ಜನರ ಬೇಡಿಕೆ ಪೂರೈಸುವ ಮಹತ್ವದ ವ್ಯವಸ್ಥೆ ಸಹಕಾರ ವಲಯ

KannadaprabhaNewsNetwork | Published : Jan 15, 2024 1:45 AM

ಸಾರಾಂಶ

ಮಧ್ಯಮ ವರ್ಗದವರು, ಬಡವರು, ಕೂಲಿಕಾರರ ಬದುಕಿಗೆ ಸಹಕಾರಿ ಸಂಘಗಳು ಆಸರೆಯಾಗಿ ನಿಂತಿವೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ. ನಂಜೇಗೌಡ ಹೇಳಿದರು.

ಧಾರವಾಡ: ಸಹಕಾರ ವಲಯ ಪ್ರಸ್ತುತ ಜನರ ಬಹುತೇಕ ಬೇಡಿಕೆಗಳನ್ನು ಪೂರೈಸುವ ಮಹತ್ವದ ವ್ಯವಸ್ಥೆಯಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ. ನಂಜೇಗೌಡ ಹೇಳಿದರು.

ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಜರುಗಿದ ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿ ಶಾಖೆಯ ಮತ್ತು ನವೋದಯ ಸ್ವಸಹಾಯ ಸಂಘಗಳ ಉದ್ಘಾಟನೆಯಲ್ಲಿ ಠೇವಣಿ ಪತ್ರಗಳನ್ನು ವಿತರಿಸಿ ಮಾತನಾಡಿದರು. ಆರ್ಥಿಕ ವ್ಯವಹಾರವನ್ನೇ ಮುಖ್ಯ ಉದ್ದೇಶವಾಗಿ ಹೊಂದಿದ್ದ ಬ್ಯಾಂಕುಗಳ ಸಮೀಪ ಜನರು ಹೋಗಲು ಸಾಧ್ಯವಾಗಲಾರದ ಪರಿಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲಿ ಸ್ಥಾಪನೆಯಾದ ಸಹಕಾರ ಸಂಘಗಳತ್ತ ಜನರು ಆಕರ್ಷಿತರಾಗಿ ಸೌಲಭ್ಯಗಳನ್ನು ಪಡೆಯುವಂತಾಯಿತು ಎಂದರು.

ಹಾಲು, ರಸಗೊಬ್ಬರ, ಅಡಕೆ ಮುಂತಾದ ಕೃಷಿ ಉತ್ಪನ್ನಗಳ ಸಲುವಾಗಿ ದೇಶದಲ್ಲಿ ಈಗ ಲಕ್ಷಾಂತರ ಸಹಕಾರ ಸಂಘಗಳು ಉಪಯುಕ್ತ ಸೇವೆ ಸಲ್ಲಿಸುತ್ತಿವೆ ಎಂಬುದನ್ನು ಮರೆಯುವಂತಿಲ್ಲ. ಮಧ್ಯಮ ವರ್ಗದವರು, ಬಡವರು, ಕೂಲಿಕಾರರ ಬದುಕಿಗೆ ಈ ಸಂಘಗಳು ಆಸರೆಯಾಗಿ ನಿಂತಿವೆ. ಇದೇ ವೇಳೆ ಸ್ವಲ್ಪ ಮಟ್ಟಿನ ನಿರುದ್ಯೋಗ ಬವಣೆಯನ್ನು ನೀಗಿಸಿವೆ ಎಂದರು.

ನೂತನ ಶಾಖೆಗೆ ಚಾಲನೆ ನೀಡಿ ಮಾತನಾಡಿದ ವೈಶುದೀಪ ಫೌಂಡೇಶನ್ ಅಧ್ಯಕ್ಷರಾದ ಶಿವಲೀಲಾ ಕುಲಕರ್ಣಿ, ಗ್ರಾಮಾಂತರ ಪ್ರದೇಶದ ಜನರಿಗೆ ಸಕಾಲಕ್ಕೆ ಆರ್ಥಿಕ ನೆರವು ಸಿಗುತ್ತಿಲ್ಲ. ಆದರೆ, ಸಹಕಾರ ಸಂಘಗಳು ತಮ್ಮ ಪ್ರಾಮಾಣಿಕ ಸೇವೆಯನ್ನು ಒದಗಿಸುತ್ತಿವೆ. ಅತಿ ಶೀಘ್ರ ಸಮಯದಲ್ಲಿ ಸಹಕಾರ ಸಂಘಗಳು ಸ್ವಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ಸ್ವ ಉದ್ಯೋಗ ಕೈಕೊಳ್ಳಲು ಆರ್ಥಿಕ ನೆರವು ನೀಡುವ ಮೂಲಕ ಬಹಳಷ್ಟು ಕುಟುಂಬಗಳ ಸ್ವಾವಲಂಬನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಸಕಲ ಸೌಲಭ್ಯ ಒದಗಿಸಲು ಮುಂದಾಗಿರುವ ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿಯ ಪ್ರಯತ್ನ ಶ್ಲಾಘನೀಯ ಎಂದರು.

ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅಮ್ಮಿನಭಾವಿಯ ಅಭಿನವ ಶಾಂತಲಿಂಗ ಶಿವಾಚಾರ್ಯರು, ಸುಳ್ಳದ ಶ್ರೀ ಸಿದ್ದರಾಮ ಶಿವಾಚಾರ್ಯರು, ಗರಗದ ಶ್ರೀ ಪ್ರಶಾಂತ ದೇವರು ಸಮಾರಂಭದ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕಿ ಸೀಮಾ ಮಸೂತಿ ಸ್ವ-ಸಹಾಯ ಸಂಘಗಳಿಗೆ ಚಾಲನೆ ನೀಡಿದರು. ಉದ್ಯಮಿ ಗೋವಿಂದ ಜೋಶಿ ಅವರು ಸಾಲ ಪತ್ರ ಮತ್ತು ಗ್ರಾಪಂ ಅಧ್ಯಕ್ಷೆ ನೀಲವ್ವ ತಿದಿ ಶೇರು ಪತ್ರಗಳನ್ನು ವಿತರಿಸಿದರು.

ಮಾಜಿ ಕಾರ್ಪೊರೇಟರ್ ಅಜ್ಜಪ್ಪ ಹೊರಕೇರಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಶೈಲಜಾ ತಪ್ಪಲಿ, ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ, ನಿರ್ದೇಶಕ ಸಿದ್ದಪ್ಪ ಸಪ್ಪೂರಿ, ಅಖಿಲ ಭಾರತೀಯ ಸಹಕಾರ ಭಾರತಿ ಅಧ್ಯಕ್ಷ ರಮೇಶ ವೈದ್ಯ, ಅಮ್ಮಿನಬಾವಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುನೀಲ ಗುಡಿ, ಗಣ್ಯರಾದ ಈಶ್ವರ ಶಿವಳ್ಳಿ, ಪ್ರೇಮಾ ಹೊರಕೇರಿ, ಬಸವಣ್ಣೆಪ್ಪ ನವಲಗುಂದ ಮತ್ತಿತರರು ಇದ್ದರು.

ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿ ಸಂಸ್ಥಾಪಕ ಮಲ್ಲಿಕಾರ್ಜುನ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಾ ಪ್ರಾರ್ಥಿಸಿದರು. ಆಸ್ಮಾ ನದಾಫ್ ನಿರೂಪಿಸಿದರು. ಶೈಲಜಾ ದೊಡ್ಡಮನಿ ವಂದಿಸಿದರು.

Share this article