- ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸಭೆಯಲ್ಲಿ ಬಚ್ಚೇಗೌಡರ ಸಲಹೆ
ಕನ್ನಡಪ್ರಭ ವಾರ್ತೆ ಹೊಸಕೋಟೆ
ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ರೈತರ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ನಿರಂತರ ಶ್ರಮಿಸಬೇಕು ಎಂದು ಮಾಜಿ ಸಂಸದ ಬಚ್ಚೇಗೌಡ ಹೇಳಿದರು.ನಗರದಲ್ಲಿ ಆಯೋಜಿಸಿದ್ದ ಹೊಸಕೋಟೆ ಟೌನ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 49ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಹೊಸಕೋಟೆ ತಾಲೂಕಿನಲ್ಲಿ ಒಟ್ಟು ಒಂಬತ್ತು ಸಹಕಾರ ಸಂಘಗಳಿದ್ದು, ಎಲ್ಲಕ್ಕಿಂತ ಹೊಸಕೋಟೆ ಟೌನ್ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಮುಂಚೂಣಿಯಲ್ಲಿದೆ ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಸಹಕಾರ ಸಂಘ ರೈತರ ಬಾಳಿಗೆ ಹೊಸ ಚೈತನ್ಯ ನೀಡಿದೆ. ತಾಲೂಕಿನ ಹಲವು ಸಹಕಾರ ಸಂಘಗಳು ಡಿವಿಡೆಂಟ್ ನೀಡಲು ಪರದಾಡುತ್ತಿದ್ದರೆ, ಈ ಸಂಘ ನಿಯಮಾನುಸಾರ ಗರಿಷ್ಠ ಡಿವಿಡೆಂಟ್ ನೀಡುತ್ತಿದೆ ಎಂದರು.ಸಹಕಾರ ಸಂಘದ ಅಧ್ಯಕ್ಷ ಪೂಜೇನ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, 2023-24ನೇ ಸಾಲಿನಲ್ಲಿ 1.52 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸಾಲ ವಸೂಲಾತಿಯಲ್ಲಿ ಶೇ.99.20 ಪ್ರಗತಿ ಸಾಧಿಸಿದೆ. ಸಂಘ ಈ ಬಾರಿಯೂ ಷೇರುದಾರರಿಗೆ ಶೇ.25 ಗರಿಷ್ಠ ಡಿವಿಡೆಂಟ್ ಘೋಷಿಸಿದೆ. ಪ್ರಸ್ತುತ ಸಂಘದಲ್ಲಿ ೫೧೬೧ ಸದಸ್ಯರಿದ್ದು, 2.77 ಕೋಟಿ ಆಪತ್ ಧನ, 126.2 ಕೋಟಿ ಸದಸ್ಯರ ಠೇವಣಿ ಇದೆ. ಒಟ್ಟು ದುಡಿಯುವ ಬಂಡವಾಳ 141.1 ಕೋಟಿ ಇದೆ. ಹೂಡಿಕೆಗಳು 38.9 ಕೋಟಿ, ಬಡ್ಡಿ ರಹಿತ ಬೆಳೆಸಾಲ 8.66 ಕೋಟಿ, ಆಧಾರ ಸಾಲಗಳು 285.5 ಕೋಟಿ ನೀಡಲಾಗಿದೆ ಎಂದರು.
ಸಹಕಾರ ಸಂಘಗಳ ಜಂಟಿ ನಿರ್ದೇಶಕ ಅಶ್ವಥ್ ನಾರಾಯಣಗೌಡ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಎಸ್.ನಾರಾಯಣ ಶರ್ಮ, ಸಂಘದ ವ್ಯವಸ್ಥಾಪಕ ನಂಜುಂಡೇಗೌಡ, ಮುಖಂಡರಾದ ಗೋಪಾಲಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಬಮೂಲ್ ನಿರ್ದೇಶಕ ಎಲ್.ಎನ್.ಟಿ.ಮಂಜುನಾಥ್, ಸಂಘದ ನಿರ್ದೇಶಕರಾದ ಕೆ.ಸತೀಶ್, ಸಿ.ವಿ.ಗಣೇಶ್, ಆರ್.ಸುಜಾತ, ರಾಜಪ್ಪ, ಎನ್.ವಿ.ವೆಂಕಟೇಶ್, ಅಶ್ವಥ್, ಡಿ.ಎಚ್.ಹರೀಶ್, ಬಿ.ಮುನಿರಾಜು, ನಾಗರತ್ನ, ಸುಬ್ರಮಣಿ, ರತ್ನಮ್ಮ ಇತರರಿದ್ದರು.