- ರಾಜನಹಳ್ಳಿ ಸೀತಮ್ಮ ಬಾಲಕಿಯರ ಕಾಲೇಜಿನಲ್ಲಿ ಪ್ರತಿಭಾ ವಿಕಾಸ ಸಂಘ ಸಮಾರೋಪ- - - ಕನ್ನಡಪ್ರಭ ವಾರ್ತೆ ದಾವಣಗೆರೆ ಉತ್ತಮ ಶಿಕ್ಷಣ, ಉತ್ತಮ ಹವ್ಯಾಸಗಳು, ಪಾಠಗಳ ಜೊತೆಗೆ ಆಟ, ಯೋಗ ಮೊದಲಾದವುಗಳ ಕಡೆಗೂ ವಿದ್ಯಾರ್ಥಿನಿಯರು ಗಮನಹರಿಸಬೇಕು. ಆ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಪ್ರಮುಖವಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಿಮ್ಮ ಉತ್ತಮ ಹವ್ಯಾಸಗಳಿಗೆ ಜೀವ ತುಂಬುವ ಕೆಲಸ ನಿಮ್ಮಿಂದ ಸದಾಕಾಲ ಆಗಬೇಕು. ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಿ, ದೊಡ್ಡ ಕನಸುಗಳನ್ನು ಕಂಡು ಮುಂದೆ ಬರಬೇಕು. ಮೌಲ್ಯಗಳೊಂದಿಗೆ ಜೀವನ ಪ್ರಾರಂಭಿಸಿ, ಅಂತೆಯೇ ಮೌಲ್ಯಗಳಿಗೆ ಸದಾ ನೀರೆರೆಯುತ್ತ ಸಾಗಬೇಕು. ಆಗ ನೀವು ಸಾಧಕರಾಗುವುದಷ್ಟೇ ಅಲ್ಲ, ಸಮಾಜಕ್ಕೆ ಕೊಡುಗೆಯಾಗುತ್ತೀರಿ. ದೇಶದ ಪ್ರಗತಿಯಲ್ಲಿಯೂ ನಿಮ್ಮೆಲ್ಲರ ಪಾಲು ಇರುತ್ತದೆ ಎಂದು, ಹೊಸ ವರ್ಷದ ಶುಭಾಶಯ ತಿಳಿಸಿದರು.
ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರ ಪ್ರತಿಭೆ ಅನಾವರಣಗೊಳಿಸಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ಮಾಡಿದರು. ಕಲಾ ವಿಭಾಗ, ವಾಣಿಜ್ಯ ವಿಭಾಗ ಹಾಗೂ ವಿಜ್ಞಾನ ವಿಭಾಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರು ಹಾಗೂ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಿದರು.ಕಾಲೇಜಿನ ಪ್ರಾಚಾರ್ಯ ಟಿ.ಎ. ಕುಸಗಟ್ಟಿ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಜಿ.ಕರಿಸಿದ್ದಪ್ಪ, ಹಿರಿಯ ಉಪನ್ಯಾಸಕ ಬಿ ಪಾಲಾಕ್ಷಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಜಿ. ಶಿವಕುಮಾರ್, ಸದಸ್ಯ ಮಂಜುನಾಥ ಪಿಸೆ, ಮಹಾನಗರ ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಉಪ ಪ್ರಾಚಾರ್ಯ ಎ.ಆರ್.ಮಂಜಪ್ಪ, ಮಾಜಿ ಪುರಸಭೆ ಕಾಲೇಜಿನ ಪ್ರಾಚಾರ್ಯ ಸುರೇಶ್, ಬಿ.ಪಿ. ಮಂಜುಳಾ, ವಿದ್ಯಾರ್ಥಿ ಕಾರ್ಯದರ್ಶಿ ಮೋಕ್ಷ, ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಘವೇಂದ್ರ ಸ್ವಾಗತಿಸಿ, ಅರುಣಕುಮಾರಿ ಬಿರಾದಾರ್ ನಿರೂಪಿಸಿದರು. ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.- - - -13ಕೆಡಿವಿಜಿ44:
ದಾವಣಗೆರೆಯಲ್ಲಿ ರಾಜನಹಳ್ಳಿ ಸೀತಮ್ಮ ಪಪೂ ಕಾಲೇಜಿನ ಪ್ರತಿಭಾ ವಿಕಾಸ ಸಂಘದ ಸಮಾರೋಪ ಸಮಾರಂಭವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.