ಭಾಷೆ ನಾಶವಾದಲ್ಲಿ ಸಮುದಾಯ ಏಳಿಗೆ ಅಸಾಧ್ಯ: ಪ್ರೊ. ಬಿಳಿಮಲೆ

KannadaprabhaNewsNetwork |  
Published : Mar 03, 2025, 01:49 AM IST
 ಶಾಸಕರಿಂದ ಕಾರ್ಯಕ್ರಮ ಉದ್ಘಾಟನೆ,   ಶಾಸಕರಿಂದ ಕಾರ್ಯಕ್ರಮ ಉದ್ಘಾಟನೆ,  ಶಾಸಕರಿಂದ ಕಾರ್ಯಕ್ರಮ ಉದ್ಘಾಟನೆ,   | Kannada Prabha

ಸಾರಾಂಶ

ಭಾಷೆಗಳು ನಾಶವಾದಲ್ಲಿ ಸಮುದಾಯಗಳ ಏಳಿಗೆ ಅಸಾಧ್ಯ ಎಂದು ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಭಾಷೆಗಳು ನಾಶವಾದಲ್ಲಿ ಸಮುದಾಯಗಳ ಏಳಿಗೆ ಅಸಾಧ್ಯ ಎಂದು ಕರ್ನಾಟಕ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕುಶಾಲನಗರ ಗೌಡ ಸಮಾಜ ಮತ್ತು ಅಂಗಸಂಸ್ಥೆಗಳ ಹಾಗೂ ವಿವಿಧ ಗೌಡ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರದಲ್ಲಿ ನಡೆದ ಅರೆ ಭಾಷೆ ಗಡಿನಾಡ ಉತ್ಸವ -2025 ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ತಾಯಿನುಡಿಗಳನ್ನು ಬಳಕೆ ಮಾಡುವ ಮೂಲಕ ಉಳಿಸುವುದರೊಂದಿಗೆ ಅಕಾಡೆಮಿ ಮೂಲಕ ಭಾಷೆಯ ಅಭಿವೃದ್ಧಿಗೆ ಕಾರ್ಯ ಸೂಚಿ ನೀಡುವ ಕೆಲಸವಾಗಬೇಕಾಗಿದೆ ಎಂದರು.

ಪ್ರಸಕ್ತ ಭಾಷೆ, ಸಂಸ್ಕೃತಿ ದಿಕ್ಕಾಪಾಲಾಗಿ ಹೋಗುತ್ತಿದ್ದು, ಜನಗಣತಿ ಮೂಲಕ ತಮ್ಮ ಸಮುದಾಯದ ಜನಸಂಖ್ಯೆ ಮಾಹಿತಿಯನ್ನು ಸರ್ಕಾರಕ್ಕೆ ಲಭಿಸುವಂತೆ ಮಾಡುವುದು, ಮುಖ್ಯ ಭಾಷೆ -ಉಪಭಾಷೆಗಳ ನಡುವೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವುದು, ಈ ಮೂಲಕ ಭಾಷೆಗಳ ಬೆಳವಣಿಗೆ ಸಾಧ್ಯ ಎಂದ ಅವರು ಅಧಿಕಾರದ ಮೂಲಕ ಭಾಷೆಗಳನ್ನು ನಿರ್ಧಾರ ಮಾಡುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಅಕಾಡೆಮಿ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಸಕ್ತ ಕುಶಾಲನಗರದಲ್ಲಿ ಗಡಿನಾಡ ಉತ್ಸವ ನಾಲ್ಕನೇ ಕಾರ್ಯಕ್ರಮವಾಗಿದ್ದು, ಅರೆ ಭಾಷೆ ಉಳಿವಿನ ಬಗ್ಗೆ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸುಳ್ಯದಲ್ಲಿ ಅರೆ ಭಾಷೆ ಸಾಹಿತ್ಯ ಸಮ್ಮೇಳನ ನಡೆಯುವ ಬಗ್ಗೆ ಮಾಹಿತಿ ಒದಗಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಮಡಿಕೇರಿ ಶಾಸಕ ಡಾ ಮಂತರ್ ಗೌಡ ಮಾತನಾಡಿ, ಭಾಷೆ, ಸಂಸ್ಕೃತಿ ಆಚಾರ ವಿಚಾರ ಉಳಿಸಿ ಬೆಳೆಸುವುದು ಪೋಷಕರ ಆದ್ಯ ಕರ್ತವ್ಯವಾಗಿದೆ. ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಅಕಾಡೆಮಿ ವತಿಯಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಭಾಷಾ ಜಾಗೃತಿ ಮೂಡಿಸಬಹುದು ಎಂದು ಸಲಹೆ ನೀಡಿದರು.

ಮಾಜಿ ಸಭಾಪತಿ ಕೆ ಜಿ ಬೋಪಯ್ಯ ಮಾತನಾಡಿ, ಮಕ್ಕಳಿಗೆ ಭಾಷೆಯ ಬಗ್ಗೆ ಆಚಾರ ವಿಚಾರ ಸಂಸ್ಕೃತಿ ಉಳಿಸುವ ಬಗ್ಗೆ ಪೋಷಕರು ತಿಳಿಸುವಂತೆ ಆಗಬೇಕು. ಅಕಾಡೆಮಿ ಮೂಲಕ ಸಂಸ್ಕೃತಿ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಆಗಬೇಕು ಎಂದರು

ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಿನ್ನಸ್ವಾಮಿ, ಸದಸ್ಯ ಸಂದೀಪ್ ಪೂಳಕಂಡ, ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ , ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ,ಆಲೂರು ಸಿದ್ದಾಪುರದ ದೇವಾಯೀರ ಗಿರೀಶ್, ಶುಂಠಿಕೊಪ್ಪ ಸಮಾಜದ ಕುಂಜಿಲನ ಮಂಜುನಾಥ್, ಗುಡ್ಡೆ ಹೊಸೂರು ಗೌಡ ಸಮಾಜ ಅಧ್ಯಕ್ಷ ಗುಡ್ಡೆಮನೆ ವಿಶುಕುಮಾರ್, ನಂಜರಾಯ ಪಟ್ಟಣದ ಕೆಮ್ಮಾರನ ಉತ್ತಯ್ಯ ಚೆಟ್ಟಳ್ಳಿ ಸಮಾಜದ ರಾಘವಯ್ಯ ಐಯ್ಯಂಡ್ರ, ಚಿಕ್ಕತ್ತೂರು ಸಮಾಜದ ಚೆರಿಯ ಮನೆ ಮಂದಪ್ಪ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ನವೀನ ಅಂಬೆಕ್ಕಲ್ ಮತ್ತಿತರರು ಇದ್ದರು

ಕಾರ್ಯಕ್ರಮಕ್ಕೂ ಮುನ್ನ ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಪ್ರತಿಮೆ ಬಳಿ ಹೊರಟ ಮೆರವಣಿಗೆಗೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಚಾಲನೆ ನೀಡಿದರು.

ಅಕಾಡೆಮಿ ಸದಸ್ಯ ಸಂಚಾಲಕರಾದ ಪೊನ್ನಚ್ಚನ ಮೋಹನ್ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''