ಶಾಸಕ ಪುಟ್ಟರಂಗಶೆಟ್ಟಿ । ಚಂದಕವಾಡಿಯಲ್ಲಿ ಗಾಣಿಗರ ಸಮುದಾಯ ಭವನ ಉದ್ಘಾಟನೆ
ಸಮುದಾಯ ಭವನಗಳು ಆಯಾ ಗ್ರಾಮಗಳ ಅಭಿವೃದ್ಧಿ ಮತ್ತು ಜ್ಞಾನದ ಸಂಕೇತವಾಗಿ ಪ್ರಗತಿಗೆ ಪೂರಕ ಕೆಲಸ ಮಾಡುವ ಕೇಂದ್ರಗಳಾಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ತಾಲೂಕಿನ ಚಂದಕವಾಡಿಯಲ್ಲಿ ಗಾಣಿಗರ ಸಮುದಾಯದ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಂದಕವಾಡಿ ಹೋಬಳಿ ಕೇಂದ್ರವಾಗಿದ್ದು, ಎಲ್ಲ ಸಮುದಾಯವರೂ ಒಗ್ಗಟ್ಟಿನಿಂದ ಸಹೋದರಂತೆ ಬಾಳುತ್ತಿದ್ದಾರೆ. ನನ್ನ ಅನುದಾನದ ಜೊತೆಗೆ ದಿ. ಆರ್. ಧ್ರುವನಾರಾಯಣ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಸೇರಿ ಅನೇಕರ ಅನುದಾನದಡಿ ಬಹಳ ಸುಸಜ್ಜಿತವಾಗಿ ಗಾಣಿಗ ಸಮುದಾಯದವರು ಭವನ ನಿರ್ಮಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಮುದಾಯದ ಭವನ ಸದಾ ಚಟುವಟಿಕೆಯಿಂದ ಕೂಡಿರುವ ಜೊತೆಗೆ ಜ್ಞಾನದ ಸಂಕೇತವಾಗಬೇಕು. ಈ ವ್ಯಾಪ್ತಿಯ ಮಕ್ಕಳಿಗೆ ಪಾಠ, ಪ್ರವಚನ, ಶುಭ ಸಮಾರಂಭಗಳಿಗೆ ಬಳಕೆ, ಕೌಶಲ್ಯ ತರಬೇತಿ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸಭೆಗಳನ್ನು ನಡೆಸುವ ಮೂಲಕ ಭವನವು ಗ್ರಾಮಸ್ಥರ ಹಾಗೂ ಸಮುದಾಯದ ಆಸ್ತಿಯನ್ನಾಗಿಸಿ ಸಾಮಾಜಿಕ ಪ್ರಗತಿ ಹೊಂದಬೇಕು ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
ಸಭೆಯಲ್ಲಿ ಜನಾಂಗದ ಮುಖಂಡರಾಗಿದ್ದ ದಿ.ಕೃಷ್ಣ ಅವರ ಸ್ಮರಣೆ ಮಾಡುವ ಜೊತೆಗೆ ಅವರೂ ಕೂಡ ಭವನ ನಿರ್ಮಿಸಲು ಪ್ರಮುಖ ಕಾರಣೀಭೂತರೆಂದು ಶಾಸಕರು ಸೇರಿ ಗಣ್ಯರು ಗುಣಗಾನ ಮಾಡಿದರು.
ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮುರ್ತಿ, ಚಂದಕವಾಡಿ ಗ್ರಾಪಂ ಅಧ್ಯಕ್ಷ ನಟರಾಜು, ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಅಂಕಪ್ಪ, ಚಾ.ನಗರ ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ಜಗದೀಶ್, ಚಂದಕವಾಡಿ ಎಳುನೀರು ವ್ಯಾಪಾರಿ ರಾಜಣ್ಣ, ಮಹದೇವಶೆಟ್ಟಿ ಚಂದ್ರಕಾಂತ್, ಗೌಡಿಕೆ ಶಿವನಾಂಕಾರಪ್ಪ, ಗೌಡಿಕೆ ರಾಜೇಂದ್ರ, ಬಸವರಾಜನಾಯಕ, ವಿಷಕಂಠನಾಯಕ, ರಾಜಣ್ಣ, ನಾಗರಾಜು, ಶ್ರೀಕಂಠ,ರವಿ, ಪ್ರಸಾದ್, ರಂಗಸ್ವಾಮಿ, ಸಿದ್ದಯ್ಯ, ಶಿವಕುಮಾರ್ ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದರು.