₹3 ಕೋಟಿ ವೆಚ್ಚದಲ್ಲಿ ಎಕ್ಕುಂಬಿ ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
ಸರ್ಕಾರದ ಅನುದಾನದ ಅಸಹಕಾರದ ನಡುವೆಯೂ ರಸ್ತೆ ಅಭಿವೃದ್ಧಿಯಂತಹ ಬಹುಬಗೆಯ ಕಾಮಗಾರಿಗಳನ್ನು ಕೈಗೊಂಡು ವಾಹನ ಸವಾರರಿಗೆ ಉಂಟಾಗುತ್ತಿದ್ದ ತೊಂದರೆ ನಿವಾರಿಸಲು ಗಮನ ನೀಡಲಾಗುತ್ತಿದೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮರಾಜ ನಾಯ್ಕ ಹೇಳಿದರು.
ತಾಲೂಕಿನ ಕೆ. ಅಯ್ಯನಹಳ್ಳಿ ಗ್ರಾಮದಲ್ಲಿ ₹3 ಕೋಟಿ ವೆಚ್ಚದ ಎಕ್ಕುಂಬಿ ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ಆಯ್ದ ಭಾಗಗಳಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ರಸ್ತೆ ಅಭಿವೃದ್ಧಿ ಕಾಮಗಾರಿ ನಿಯಮಿತವಾಗಿ ನಡೆಯದ ಕಾರಣಕ್ಕಾಗಿ ಕಳೆದ 3 ನಾಲ್ಕು ವರ್ಷಗಳಿಂದ ರಸ್ತೆಗಳು ಸಂಪೂರ್ಣ ಹಾನಿಯಾಗಿವೆ. ಇವುಗಳನ್ನು ಇದೀಗ ಬರುತ್ತಿರುವ ಅನುದಾನದಲ್ಲಿ ಕೈಗೆತ್ತಿಕೊಂಡು ಉತ್ತಮ ರಸ್ತೆಯನ್ನಾಗಿ ಮಾಡುವತ್ತ ತೊಡಗಿಸಿಕೊಂಡಿದ್ದೇವೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ಕ್ಷೇತ್ರದ ಪ್ರತಿ ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿಗೊಳಿಸುವ ಮೂಲಕ ದುರಸ್ತಿ ಇಲ್ಲದ ರಸ್ತೆಗಳ ಕ್ಷೇತ್ರ ಎಂಬ ಹೆಸರು ಬರುವಂತೆ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಯೋಜನೆ ಹಮ್ಮಿಕೊಂಡಿರುವೆ ಎಂದರು.
ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ, ಎಎಂಎಂ ಮಲ್ಲಿಕಾರ್ಜುನ, ಕೊಟ್ರೇಶ್ ಅಯ್ಯನಹಳ್ಳಿ, ಹರಾಳು ಕೊಟ್ರೇಶ್, ಚಪ್ಪರದಲ್ಲಿ ನಂದೀಶ್, ತಿಮ್ಮಲಾಪುರ ಕೊಟ್ರೇಶ್, ತಾಪಂ ಇಒ ಡಾ. ಆನಂದ ಕುಮಾರ್, ಗ್ರಾಪಂ ಕಾರ್ಯದರ್ಶಿ ರೂಪ, ಗುತ್ತಿಗೆದಾರ ಉಮಾಪತಿ ಮತ್ತಿತರರು ಇದ್ದರು.