ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ 2025ರ ವೇಳೆಗೆ ಶೂನ್ಯ ಸ್ಥಳೀಯ ಮಲೇರಿಯ ಸಾಧನೆಯನ್ನು ಕೈಗೊಳ್ಳಬೇಕಿದೆ. ಆದ್ದರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಮಲೇರಿಯ ಮುಕ್ತ ಜಿಲ್ಲೆಯ ಸಾಧನೆಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ತಿಳಿಸಿದರು.ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು ಚಮಚದಷ್ಟು ನಿಂತ ನೀರಲ್ಲಿ ಕೂಡ ಸಾಂಕ್ರಾಮಿಕ ರೋಗ ಹರಡಲು ಕಾರಣಗುವ ಸೊಳ್ಳೆಗಳ ಉತ್ಪತ್ತಿಗೆ ಅವಕಾಶವಿರುತ್ತದೆ. ಸೊಳ್ಳೆಗಳ ಉತ್ಪತ್ತಿ ಆದರೆ ಮಲೇರಿಯ ಹಾಗೂ ಇತರ ಕೀಟ ಜನ್ಯ ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸೊಳ್ಳೆಗಳ ಉತ್ಪತ್ತಿ ತಾಣಗಳು, ನೀರು ನಿಲ್ಲುವ ತಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರಿನ ತೊಟ್ಟಿಗಳು, ಟ್ಯಾಂಕ್ ಗಳು, ಸಂಪುಗಳನ್ನು ಪ್ರತಿವಾರ ಸ್ವಚ್ಛಗೊಳಿಸಬೇಕು. ಮನೆಗಳಲ್ಲಿ ಪ್ರಿಜ್, ಏರ್ ಕೂಲರ್ ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಜೈವಿಕ ವಿಧಾನಗಳಿಂದ ಮಲೇರಿಯವನ್ನು ತಡೆಗಟ್ಟಬೇಕು. ಅನಿವಾರ್ಯವಿದ್ದಾಗ ಮಾತ್ರ ಫಾಗಿಂಗ್ ಮಾಡಿಸಬೇಕು. ಇಲ್ಲವೇ ಬೇವಿನ ಹೊಗೆ ಹಾಕಿ ಸೊಳ್ಳೆಗಳನ್ನು ನಿಯಂತ್ರಿಸಬೇಕು. ಮನೆಗಳಲ್ಲಿ ಸೊಳ್ಳೆ ಪರದೆ ಹಾಗೂ ಇತರ ನಿರೋಧಕಗಳನ್ನು ಬಳಸಬೇಕು ಎಂದರು.43 ದೇಶ ಮಲೇರಿಯಾ ಮುಕ್ತ:
ಈಗಾಗಲೇ ಪ್ರಪಂಚದ 43 ದೇಶಗಳು ಮಲೇರಿಯಾ ಮುಕ್ತ ದೇಶಗಳಾಗಿವೆ. ಭಾರತವೂ ಆ ನಿಟ್ಟಿನಲ್ಲಿ ಸಂಕಲ್ಪ ಮಾಡಿದೆ. 2025ರ ವೇಳೆಗೆ ಕರ್ನಾಟಕ ರಾಜ್ಯದಲ್ಲಿ ಮಲೇರಿಯ ಪ್ರಕರಣಗಳ ಶೂನ್ಯ ಸಾಧನೆ ಉದ್ದೇಶದಿಂದ ಮಲೇರಿಯ ನಿಯಂತ್ರಣಕ್ಕೆ ಯುಕ್ತ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಪೋಷಕರು ಹಾಗೂ ಸುತ್ತಮುತ್ತಲ ವಾಸಿಗಳಿಗೆ ಸೊಳ್ಳೆ ನಿಯಂತ್ರಣ ಕುರಿತು ವಿದ್ಯಾರ್ಥಿಗಳು ಅರಿವು ಮೂಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಡಾ. ಮಹೇಶ್ ಕುಮಾರ್ ಅವರು ಸಲಹೆ ನೀಡಿದರು.ಜಿಲ್ಲಾ ಆರೋಗ್ಯಾಧಿಕಾರಿ.ಡಾ.ಎಸ್.ಎಸ್.ಮಹೇಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 2009ನೇ ಸಾಲಿನಲ್ಲಿ 1,554 ಮಲೇರಿಯಾ ಪ್ರಕರಣಗಳು ದಾಖಲಾಗಿದ್ದವು. 2023ರ ಸಾಲಿನಲ್ಲಿ ಕೇವಲ 3 ಪ್ರಕರಣಗಳು ದಾಖಲಾಗಿ ಬಹುತೇಕ ಇಳಿಮುಖವಾಗಿದೆ. 2024ರ ಸಾಲಿನಲ್ಲಿ ಈವರೆಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಜಿಲ್ಲೆಯಲ್ಲಿ ಮಲೇರಿಯ ಪ್ರಕರಣಗಳಿಲ್ಲ ಎಂದು ಸಾರ್ವಜನಿಕರು ತಮ್ಮ ಸುತ್ತಮುತ್ತಲ ಸ್ವಚ್ಛತೆ ಕಾಪಾಡಿಕೊಳ್ಳುವುದನ್ನು ಕಡಿಮೆ ಮಾಡಬಾರದು ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಾಣಾಧಿಕಾರಿ ಡಾ. ಪ್ರಕಾಶ್ ಪಿಪಿಟಿ ಪ್ರದರ್ಶನದ ಮೂಲಕ ಮಲೇರಿಯಾ ನಿಯಂತ್ರಣದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು .ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಜಿ.ಡಿ. ಚಂದ್ರಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕೃಷ್ಣ ಪ್ರಸಾದ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್ ರೆಡ್ಡಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಶಿವಕುಮಾರ್, ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಶಿ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಕೆ.ಮಂಜುಳ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಹರೀಶ್ ರವರು ಉಪಸ್ಥಿತರಿದ್ದರು.
ಉತ್ತಮ ಆರೋಗ್ಯ ಪಾಲನೆಯಿಂದ ರೋಗಗಳ ತಡೆ ಸಾಧ್ಯ:ನಂದಿ ವೈದ್ಯಕೀಯ ಕಾಲೇಜಿನ ನಿರ್ದೇಶಕ ಮಂಜುನಾಥ ಮಾತನಾಡಿ, ಯಾವ ದೇಶದ ಆರೋಗ್ಯ ಸೂಚ್ಯಂಕ ಚೆನ್ನಾಗಿರುತ್ತದೋ, ಆ ದೇಶ ಅಭಿವೃದ್ಧಿಯಲ್ಲಿ ಮುಂದಿರುತ್ತದೆ. ಅಧಿಕ ರಕ್ತದ ಒತ್ತಡ, ಮಧುಮೇಹ ಬಾಧ್ಯತೆಗಳು ಇಂದಿನ ಬದಲಾದ ಜೀವನ ವಿಧಾನದಿಂದ ಬರುವ ಸಾಧ್ಯತೆ ಹೆಚ್ಚಾಗಿದೆ. ಉತ್ತಮ ಜೀವನ ವಿಧಾನ, ವ್ಯಾಯಾಮ, ಆರೋಗ್ಯ ಪಾಲನೆಯಿಂದ ಇಂತಹ ರೋಗಗಳನ್ನು ತಡೆಗಟ್ಟಬಹುದು. ಸೊಳ್ಳೆಗಳ ನಿಯಂತ್ರಣದಿಂದ ಮಲೇರಿಯ, ಡೆಂಗ್ಯು, ಚಿಕುನ್ ಗುನ್ಯ, ಆನೆ ಕಾಲು ರೋಗ ಇನ್ನು ಮುಂತಾದ ಕೀಟ ಜನ್ಯ ಕಾಯಿಲೆಗಳನ್ನು ನಿಯಂತ್ರಿಸಬಹುದು. ಚಳಿ ಜ್ವರ, ಮೈ ಕೈ ನೋವು, ಕಂಡು ಬಂದರೆ ಹತ್ತಿರದ ಆಸ್ಪತ್ರೆಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ಮಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಲೇರಿಯಾ ಪ್ರಕರಣಗಳು ಜಾಸ್ತಿ ಇದ್ದು, ಆ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡರೆ ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಿದರು.