ಸಿಎಂ ಅಧಿಕಾರದಲ್ಲಿ ಮುಂದುವರೆಯಬೇಕು : ಸಚಿವ ಕೆ.ಎನ್.ರಾಜಣ್ಣ

KannadaprabhaNewsNetwork |  
Published : Jun 22, 2025, 01:18 AM ISTUpdated : Jun 22, 2025, 11:56 AM IST
 ಅಮೃತ ಮಹೋತ್ಸವ | Kannada Prabha

ಸಾರಾಂಶ

ಬಡವರ ಬಗ್ಗೆ ಅಪಾರ ಕಾಳಜಿಯುಳ್ಳವರು. ಅವರ ಸೇವೆ ಮಾಡಲು ರಾಜಕೀಯ ಅಧಿಕಾರ ಮುಖ್ಯವಾಗಿದ್ದು, ಬಡವರಿಗಾಗಿ ಸಿದ್ಧರಾಮಯ್ಯ ಅವರು ಅಧಿಕಾರದಲ್ಲಿರಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

 ತುಮಕೂರು :  ಬಡವರ ಬಗ್ಗೆ ಅಪಾರ ಕಾಳಜಿಯುಳ್ಳವರು. ಅವರ ಸೇವೆ ಮಾಡಲು ರಾಜಕೀಯ ಅಧಿಕಾರ ಮುಖ್ಯವಾಗಿದ್ದು, ಬಡವರಿಗಾಗಿ ಸಿದ್ಧರಾಮಯ್ಯ ಅವರು ಅಧಿಕಾರದಲ್ಲಿರಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಾಟಾಗಿದ್ದ ತಮ್ಮ ಅಮೃತ ಮಹೋತ್ಸವ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ನಾನು ರಾಜಕೀಯದಿಂದ ದೂರ ಉಳಿಯುವ ಮನಸ್ಸು ಮಾಡಿದ್ದೇನೆ. ಆದರೆ ಬಡವರ ಏಳಿಗೆಗಾಗಿ ಸದಾ ಶ್ರಮಿಸುತ್ತೇನೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಧಿಕಾರ ಇರಬೇಕು. ಅಧಿಕಾರ ಇದ್ದಾಗ ಮಾತ್ರವೇ ಬಡವರಿಗೆ ಅನುಕೂಲ ಮಾಡಲು ಸಾಧ್ಯ. ಬಡವರ ಸೇವೆಗಾಗಿ ಮತ್ತು ಅವರ ಏಳಿಗೆಗಾಗಿ ನೀವು ಅಧಿಕಾರದಲ್ಲಿ ಮುಂದುವರೆಯಬೇಕು ಎಂದು ಮನವಿ ಮಾಡಿದರು.

ಮಧುಗಿರಿ ಕ್ಷೇತ್ರ ಮಿಡಿಗೇಶಿಯಲ್ಲಿ ಈ ಹಿಂದೆ ನಡೆದ ಸಮಾರಂಭದಲ್ಲಿ ಮಕ್ಕಳಿಗೆ ಶೂ ಭಾಗ್ಯಕ್ಕಾಗಿ ಮನವಿ ಮಾಡಿದ್ದೆ. ಅದನ್ನು ಜಾರಿಗೆ ತಂದು ಬಡ ಮಕ್ಕಳಿಗ ಅನುಕೂಲ ಕಲ್ಪಿಸಿದರು. ಅನ್ನಭಾಗ್ಯದಂತಹ ಕ್ರಾಂತಿಕಾರಕ ಯೋಜನೆ ರೂಪಿಸಿದರು. ಈ ಯೋಜನೆ ಯಾವುದೇ ಒಂದು ಸಮುದಾಯಕ್ಕೆ ಮತ್ತು ವರ್ಗಕ್ಕೆ ಸೀಮಿತವಲ್ಲ. ಎಲ್ಲ ಬಡವರಿಗೂ ಈ ಯೋಜನೆ ಅನುಕೂಲವಾಗಿದೆ. ಇಷ್ಟಾದರೂ ಟೀಕೆಗಳು ನಿಂತಿಲ್ಲ. ಅದಕ್ಕೆ ತಲೆಕೆಡಿಸಿಕೊಳ್ಳುವುದೂ ಇಲ್ಲ ಎಂದರು.

ಮಧ್ಯಮ ಕುಟುಂಬದಿಂದ ಬಂದ ನಾನು ಬಾಲ್ಯದಿಂದಲೂ ಬಡವರ ಪರ ಹೋರಾಡುತ್ತಾ ಬಂದಿದ್ದೇನೆ. ಬಡವರಿಗೆ ದೌರ್ಜನ್ಯ ಆದರೆ ನಾನು ಸಹಿಸುವುದಿಲ್ಲ. 50 ವರ್ಷಗಳಿಂದಲೂ ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತಲೇ ನಾನೀಗ ಸಚಿವನಾಗಿ ನಿಂತಿದ್ದೇನೆ ಎಂದು ತಮ್ಮ ಹೋರಾಟದ ದಿನಗಳನ್ನು ಸ್ಮರಿಸಿಕೊಂಡರು.

ನಾನು ಸಾಮಾನ್ಯ ಕ್ಷೇತ್ರಕ್ಕೆ ಹೋಗಿ ಅಲ್ಲಿ ಗೆದ್ದು ಬಂದಿದ್ದೇನೆ. ಗೆದ್ದ ಮೇಲೆ ಜನರ ಋಣ ತೀರಿಸಬೇಕು. ರೈತರ ಬದುಕು ಮತ್ತು ಬಡವರ ಬದುಕು ಹಸನಾಗಬೇಕು ಎಂಬ ಉದ್ದೇಶ ನನ್ನದು. ಈ ಕಾರಣಕ್ಕಾಗಿಯೇ ಹಲವು ಯೋಜನೆಗಳನ್ನು ಜಾರಿಗೆ ತಂದು ಬಡವರ ಉದ್ಧಾರಕ್ಕೆ ಶ್ರಮಿಸಿದ್ದೇನೆ. ರಾಜಕಾರಣದಲ್ಲಿ ಅಧಿಕಾರ ಇದ್ದಾಗ ಧ್ವನಿ ಇಲ್ಲದವರಿಗೆ ಧನಿಯಾಗಬೇಕು. ಅವರ ಆಶೀರ್ವಾದವೇ ದೇವರ ಆಶೀರ್ವಾದವಾಗುತ್ತದೆ. ಬಡವರಿಗೆ ಸಹಾಯ ಮಾಡದೆ ಅವರನ್ನು ನಿರ್ಲಕ್ಷಿಸಿದರೆ ಅವರ ಶಾಪ ಖಂಡಿತಾ ತಟ್ಟದೇ ಇರದು ಎಂದರು.

ಅಸಹಾಯಕರಿಗೆ ಹಿಂಸೆ ಕೊಟ್ಟಾಗ ಮುಂದೆ ಅದು ನಮಗೆ ಹಿಂದಿರುಗುತ್ತದೆ. ಇವೆಲ್ಲವನ್ನು ಗಮನಿಸಿಯೇ ಬಡವರಿಗೆ ಅನುಕೂಲವಾಗುವ ಯೋಜನೆಗಳಿಗೆ ಹೆಚ್ಚು ಆಸಕ್ತಿ ವಹಿಸಲಾಗಿದೆ ಎಂದರು.

ಸಹಕಾರ ಚಳವಳಿ ಜನರ ಚಳವಳಿಯಾಗಬೇಕು. ರೈತರ ಬದುಕು ಹಸನಾಗಬೇಕು. ಆಗ ಮಾತ್ರ ಜನ ಮತ್ತು ಈ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಮುಂದಿನ ದಿನಗಳಲ್ಲಿ ಬಡವರ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.

PREV
Read more Articles on

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್