ಕನ್ನಡಪ್ರಭ ವಾರ್ತೆ ಹಲಗೂರು
ಪಿ.ಎಂ.ನರೇಂದ್ರಸ್ವಾಮಿ ಅಭಿಮಾನಿಗಳ ಬಳಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ತಾಲೂಕು ಅಧ್ಯಕ್ಷ ಕೆ.ಎಂ.ಮೋಹನ್ ಕುಮಾರ್ ಮಾತನಾಡಿ, ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗ, ತನ್ನ ದೂರದೃಷ್ಟಿ ಆಡಳಿತದ ಮೂಲಕ ದೇಶದ ಆರ್ಥಿಕತೆಯನ್ನು ಅಭಿವೃದ್ಧಿಯತ್ತ ತಂದು ನಿಲ್ಲಿಸಿದ ಕೀರ್ತಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಕುಂತೂರು ಗೋಪಾಲ್ ಮಾತನಾಡಿ, ಡಾ.ಮನಮೋಹನ್ ಸಿಂಗ್ ನಿಧನದಿಂದ ಉತ್ತಮ ಆರ್ಥಿಕ ತಜ್ಞರನ್ನು ಕಳೆದುಕೊಂಡಿದ್ದು, ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ದೇಶದ ಗ್ರಾಮೀಣ ಪ್ರದೇಶದ ಬಡಜನರ ವಲಸೆ ತಪ್ಪಿಸಲು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಕಾಯ್ದೆ ಸೇರಿದಂತೆ ಸೇರಿದಂತೆ ಹಲವು ಜನಪರ ಯೋಜನೆಗಳ ಮೂಲಕ ಮನಮೋಹನ್ ಸಿಂಗ್ ಜನಸಾಮಾನ್ಯರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ ಎಂದು ಸ್ಮರಿಸಿಕೊಂಡರು.ಈ ವೇಳೆ ಮುಖಂಡರಾದ ಶ್ರೀನಿವಾಸಾಚಾರಿ, ಎಸ್.ಸಿ.ಜಗದೀಶ್, ಅಮರ್, ಶಿವನಂಜೇಗೌಡ, ಸೌತೆಕಾಯಿ ಬಾಬು, ಪ್ರಕಾಶ್, ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮಲೆನಾಡು ಗಿಡ್ಡ ಸಂರಕ್ಷಣ ಮತ್ತು ಸಂವರ್ಧನ ಆಶ್ರಯದಲ್ಲಿ ಶ್ರೀಲಕ್ಷ್ಮೀ ಗೋಮಾತಾ ಮಂದಿರ ನೇತೃತ್ವದಲ್ಲಿ ಜ.೧೨ರಂದು ಸಂಜೆ ೪ ಗಂಟೆಗೆ ನಾಗಮಂಗಲ ತಾಲೂಕು ಬಿಂಡಿಗನವಿಲೆಯ ಪ್ರಮುಖ ಬೀದಿಗಳಲ್ಲಿ ನಂದಿಗಳ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಮಂದಿರದ ಸಂಸ್ಥಾಪಕ ಶಶಿಕುಮಾರ್ ಹೇಳಿದರು.ದೇಶಿ ಗೋ-ತಳಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯಾದ್ಯಂತ ನಂದಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ರಥಯಾತ್ರೆಯೂ ಮಂಡ್ಯ ಜಿಲ್ಲೆಯಲ್ಲಿ ಸಂಚರಿಸಿ ನಂತರ ಮೈಸೂರಿಗೆ ತೆರಳಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ವೇಳೆ ಶ್ರೀಲಕ್ಷ್ಮೀ ಗೋಮಾತಾ ಮಂದಿರದಿಂದ ಮಲೆನಾಡು ಗಿಡ್ಡ ಗವ್ಯೋತ್ಪನ್ನ ಸಹಕಾರಿ ಸಂಘವನ್ನು ಪ್ರಾರಂಭಿಸಲಾಗುತ್ತಿದೆ. ರಾಜ್ಯ ಸರ್ಕಾರ ಕೂಡ ಪ್ರಾಥಮಿಕ ಅಥವಾ ಪ್ರೌಢ ಶಾಲಾ ಹಂತದಿಂದ ದೇಸಿ ಹಸುಗಳ ಸಾಕಣೆ ಮತ್ತು ಅದರ ಮಹತ್ವದ ಕುರಿತಂತೆ ಪಠ್ಯ ಪುಸ್ತಕಗಳಲ್ಲಿ ಅಳವಡಿಸುವ ಮೂಲಕ ಮಕ್ಕಳಲ್ಲಿ ದೇಸಿ ಹಸುಗಳ ಸಾಕಣೆ ಬಗ್ಗೆ ಆಸಕ್ತಿ ಮೂಡಿಸಬೇಕು. ದೇಶಿ ತಳಿಗಳ ಉತ್ಪನ್ನಗಳು ಆರೋಗ್ಯ ವೃದ್ಧಿಯ ಜೊತೆಗೆ ಆದಾಯ ಮೂಲ ವೃದ್ಧಿಯನ್ನೂ ಮಾಡುವುದರಿಂದ ದೇಶಿ ತಳಿಯ ಹಸುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು.ಗೋಷ್ಠಿಯಲ್ಲಿ ಮಳವಳ್ಳಿ ಮಂಜುನಾಥ್ ಇದ್ದರು.