ಸಿರುಗುಪ್ಪ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸೆ. 9ರಂದು ತಾಲೂಕಿನ ರಾವಿಹಾಳ್ ಗ್ರಾಮದಲ್ಲಿ ನಡೆಯಲಿರುವ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ನಿವೃತ್ತ ಶಿಕ್ಷಕ ಹಾಗೂ ಹಾಸ್ಯ ಕಲಾವಿದ ಜೆ. ನರಸಿಂಹಮೂರ್ತಿ ಅವರು ಆಯ್ಕೆಯಾಗಿದ್ದು, ಕಸಾಪ ಪದಾಧಿಕಾರಿಗಳು ಅವರಿಗೆ ಅಧಿಕೃತವಾಗಿ ಶುಕ್ರವಾರ ಆಹ್ವಾನ ನೀಡಿದ್ದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಡಾ. ಮಧುಸೂದನ ಕಾರಿಗನೂರು ಮಾತನಾಡಿ, ನರಸಿಂಹಮೂರ್ತಿ ಅವರಂತಹ ಹಿರಿಯ ಸಾಹಿತಿ ಹಾಗೂ ಅನುಭವಿ ಶಿಕ್ಷಕರು ಈ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಅವರ ಅಪಾರ ಅನುಭವ ಮತ್ತು ಮಾರ್ಗದರ್ಶನದಿಂದ ಸಮ್ಮೇಳನ ಮತ್ತಷ್ಟು ಅರ್ಥಪೂರ್ಣವಾಗಿ ಮೂಡಿಬರಲಿದೆ. ವಿಶೇಷವಾಗಿ ಗಡಿಭಾಗವಾದ ರಾವಿಹಾಳ್ನಲ್ಲಿ ಈ ಸಾಹಿತ್ಯ ಹಬ್ಬ ನಡೆಯುತ್ತಿದ್ದು, ಅವರ ಅಧ್ಯಕ್ಷತೆಯು ಗ್ರಾಮೀಣ ಭಾಗದ ಸಾಹಿತ್ಯಾಸಕ್ತರಿಗೆ ಹಾಗೂ ಕನ್ನಡಿಗರಿಗೆ ದೊಡ್ಡ ಪ್ರೇರಣೆಯಾಗಲಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಮತ್ತು ಮುಖಂಡರು ಭಾಗವಹಿಸಿದ್ದರು.