ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೇ, ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಹೆಚ್ಚಿನ ಜ್ಞಾನ ಪಡೆಯುವ ಜತೆಗೆ ಉನ್ನತ ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಶಿಕ್ಷಣದಿಂದ ಮಾತ್ರ ಯಾವುದೇ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಶಿಕ್ಷಕ ಪರಮೇಶ್ ಸಲಹೆ ನೀಡಿದರು.ಪಟ್ಟಣದ ಕನಕ ಭವನದಲ್ಲಿ ತಾಲೂಕು ಕುರುಬ ಸಂಘ ಹಾಗೂ ನೌಕರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಹಿಂದೆ ಪೋಷಕರ ಶ್ರಮ ಹಾಗೂ ತ್ಯಾಗವಿದೆ. ವಿದ್ಯಾರ್ಥಿಗಳಲ್ಲಿ ಉನ್ನತ ಶಿಕ್ಷಣ ಸಂದರ್ಭದಲ್ಲೂ ಕಲಿಕೆಯ ತುಡಿತ ಮತ್ತು ಸಂಯಮ ಅತ್ಯಗತ್ಯವೆಂದರು. ಸಮುದಾಯದ ಏಳಿಗೆಗಾಗಿ ಸಂಘಟಿತ ಹೋರಾಟ ಅಗತ್ಯವಾಗಿದ್ದು, ಉಭಯ ಸಂಘಗಳು ಜಂಟಿಯಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.ಬಿ. ಪಿ. ಮಂಜೇಗೌಡ ಮಾತನಾಡಿ ಜೀವನದಲ್ಲಿ ಕೇವಲ ಹಣ ಮತ್ತು ಅಧಿಕಾರ ಗಳಿಸುವುದು ಮುಖ್ಯವಲ್ಲ, ಮಾನವೀಯ ಮೌಲ್ಯಗಳನ್ನು ಮುಖ್ಯ. ಶೋಷಣೆಯಿಂದ ಮುಕ್ತಿ ಪಡೆಯಲು ಶಿಕ್ಷಣವೇ ಶಕ್ತಿ ಎಂಬುದು ಸಾರ್ವಕಾಲಿಕ ಸತ್ಯ. ವಿದ್ಯಾರ್ಥಿಗಳು ಸಂವಿಧಾನ ಮತ್ತು ಕಾನೂನಿನ ಕನಿಷ್ಠ ಜ್ಞಾನ ಅಗತ್ಯವಾಗಿದೆ. ಕೇವಲ ಸರ್ಕಾರಿ ಉದ್ಯೋಗಕ್ಕೆ ಕಾಯದೇ ಖಾಸಗಿ ಕ್ಷೇತ್ರ ಮತ್ತು ಸ್ವಯಂ ಉದ್ಯೋಗ ಹೊಂದಿರಬೇಕು ಹಾಗೂ ಅಗತ್ಯವಾದ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದರು. ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ನಿ. ಜಿಲ್ಲಾಧಿಕಾರಿ ಪುಟ್ಟಸ್ವಾಮಿ ಮಾತನಾಡಿ, ಪ್ರತಿಭಾ ಪುರಸ್ಕಾರದಿಂದ ಸನ್ಮಾನಿತ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದ ಪಡೆಎಯುವ ಮೂಲಕ ಸಮುದಾಯ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಆಶಿಸಿದರು. ೨೦೨೫-೨೬ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ. ೮೦ಕ್ಕೂ ಹೆಚ್ಚು ಅಂಕ ಪಡೆದ ಸುಮಾರು ೧೭೬ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಿ.ಪಿ.ಮಂಜುನಾಥ್, ಮೋಹನ್, ವಕೀಲ ಪುಟ್ಟೇಗೌಡ, ಮಲ್ಲಪ್ಪನಹಳ್ಳಿ ನವೀನ್, ಶಿಕ್ಷಕ ಕಾಳೇಗೌಡ, ಉಮೇಶ್, ಮಂಜೇಗೌಡ, ಪುಟ್ಟೇಗೌಡ, ರಾಜೇಗೌಡ, ಶ್ರೀಧರ್, ದಶರಥಿ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಸಮುದಾಯದ ಮುಖಂಡರು ಇತರರು ಇದರು.