ಕನ್ನಡಪ್ರಭ ವಾರ್ತೆ ಶಿಕಾರಿಪುರ
ಶನಿವಾರ ಪಟ್ಟಣದ ಆರಾಧ್ಯದೈವ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಅವಧಿ ಮುಖ್ಯಮಂತ್ರಿಯಾಗಿ ದಿ.ದೇವರಾಜ ಅರಸ್ ರವರ ದಾಖಲೆಯನ್ನು ಹಿಂದಿಕ್ಕಿದ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಿ ನಂತರದಲ್ಲಿ ಜನ ಮೆಚ್ಚಿದ ನಾಯಕ ಸಿದ್ದರಾಮಯ್ಯ ನವರ ದೀರ್ಘಾವಧಿಯ ಸಂಭ್ರಮ ಅರ್ಥಪೂರ್ಣ ಆಚರಣೆ ಅಂಗವಾಗಿ ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರಿಗೆ ಸೀರೆ ಹಾಗೂ ಸಿಹಿ ವಿತರಿಸಿ ಮಾತನಾಡಿದರು.
ಬಡವರು, ಕೂಲಿಕಾರರು, ಹಿಂದುಳಿದವರ ಬಗ್ಗೆ ಅಪಾರ ಸಹಾನುಭೂತಿ ಹೊಂದಿರುವ ಸಿದ್ದರಾಮಯ್ಯ ರಾಜ್ಯದ ದೀಮಂತ ನಾಯಕರು ಎಂದ ಅವರು, ದಕ್ಷ ಹಾಗೂ ಜನಪರ ಆಡಳಿತ ನೀಡುವ ಜತೆಗೆ ಸರ್ವ ಜನಾಂಗವನ್ನು ಪ್ರೀತಿಸುವ ಬಹು ವಿಶಾಲ ಗುಣ ಹೊಂದಿದ ಅಪರೂಪದ ವ್ಯಕ್ತಿಯಾಗಿದ್ದು, ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಹಸಿವು ಮುಕ್ತ ರಾಜ್ಯವಾಗಿಸಲು ಬಸವ ಜಯಂತಿಯಂದು ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣವೇ ಅನ್ನಭಾಗ್ಯ ಯೋಜನೆ ಜಾರಿಗೆ ತಂದ ಅನ್ನರಾಮಯ್ಯ ಎಂಬ ಹೆಗ್ಗಳಿಕೆಯನ್ನು ಸಿದ್ದರಾಮಯ್ಯ ಹೊಂದಿದ್ದು, ಇದೀಗ ಪುನಃ 2ನೇ ಬಾರಿ ಮುಖ್ಯಮಂತ್ರಿಯಾಗಿ 5 ಗ್ಯಾರಂಟಿ ಯೋಜನೆ ಮೂಲಕ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ದೀನ ದಲಿತರು, ಅಲ್ಪಸಂಖ್ಯಾತರು, ರೈತರು ಸ್ವಾಭಿಮಾನದಿಂದ ಬದುಕಲು ಅವಕಾಶ ಕಲ್ಪಿಸಿದ್ದಾರೆ ಎಂದರು.ಕೆಲ ಮನುವಾದಿಗಳು ವೈಯುಕ್ತಿಕ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಸಿದ್ದರಾಮಯ್ಯನವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಪ್ರಹ್ಲಾದ್ ಜೋಶಿ ಹೈಕಮಾಂಡ್ ಮೆಚ್ಚಿಸಲು ಸಿದ್ದರಾಮಯ್ಯನವರ ಅಭಿವೃದ್ಧಿ ಶೂನ್ಯ ಎಂದಿದ್ದಾರೆ, ಅವರು ಒಮ್ಮೆ ಸಿದ್ದರಾಮಯ್ಯನವರ ಅಭಿವೃದ್ಧಿ ಏನು ಅಂತ ಅವರ ಮನೆ ಕೆಲಸದವರಿಗೆ ಕೇಳಿ ತಿಳಿದುಕೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾತನಾಡಿ, ಹಸಿದವರಿಗೆ ಮಾತ್ರ ಹಸಿವಿನ ಬೆಲೆ ಗೊತ್ತು. ಹಾಗಾಗಿ ಸಿದ್ದರಾಮಯ್ಯನವರು ಜನಪರ ಆಡಳಿತ ನೀಡುತ್ತಿದ್ದಾರೆ. ತಾಲೂಕಿನ ಜನತೆ ಅವರ ಋಣ ಮರೆಯಬಾರದು ಎಂದರು.
ಉದ್ಯಮಿ ಎನ್.ವಿ ಈರೇಶ್ ಮಾತನಾಡಿ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಳಂಕವಿಲ್ಲದೆ ಆಡಳಿತ ನಡೆಸುತ್ತಿದ್ದು, ಸಹಿಸದ ವಿರೋಧ ಪಕ್ಷದವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್, ಶಿವು ನಾಯ್ಕ, ದಯಾನಂದ, ಗುಡ್ಡಳ್ಳಿ ಸುರೇಶ್, ಕಲ್ವತ್ತಿ ಈಶಣ್ಣ, ದೊಡ್ಡಪ್ಪ, ನಗರದ ರವಿ ಕಿರಣ್, ಸಮೀರ್, ಸಂತೋಷ, ಸಾಮ್ರಾಟ್, ನಾಗರಾಜ್, ಪಾಲಾಕ್ಷಪ್ಪ ಕುಸ್ಕೂರ್ ಮತ್ತಿತರರು ಹಾಜರಿದ್ದರು.