ಕಾರವಾರ: ತೆಂಗಿನಕಾಯಿ ಕೊಳ್ಳಲು ಪರಿಚಯಸ್ಥ ಮಹಿಳೆಯೊಬ್ಬರು ಮನೆಗೆ ಬಂದಿದ್ದನ್ನು ಪ್ರಶ್ನಿಸಿ, ನೆರೆಹೊರೆಯವರು ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಕೋಡಿಬಾಗದಲ್ಲಿ ನಡೆದಿದೆ. ಈ ಸಂಬಂಧ ನ್ಯಾಯಾಲಯದ ಅನುಮತಿ ಮೇರೆಗೆ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಅರವಿಂದ ಅವರಿಗೆ ಪರಿಚಯವಿದ್ದ ಮಹಿಳೆಯೋರ್ವರು ಕಳೆದ 3-4 ವರ್ಷಗಳಿಂದ ಅವರಿಂದ ತೆಂಗಿನಕಾಯಿ ಖರೀದಿಸುತ್ತಿದ್ದರು. ಜ. 5ರಂದು ಮಧ್ಯಾಹ್ನ 1.30ರ ಸುಮಾರಿಗೆ ಮಹಿಳೆ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಅರವಿಂದ ಅವರ ಮನೆಗೆ ಬಂದಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿಗಳು, ನಿಮ್ಮ ಮನೆಗೆ ಆ ಹೆಂಗಸು ಯಾಕೆ ಬಂದಿದ್ದಾರೆ? ಎಂದು ಅರವಿಂದ ಅವರನ್ನು ಪ್ರಶ್ನಿಸಿ, ಅವಾಚ್ಯವಾಗಿ ಬೈದಿದ್ದಾರೆ. ಇದಕ್ಕೆ ಅರವಿಂದ, ಅವರು ನನ್ನ ಮನೆಗೆ ಬಂದರೆ ನಿಮಗೇನು ತೊಂದರೆ? ಎಂದು ಕೇಳಿದಾಗ, ಮೂವರು ಆರೋಪಿಗಳು ಸೇರಿಕೊಂಡು ಅರವಿಂದ ಅವರ ತಲೆ, ಬೆನ್ನು ಮತ್ತು ಕಾಲಿಗೆ ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ನಡೆದ ದಿನದಂದು ಅರವಿಂದ ಅವರು ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೂರು ನೀಡಿದ್ದರು. ಆಗ ಪೊಲೀಸರು ಎನ್ಸಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯದ ಅನುಮತಿ ಪಡೆಯುವಂತೆ ಸೂಚಿಸಿದ್ದರು. ಅದರಂತೆ ಫಿರ್ಯಾದಿದಾರರು ಜ. 30ರಂದು ನ್ಯಾಯಾಲಯದಿಂದ ಅನುಮತಿ ಪಡೆದು ಬಂದಿದ್ದು, ಇದೀಗ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.