ದೇವಸ್ಥಾನದ ರಸ್ತೆಯಲ್ಲಿ ಹರಡಿರುವ ಜಲ್ಲಿಕಲ್ಲು, ಎಂ ಸ್ಯಾಂಡ್ । ಭಕ್ತರ ಸಂಚಾರಕ್ಕೆ ತೊಂದರೆ
ಜಿ. ಸೋಮಶೇಖರ
ಕನ್ನಡಪ್ರಭ ವಾರ್ತೆ ಕೊಟ್ಟೂರುಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕ್ಷೇತ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶಾಸಕರು ಹಮ್ಮಿಕೊಂಡಿರುವ ಯೋಜನೆಯಂತೆ ದೇವಸ್ಥಾನದ ಬಲ ಬದಿ ರಸ್ತೆಯಲ್ಲಿ ಭಕ್ತರಿಗೆ ನೆರಳು ಕಲ್ಪಿಸುವ (ಶೆಲ್ಟರ್) ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಪರಿಣಾಮವಾಗಿ ದೇವಸ್ಥಾನದ ರಸ್ತೆಯಲ್ಲಿ ಹರಡಿರುವ ಜಲ್ಲಿಕಲ್ಲು, ಎಂ ಸ್ಯಾಂಡ್ನಿಂದ ಭಕ್ತರ ಸಂಚಾರಕ್ಕೆ ತೊಂದರೆ ಉಂಟಾಗಿದೆ.
₹83 ಲಕ್ಷ ವೆಚ್ಚದ ಈ ಕಾಮಗಾರಿಯ ನಿರ್ವಹಣೆಯನ್ನು ನಿರ್ಮಿತಿ ಕೇಂದ್ರದವರಿಗೆ ವಹಿಸಲಾಗಿದೆ. ಪ್ರಾರಂಭದಲ್ಲಿ ಕಾಮಗಾರಿಯನ್ನು ವೇಗವಾಗಿ ಮಾಡುವ ಭರವಸೆ ನೀಡಿ ಕಾರ್ಯಕ್ಕೆ ಮುಂದಾದ ನಿರ್ಮಿತಿ ಕೇಂದ್ರದವರು ಒಂದು ಬದಿಯಲ್ಲಿ ಪಿಲ್ಲರ್ ಹಾಕಿ ಅಡ್ಡ ಬೀಮ್ ಹಾಕುವ ಕಾಮಗಾರಿಯನ್ನು 8 ತಿಂಗಳವರೆಗೆ ಕೈಗೊಂಡು ಇದೀಗ ಅರ್ಧಂಬರ್ಧ ಮಾಡಿ ವಿದ್ಯುತ್ ಲೈನ್ ನೆಪ ಹೇಳಿ ಕಾಮಗಾರಿಯನ್ನು ಒಮ್ಮೇಲೆ ಸ್ಥಗಿತಗೊಳಿಸಿದ್ದಾರೆ.
ಜೆಸ್ಕಾಂ ಮತ್ತು ನಿರ್ಮಿತಿ ಕೇಂದ್ರದವರ ಗೊಂದಲದ ಕಾರಣದಿಂದಾಗಿ ಕಾಮಗಾರಿ ಸ್ಥಗಿತಗೊಂಡಿದ್ದು, ಭಕ್ತರು ಮತ್ತು ಇಲ್ಲಿನ ನಿವಾಸಿಗಳಿಗೆ ಬಿಸಿಲು, ಮಳೆಯಿಂದ ರಕ್ಷಣೆಯೇ ಇಲ್ಲದಂತಾಗಿದೆ. ಇದೀಗ ಶ್ರಾವಣ ಮಾಸ ಆರಂಭಗೊಂಡಿದ್ದು, ಅಸಂಖ್ಯಾತ ಭಕ್ತರು ಶ್ರೀ ಸ್ವಾಮಿಯ ದರ್ಶನ ಮತ್ತು ಸೇವೆ ಸಲ್ಲಿಸಲು ಆಗಮಿಸುತ್ತಿದ್ದು, ಕಾಮಗಾರಿ ಸ್ಥಗಿತದಿಂದ ದೇವಸ್ಥಾನಕ್ಕೆ ತೆರಳಲು ಕಿರಿಕಿರಿ ಅನುಭವಿಸುವಂತಾಗಿದೆ.
ಶ್ರಾವಣ ಮಾಸ, ರಥೋತ್ಸವ, ಕಾರ್ತಿಕ ಮಹೋತ್ಸವ ಮತ್ತಿತರ ಪ್ರಮುಖ ವಿಶೇಷಗಳು ಒಂದರ ಮೇಲೆ ಒಂದರಂತೆ ಬರತೊಡಗಿವೆ. ಇದಕ್ಕೆ ಪೂರಕವಾಗಿ ಭಕ್ತರಿಗೆ ನೆರಳು ಕಲ್ಪಿಸುವ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಭಕ್ತರಲ್ಲಿ ಬೇಸರ ತರಿಸಿದೆ. ಸಂಬಂಧಪಟ್ಟವರು ಈಗಲಾದರೂ ಕಾಳಜಿ ವಹಿಸಿ ಕಾಮಗಾರಿ ಪೂರ್ಣಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.