ಜಾತ್ರಾ ಮಹೋತ್ಸವದ ಅಂಗವಾಗಿ ಮುಕ್ತ ಗಾಳಿಪಟ ಹಾರಾಟ ಸ್ಪರ್ಧೆಪರಶಿವಮೂರ್ತಿ ದೋಟಿಹಾಳ
ಕನ್ನಡಪ್ರಭ ವಾರ್ತೆ ಕೊಪ್ಪಳಹಲವು ವೈಶಿಷ್ಟ್ಯಗಳಿಗೆ ಹೆಸರಾದ ನಗರದ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೂ ಮಠದ ಆವರಣದಲ್ಲಿ ಬಾನಂಗಳದ ಎತ್ತರಕ್ಕೆ ಬಣ್ಣಬಣ್ಣದ ಗಾಳಿಪಟಗಳು ಹಾರಾಡಿದವು.
ನಗರದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಕೊಪ್ಪಳ, ಕೈಗಾರಿಕೆ ವಾಣಿಜ್ಯೋದ್ಯಮಿಗಳ ಸಹಯೋಗದಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಆಯೋಜಿಸಿದ ಕ್ರೀಡಾ ಉತ್ಸವದ ಕಾರ್ಯಕ್ರಮದ ಅಂಗವಾಗಿ ಮುಕ್ತ ಗಾಳಿಪಟ ಹಾರಾಟ ಸ್ಪರ್ಧೆ ನಡೆಯಿತು. ಕರ್ನಾಟಕ ರಾಜ್ಯ ಸೇರಿದಂತೆ ಅನೇಕ ರಾಜ್ಯಗಳಿಂದ ಬಂದಿದ್ದ ಕೈಟ್ಫ್ಲೈಯರ್ಸ್ಗಳು ಗಾಳಿಪಟ ಹಾರಿಸಿದರು.ಬಾನಂಗಳಕ್ಕೆ ಹಾರಾಡಿದ ಗಾಳಿಪಟಗಳು:
ಬೃಹದಾಕಾರದ ಗಾಳಿಪಟಗಳು ಆಗಸದೆತ್ತರಕ್ಕೆ ಹಾರುತ್ತಿದ್ದಂತೆ, ನೆರೆದಿದ್ದ ಮಕ್ಕಳು, ಪೋಷಕರು, ವೃದ್ಧರು, ಜಾತ್ರಾ ಮಹೋತ್ಸವಕ್ಕೆ ಬಂದಂತಹ ಭಕ್ತರು ತಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಸಂಭ್ರಮಿಸಿದರು.ಒಡಿಶಾ, ಹರಿಯಾಣ, ಕೇರಳ, ಅಸ್ಸಾಂ, ಬೆಂಗಳೂರು, ದೊಡ್ಡಬಳ್ಳಾಪುರ, ರಾಜಕೋಟ ಹಾಗೂ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಂದ ತಂಡಗಳು ಆಗಮಿಸಿದ್ದವು. 30ಕ್ಕೂ ಹೆಚ್ಚು ನಾನಾ ಬಗೆಯ ಗಾಳಿಪಟಗಳನ್ನು ವೃತ್ತಿನಿರತ ಕೈಟ್ಫ್ಲೈಯರ್ಸ್ಗಳು ಹಾರಿಸಿದರು.
ಯಾವ್ಯಾವ ಗಾಳಿಪಟಗಳು?:ಈ ಮೊದಲು ಹಾಳೆ, ರಟ್ಟುಗಳಿಂದ ಗಾಳಿಪಟ ತಯಾರಿಸಿ ಹಾರಾರಿಸುತ್ತಿದ್ದರು. ಆದರೆ ಆಧುನಿಕತೆಯ ಪರಿಣಾಮವಾಗಿ ಬಲೂನು, ಬಟ್ಟೆಗಳ ಮೂಲಕ ಗಾಳಿಪಟ ಮಾಡಲಾಗುತ್ತಿದೆ. ಅಂತವುಗಳಲ್ಲಿ ಪೈಲೇಟ್ ಕೈಟ್, ಟೈಗರ್ ಕೈಟ್, ಹಾರ್ಸ್ ಕೈಟ್, ಫಿಶ್ ಕೈಟ್, ಕೌ ಕೈಟ್, ಡ್ರಾಗನ್ ಕೈಟ್, ಟ್ರೈನ್ಕೈಟ್, ಸ್ಟೆಂಟ್ಕೈಟ್, ತ್ರಿಡಿಕೈಟ್, ಪ್ಯಾರಾಕೈಟ್, ಈಗಲ್ ಕೈಟ್, ಸ್ಟಾರ್ಕೈಟ್, ಡಾಲ್ಕೈಟ್ ಸೇರಿ 2 ಅಡಿಯಿಂದ 50ಕ್ಕೂ ಹೆಚ್ಚು ಅಡಿಯವರೆಗಿನ ನಾನಾ ಬಗೆಯ 30ಕ್ಕೂ ಹೆಚ್ಚು ಗಾಳಿಪಟಗಳು ಹಾರಾಡಿದವು. 10ಕ್ಕೂ ಹೆಚ್ಚು ವೃತ್ತಿನಿರತ ಕೈಟ್ಫ್ಲೈಯರ್ಸ್ಗಳು ಭಾಗವಹಿಸಿದ್ದರು.ಕೊಪ್ಪಳ ಬ್ರ್ಯಾಂಡ್ ಕೈಟ್:
ಜಾತ್ರಾ ವಿಶೇಷದ ಹಿನ್ನೆಲೆ ಕೊಪ್ಪಳ ಪ್ರವಾಸೋದ್ಯಮ ಇಲಾಖೆಯ ಬ್ರ್ಯಾಂಡ್ನ್ನು ಗಾಳಿಪಟದಲ್ಲಿ ಡಿಸೈನ್ ಮಾಡುವ ಮೂಲಕ ಆಕಾಶದತ್ತ ಮೇಲಕ್ಕೆ ಹಾರಿಸಿದರು. ಇದಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಚಾಲನೆ ನೀಡಿದರು.ಹಂಪಿ ಉತ್ಸವದಲ್ಲಿ ಮಾತ್ರ ಗಾಳಿಪಟ ಹಾರಿಸುವ ಕಾರ್ಯಕ್ರಮ ನಡೆಯುತ್ತಿತ್ತು. ಈಗ ನಮ್ಮ ಕೊಪ್ಪಳದಲ್ಲಿ ನಡೆಯುತ್ತಿದೆ. ಮುಂದಿನ ಸಲ ಹೆಲಿಕಾಪ್ಟರ್ ಮೂಲಕ ಗವಿಮಠದ ಗುಡ್ಡ, ಮಳಿಮಾದೇಶ್ವರ ಬೆಟ್ಟ ಸೇರಿದಂತೆ ಅನೇಕ ಸ್ಥಳ ತೋರಿಸುವ ಕೆಲಸವನ್ನು ಮಾಡಲು ಮುಂದಾಗಬೇಕಿದೆ ಎನ್ನುವ ಅಭಿಪ್ರಾಯ ನೆರೆದ ಜನರಿಂದ ಕೇಳಿಬಂತು.