ಧಾರವಾಡ: ಶಿಕ್ಷಣ ಮಂತ್ರಿಗಳು ಮತ್ತು ಶಿಕ್ಷಣ ಕಾರ್ಯದರ್ಶಿಗಳೊಂದಿಗೆ ಜೂನ್ 20 ರಂದು ಸಭೆ ಮಾಡಿ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದರು.
ಸದ್ಯಕ್ಕೆ ಇರುವ ಶೈಕ್ಷಣಿಕ ಸಮಸ್ಯೆಗಳನ್ನು ಜಿಲ್ಲಾ ಅಧ್ಯಕ್ಷ ನಾರಾಯಣ ಭಜಂತ್ರಿ ಮನವಿ ಪತ್ರದ ಮೂಲಕ ವಿವರಿಸಿದರು. ಸಿಆರ್ಪಿ, ಬಿಆರ್ಪಿ, ಇಸಿಓ, ನಿರ್ಧಿಷ್ಟಪಡಿಸಿದ ಹುದ್ದೆಗಳ ವರ್ಗಾವಣೆ ಕೌನ್ಸಿಲಿಂಗ್ನಲ್ಲಿ 2025 ಮೇ 31 ರ ಬದಲಾಗಿ ಜೂನ್ 30ರ ವರೆಗೆ ವಿಸ್ತರಿಸುವುದು. 2024 ಡಿಸೆಂಬರ್ ಗೆ ಇದ್ದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇರುವ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು ಸದ್ಯ ಇರುವ ಮಕ್ಕಳ ಸಂಖ್ಯೆಗೆ ಅನುಗುನವಾಗಿ ಮಾಡುವುದು. ಶಿಕ್ಷಕರಿಗೆ ದಾಖಲೆಗಳ ಹೊರೆಯನ್ನು ಕಡಿಮೆ ಮಾಡಿ, ವರ್ಗಕೋಣೆಯ ಪಾಠ ಬೋಧನೆಗೆ ಹೆಚ್ಚು ಒತ್ತುಕೊಡುವುದು.
ಮೊಟ್ಟೆ, ಬಾಳೆಹಣ್ಣು, ಊಟ, ಕುಡಿಯುವ ನೀರು, ಪುಸ್ತಕ, ಸಮವಸ್ತ್ರ,ವಿತರಣೆ, ದಾಖಲೀಕರಣ ಮುಂತಾದ ಕಾರ್ಯಗಳನ್ನು ಇದ್ದ 8 ಅವಧಿಗಳಲ್ಲಿ ಯಾವ ಅವಧಿಯಲ್ಲಿ ಮಾಡುವುದು ಶಿಕ್ಷಕರಿಗೆ ಸಮಸ್ಯೆಯಾಗಿದೆ. ಮತ್ತು ಸ್ವಚ್ಛತೆ ಗುಣಮಟ್ಟ ಕಾಪಾಡುವುದು ಕಷ್ಟಕರವಾಗಿದೆ. ಪ್ರೌಢಶಾಲಾ ದೈಹಿಕ ಶಿಕ್ಷಕರ ಸಿ ಆಂಡ್ ಆರ್ ತಿದ್ದುಪಡಿ ಮತ್ತು ಶಾಲಾ ಹಾಜರಾತಿಯಲ್ಲಿ ಸೇವಾ ಜೇಷ್ಟತೆ ಪರಿಗಣಿಸುವುದು. ಶಾಲಾಶಿಕ್ಷಣ ಇಲಾಖೆಯಿಂದ ಬಿಡುಗಡೆಯಾಗುವ ಶೈಕ್ಷಣಿಕ ಮಾರ್ಗದರ್ಶಿಯಂತೆ ಶಾಲೆಗಳನ್ನು ನಡೆಸಲು ಒತ್ತು ನೀಡುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಹೊರಟ್ಟಿ ಅವರ ಎದುರು ಇಡಲಾಯಿತು.ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಭೀಮರಾವ್ ಬಶೇಟ್ಟಿ, ಕೋಶಾಧ್ಯಕ್ಷ ಎಸ್.ಎಸ್. ರೂಗಿ, ಉಪಾಧ್ಯಕ್ಷ ಜಯರಾಜ ಗೋಳಸಂಗಿ, ಪಾಂಡುರಂಗ ಅಂಕಲಿ, ಶಾಹಿನಾ ಬೇಗಮ್, ಎನ್.ವಿ. ಕುರವತ್ತಿಮಠ, ಈರಣ್ಣ ಅಂಗಡಿ ನಿಯೋಗದಲ್ಲಿದ್ದರು.