ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ್ನಾಟಕ, ಮಹಾರಾಷ್ಟ್ರಹಾಗೂ ಗೋವಾ ಸೇರಿದಂತೆ ವಿವಿಧ ಕಡೆ ಭಕ್ತರನ್ನು ಹೊಂದಿರುವ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಏಪ್ರಿಲ್ 1ರಿಂದ ಮೇ 20ರ ಅವಧಿಯಲ್ಲಿ ಭಕ್ತರು ಹಾಕಿದ್ದ ಭಕ್ತರ ಕಾಣಿಕೆ ಎಣಿಕೆ ಜು.25ರಂದು ರಾತ್ರಿ ಮುಕ್ತಾಯವಾಗಿದೆ. 50 ದಿನಗಳಲ್ಲಿ ಒಟ್ಟು₹1.96 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಅದರಲ್ಲಿ ₹1.71 ಕೋಟಿ ನಗದು, ₹ 20.44 ಲಕ್ಷ ಮೌಲ್ಯದ ಚಿನ್ನಾಭರಣ, ₹4.44 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸಂಗ್ರಹವಾಗಿದೆ. ಶಕ್ತಿ ಯೋಜನೆಯಿಂದ ಯಲ್ಲಮ್ಮನ ಗುಡ್ಡಕ್ಕೆ ಅಪಾರ ಸಂಖ್ಯೆಯಲ್ಲಿ ಮಹಿಳಾ ಭಕ್ತರ ಹೆಚ್ಚಳವಾಗಿದೆ. ಹಾಗಾಗಿ ದಾಖಲೆ ಪ್ರಮಾಣದಲ್ಲಿ ದೇಣಿಗೆ ಸಂಗ್ರಹವಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಬಿ ಮಹೇಶ ಮಾಹಿತಿ ನೀಡಿದರು.