
ಗದಗ: ಗದುಗಿನಲ್ಲಿ ಬರುವ ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಕಾಮನವೆಲ್ತ್ ದೇಶಗಳ ವಾಲಿಬಾಲ್ ಚಾಂಪಿಯನ್ಶಿಪ್ ಪಂದ್ಯಾವಳಿ ಆಯೋಜನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಕಳೆದ 18 ದಿನಗಳ ಕಾಲ ನಡೆದ ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್ ಸೀಜನ್- 2ರ ಕ್ರಿಕೆಟ್ ಪಂದ್ಯಾವಳಿ ಮನರಂಜನೆ ಮಾತ್ರವಲ್ಲ. ಕ್ರಿಕೆಟ್ ಆಟದಲ್ಲಿ ಗದುಗಿನ ಆಟಗಾರರು ಯಾವ ರೀತಿ ನೈಪುಣ್ಯತೆ ಹೊಂದಿದ್ದಾರೆಂದು ತೋರಿಸಿದ್ದೀರಿ. ಒಂದೆಡೆ ಐಪಿಎಲ್ ಪಂದ್ಯಾವಳಿ ಅಬ್ಬರದಿಂದ ನಡೆಯುತ್ತಿದ್ದರೆ, ಗದುಗಿನಲ್ಲಿ ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್ ಪಂದ್ಯಾವಳಿ ನಡೆಯುತ್ತಿದ್ದರೂ ಗದುಗಿನ ಆಟಗಾರರು ಯಾವುದಕ್ಕೂ ಕಡಿಮೆ ಏನಿಲ್ಲ ಎನಿಸುತ್ತಿತ್ತು ಎಂದರು.
ಪಂದ್ಯಾವಳಿಯಲ್ಲಿ ಗದುಗಿನ ಆಟಗಾರರು ಬಹಳ ಉತ್ತಮದರ್ಜೆಯ ಆಟವನ್ನು ಪ್ರದರ್ಶನ ಮಾಡಿದ್ದು, ಖ್ಯಾತ ಕ್ರಿಕೆಟಿಗ ಸುನಿಲ್ ಜೋಶಿ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.2030ರ ವೇಳೆಗೆ ಗದುಗಿನಲ್ಲಿ ರಣಜಿ ಪಂದ್ಯ ನಡೆಯಬೇಕು ಎನ್ನುವ ಸಂಕಲ್ಪ ಮಾಡಿದ್ದು, ಅದನ್ನು ಮತ್ತಷ್ಟು ತೀವ್ರವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದ ಅವರು, ಮುಂದಿನ ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಕಾಮನವೆಲ್ತ್ ದೇಶಗಳ ವಾಲಿಬಾಲ್ ಚಾಂಪಿಯನ್ಶಿಪ್ ನಡೆಸಲು ರಾಷ್ಟ್ರೀಯ ವಾಲಿಬಾಲ್ ಸಂಸ್ಥೆ ಇಚ್ಛಿಸಿದ್ದು, ನಿಮ್ಮೆಲ್ಲರ ಇಚ್ಛಾಶಕ್ತಿಯಿಂದ ನಡೆಯುವಂತಾಗಲಿ ಎಂದು ಹಾರೈಸಿದರು.