, ಸುರೇಶ ಗಾಣಿಗೇರ, ವಿಶಾಲ ನಿಂಬಾಳ, ಚಿದಾನಂದ ಮಾಳಿ, ಮುಕುಂದ ಪೂಜಾರಿ, ಸುನೀಲ ಅವಟಿ, ದಾದಾ ಜಂತೆನ್ನವರ, ಬಸನಗೌಡ ಪಾಟೀಲ, ಕೆ.ಆರ್.ಪಾಟೀಲ, ಅಸ್ಪಕ ಘಟನಟ್ಟಿ, ರಫೀಕ್‌ ಪಟೇಲ, ವಿಶ್ವನಾಥ ಪಾಟೀಲ, ಸಂದೀಪ ಮಾನಗಾಂವೆ, ಚಂದ್ರಕಾಂತ ಇಮ್ಮಡಿ, ನಿಜಗುಣಿ ಮಗದುಮ್, ಸಂಜಯ ತಳವಲಕರ, ಪ್ರಕಾಶ ಕೊರ್ಬು, ಸುನೀಲ ಅವಟಿ, ಡಾ.ಅರವಿಂದರಾವ್ ಕಾರ್ಚಿ, ಸಿದ್ದಪ್ಪ ಕನಾಳೆ, ವಿನೋದ ಕೊಳೇಕರ, ಅನೀಲಕುಮಾರ ಸತ್ತಿ, ವಿಶ್ವನಾಥ ನಾಮದಾರ, ವಿಶ್ವನಾಥ ಪಾಟೀಲ, ವಸಂತ ಖೋತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಮತಕ್ಷೇತ್ರದ ಉತ್ತರ ಭಾಗದ ರೈತರ ಬಹು ನಿರೀಕ್ಷಿತ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಹಾಗೂ ಐನಾಪೂರ ಏತ ನೀರಾವರಿ ಯೋಜನೆಗಳ ಮೂಲಕ ಕಾಲುವೆಗೆ ನೀರು ಹರಿಸುವ ಎರಡೂ ಯೋಜನೆಗಳ ಪಂಪ್‌ಸೆಟ್‌ಗಳನ್ನು ಪ್ರಾರಂಭಿಸುವ ಮೂಲಕ ಚಾಲನೆ ನೀಡಲಾಗಿದ್ದು, ಇದರಿಂದ ಯೋಜನೆಯ ಮೊದಲ ಹಂತದ ಮಧಬಾವಿ ಹಾಗೂ ಅನಂತಪೂರ, ಮಂಗಸೂಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ 48 ಸಾವಿರ ಎಕರೆ ಜಮೀನಿನ ರೈತರಿಗೆ ಅನಕೂವಾಗಲಿದೆ. ಬರುವ ಕೆಲವೇ ತಿಂಗಳುಗಳಲ್ಲಿ ಯೋಜನೆ ಪೂರ್ಣಗೊಳಿಸಿ ಇಡೀ ಮತಕ್ಷೇತ್ರವನ್ನು ಹಸಿರು ಕ್ರಾಂತಿಯನ್ನಾಗಿ ಮಾಡುವ ಸಂಕಲ್ಪ ಹೊಂದಿರುವೆ.

-ರಾಜು ಕಾಗೆ, ಶಾಸಕರು.ಸವದಿ, ಹೆಬ್ಬಾಳಕರ್‌ಗೆ ಸಚಿವ ಸ್ಥಾನ ನೀಡಿ

ಆರೋಗ್ಯ ಕಾರಣಕ್ಕೆ ಸಚಿವ ಸ್ಥಾನ ಕೇಳಿಲ್ಲ: ಶಾಸಕ ಕಾಗೆ

ಕಾಗವಾಡ: ಶಾಸಕ ಲಕ್ಷ್ಮಣ ಸವದಿ ಹಾಗೂ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಸಚಿವ ಸ್ಥಾನ ನೀಡುವಂತೆ ಶಾಸಕ ರಾಜು ಕಾಗೆ ಸಿಎಂ ಡಿ.ಕೆ.ಶಿವಕುಮಾರಗೆ ಒತ್ತಾಯಿಸಿದರು.ಐನಾಪುರ ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಗೆ ಇನ್ನೂ ಎರಡು ಸಚಿವ ಸ್ಥಾನ ನೀಡಬೇಕೆಂದು ಈಗಾಗಲೇ ಸಿಎಂ ಡಿ.ಕೆ.ಶಿವಕುಮಾರ ಗಮನಕ್ಕೆ ತಂದಿದ್ದೇವೆ. ಲಕ್ಷ್ಮಣ ಸವದಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಕೊಡಬೇಕೆಂದು ಹೇಳಿರುವುದಾಗಿ ತಿಳಿಸಿದರು.ಬೆಳಗಾವಿ ಜಿಲ್ಲೆಯ ಶಾಸಕರಿಗಿಂತ ನಾನು ಹಿರಿಯ. ಆದರೆ, ನನ್ನ ಆರೋಗ್ಯ ಸರಿ ಇಲ್ಲದ ಕಾರಣ ನಾನು ಸಚಿವ ಸ್ಥಾನ ಕೇಳಿಲ್ಲ. ಅಶೋಕ ಪಟ್ಟಣ, ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ ಸೇರಿದಂತೆ ಹಲವು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಇನ್ನೂ ಮುಂದಿನ ಚುನಾವಣೆಯಲ್ಲಿ ಕಾಗವಾಡ ಮತಕ್ಷೇತ್ರದಿಂದ ಬೇರೆಯವರ ಸ್ಪರ್ಧೆ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ. ನಾನು ಸ್ಪರ್ಧೆ ಮಾಡಿದರೇ ಬೇರೆಯವರು ಸ್ಪರ್ಧಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಒಂದು ವೇಳೆ ನಾನು ಸ್ಪರ್ಧೆ ಮಾಡದಿದ್ದರೇ ಯಾರು ಬೇಕಾದರೂ ಸ್ಪರ್ಧಿಸಬಹುದು ಎಂದರು.ಉತ್ತರ ಕರ್ನಾಟಕದಲ್ಲಿಯೇ ಬೆಳಗಾವಿ ಜಿಲ್ಲೆ ಹಿಂದುಳಿದಿದೆ. ನೀರಾವರಿಯನ್ನೇ ನಂಬಿರುವ ಹಾಗೂ ಕಬ್ಬು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೇ, ಕೂಲಿ ಕಾರ್ಮಿಕರು, ಬಡ ರೈತರು, ಹಿಂದುಳಿದ ಸಮಾದವರಿದ್ದು ಅವರ ಏಳಿಗೆಗಾಗಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಇನ್ನೂ ಎರಡು ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.ಸುವರ್ಣ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆ ಬಗ್ಗೆಯೂ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇನೆ. ಇನ್ನೂ ಕೂಡ ಈ ಯೋಜನೆ ಮೂಲಕ ಹಲವಾರು ಹಳ್ಳಿಗಳಿಗೆ ನೀರು ಪೂರೈಕೆ ಆಗಬೇಕಿದೆ. ಸುಮಾರು 30 ಹಳ್ಳಿಗಳ 27 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿಯಾದರೆ ಮಾತ್ರ ಈ ಹಳ್ಳಿಗಳ ಜನರು ಬದುಕಲು ಸಾಧ್ಯವಾಗುತ್ತದೆ ಎಂದರು.ಇದೇ 30 ಹಳ್ಳಿಗಳ ಜನರು ನಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಸತ್ಯಾಗ್ರಹ ಹೋರಾಟ ಮಾಡಿದ್ದರು ಎಂಬುವುದನ್ನು ಕೂಡ ಮುಖ್ಯಮಂತ್ರಿಗಳ ಬಳಿ ಹೇಳಿದ್ದೇನೆ. ಈ ಹಳ್ಳಿಗಳ ಜನರು ಸ್ವಾತಂತ್ರ್ಯ ಸಿಕ್ಕ ನಂತರವೂ ನೀರು ಕಂಡಿಲ್ಲ, ಬೆಳೆ ಕಂಡಿಲ್ಲ, ಜೋಳ ಕಂಡಿಲ್ಲ. ಹೀಗಾಗಿ ಈ ಯೋಜನೆ ಮೂಲಕ ಅವರಿಗೆ ನೀರು ಕೊಡಬೇಕಾಗಿದೆ. ಕಾಗವಾಡದಿಂದ 6 ಕೆರೆ ಹಾಗೂ ಹುಲಗಬಾಳಿಯಿಂದ 11 ಕೆರೆಗಳಿಗೆ ನೀರು ತುಂಬಿಸಬೇಕಾಗಿದೆ. ಈ ಕೆರೆಗಳಿಗೆ ನೀರು ತುಂಬಿಸಿ ಈ ಹಳ್ಳಿಗಳ ಜನತೆ ಕರ್ನಾಟಕದ ಭಾಗವಾಗಿ ಗೌರವಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ಕ್ಕೆ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ
ತೇರದಾಳ ಕ್ಷೇತ್ರದಲ್ಲಿ ಶೇ.4.82 ಡಿಜಿಟೈಸ್‌ ಕಾರ್ಯ